ಬೆಳಗಾವಿ: ಪಾರವಾಡ ಗ್ರಾಮ ಪಂಚಾಯಿತಿ ಹಿಂದಿನ ಪಿಡಿಒ ವೀರೇಶ ಸಜ್ಜನ ಅವರ ಅವಧಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ವರದಿ ತರಿಸಿಕೊಂಡು ಕ್ರಮ ಕೈಗೊಳ್ಳಲಾಗುವುದು ಪಂಚಾಯತ್ ರಾಜ ಇಲಾಖೆಯ ಮುಖ್ಯ ಕಾರ್ಯದರ್ಶಿ ಡಿ ರಂದೀಪ್ ಹೇಳಿದರು.
ಶುಕ್ರವಾರ ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಪ್ರಜಾ ನೆರಳು ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಪಾರವಾಡ ಗ್ರಾಪಂ ಅವ್ಯವಹಾರ ಆರೋಪಗಳ ಬಗ್ಗೆ ಜಿಲ್ಲಾ ಮಟ್ಟದಲ್ಲಿ ವರದಿ ತರಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ತಿಂಗಳಿಗೊಮ್ಮೆ ಸಚಿವರೊಂದಿಗೆ ನಡೆಯುವ ಸಭೆಯಲ್ಲಿ ಕೂಡ ಈ ವಿಚಾರವನ್ನು ಪ್ರಸ್ತಾಪಿಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಕ್ರಮ ನಿಶ್ಚಿತ: ಉಪ ಕಾರ್ಯದರ್ಶಿ ಅಡವಿಮಠ (ಅಭಿವೃದ್ಧಿ)
ಪಾರವಾಡ ಗ್ರಾಪಂ ನಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ವಿಚಾರದ ಬಗ್ಗೆ ಮಾತನಾಡಿದ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಅಡವಿಮಠ, ಈ ವಿಚಾರದಲ್ಲಿ ನಿಶ್ಚಿತವಾಗಿ ಕ್ರಮ ಕೈಗೊಳ್ಳಲಾಗುವುದು. ಸಂಬಂಧಪಟ್ಟ ಖಾನಾಪುರ ತಾಲೂಕ ಪಂಚಾಯಿತಿ ಇಒ ಅವರಿಗೆ ವರದಿ ನೀಡುವಂತೆ ನೋಟಿಸ್ ನೀಡಲಾಗಿದೆ. ಅಧಿವೇಶನ ಮುಗಿದ ನಂತರ ಮತ್ತು ಆ ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಸತತ ವರದಿ ಪ್ರಕಟಿಸಿದ್ದ ಪ್ರಜಾ ನೆರಳು:
ಈ ಹಿಂದೆ ಅಧಿವೇಶನ ನಡೆಯುತ್ತಿದ್ದ ದಿನಗಳಲ್ಲಿ ಪಾರವಾಡ ಗ್ರಾಪಂನಲ್ಲಿ ನಡೆಯುತ್ತಿದೆ ಎನ್ನಲಾದ ಅವ್ಯವಹಾರಗಳ ಬಗ್ಗೆ ಪ್ರಜಾ ನೆರಳು ದಿನ ಪತ್ರಿಕೆ ಸತತವಾಗಿ ವರದಿ ಪ್ರಕಟಿಸಿತ್ತು. ಈ ವಿಷಯವನ್ನು ಪ್ರಸ್ತಾಪಿಸಿದ ಅಡವಿಮಠ ಅವರು, ಪತ್ರಿಕೆಯ ಈ ರೀತಿಯ ಕಣ್ತೆರೆಸುವ ವರದಿಗಳಿಂದ ನಮಗೆ ಅಗತ್ಯ ಮಾಹಿತಿ ಸಿಗುತ್ತಿದೆ ಎಂದು ಶ್ಲಾಘಿಸಿದರು.














