ಬೆಂಗಳೂರು: ಜೂನ್ ಅಂತ್ಯದಲ್ಲಿ ನಡೆಯಲಿರುವ ಡಿ.ಕೆ ಶಿವಕುಮಾರ ನೇತೃತ್ವದ ಸರ್ಕಾರದ ಸಂಪುಟ ವಿಸ್ತರಣೆಯ ವೇಳೆ ಮುಸ್ಲಿಂ ಸಮುದಾಯದ ಕನಿಷ್ಠ ನಾಲ್ಕು ಶಾಸಕರಿಗೆ ಸಚಿವ ಸ್ಥಾನ ನೀಡುವ ಘೋಷಣೆ ಮಾಡಬೇಕು, ಅದರಲ್ಲೂ ವಿದ್ಯಾವಂತ ಹೊಸ ಮುಖಗಳಿಗೆ ಅವಕಾಶ ನೀಡಬೇಕು ಎಂದು ರಾಜ್ಯ ಐಕ್ಯತಾ ಒಕ್ಕೂಟ ಒತ್ತಾಯಿಸಿದೆ.
ಈ ಕುರಿತು ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಒಕ್ಕೂಟದ ರಾಜ್ಯಾಧ್ಯಕ್ಷ ಮುಜಾಹಿದ್ ಅಲಿಬಾಬ ಅವರು, ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದಲ್ಲಿ ನಮ್ಮ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಅಷ್ಟು ಆವಕಾಶ ನೀಡಿರಲ್ಲಿಲ್ಲ. ಆದರೆ ಡಿ.ಕೆ ಶಿವಕುಮಾರ್ ತಮ್ಮ ಪದಗ್ರಹಣ ಸಮಾರಂಭದಲ್ಲಿಯೇ ಕರಾವಳಿ ಭಾಗದ ಹಿರಿಯ ಮುಖಂಡ ಯು. ಟಿ ಖಾದರ್ ಅವರಿಗೆ ಅವಕಾಶ ನೀಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ನೀಡಿರುವುದು ಸಂತಸ ತಂದಿದೆ. ಮುಂದುವರೆದು ಸಚಿವ ಸಂಪುಟ ವಿಸ್ತರಣೆಯಲ್ಲಿ ಇನ್ನೂ ನಾಲ್ಕು ಜನ ಮುಸ್ಲಿಮರಿಗೆ ಸಚಿವ ಸ್ಥಾನ ನೀಡಿ ಸಮುದಾಯದ ಋಣ ತೀರಿಸಬೇಕು ಎಂದು ಆಗ್ರಹಿಸಿದರು.
ಮುಂಬೈ ಕರ್ನಾಟಕ ಭಾಗದಿಂದ ವಿಧಾನ ಪರಿಷತ್ ಸಚೇತಕ ಹಿರಿಯ ಕಾಂಗ್ರೆಸ್ ಮುಖಂಡ ಸಲೀಂ ಅಹಮದ್, ಹೈದರಾಬಾದ್ ಕರ್ನಾಟಕದಿಂದ ಮಾಜಿ ಸಚಿವ ಖಮರುಲ್ ಇಸ್ಲಾಂ ಅವರ ಪತ್ನಿ ಖನಿಸಾ ಬೇಗಂ, ಬೆಂಗಳೂರಿನಿಂದ ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್, ಇನ್ನು ಉಳಿದ ಒಂದು ಸ್ಥಾನಕ್ಕೆ ಹೊಸ ಮುಖವನ್ನು ಆಯ್ಕೆ ಮಾಡಬೇಕು. ಸುಮಾರು 8 ವರ್ಷಗಳ ಕಾಲ ಜಮೀರ್ ಅಹಮದ್ ಸಚಿವರಾಗಿ ಈಗಾಗಲೇ ಕಾರ್ಯನಿರ್ವಹಿಸಿದ್ದು, ಅವರು ಹೊಸಬರಿಗೆ ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.
ಜಮೀರ್ ಅವರನ್ನು ಸಚಿವರನ್ನಾಗಿ ಮಾಡುವಂತೆ ಅವರ ಬೆಂಬಲಿಗರು ನಗರದ ವಿವಿಧಡೆ ಪ್ರತಿಭಟನೆಯನ್ನು ನಡೆಸುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ. ಈ ಪ್ರತಿಭಟನೆಗಳು ಅವರ ಮುಂದಿನ ರಾಜಕೀಯ ಭವಿಷ್ಯಕ್ಕೆ ಕೂಡ ಕುತ್ತಾಗುವ ಸಾಧ್ಯತೆಗಳಿವೆ. ಇದನ್ನು ಮನಗಂಡು ಅವರೇ ಸೂಕ್ತ ತೀರ್ಮಾನವನ್ನು ತೆಗೆದುಕೊಂಡರೆ ಒಳಿತು ಎಂದು ಅಭಿಪ್ರಾಯಸಿದರು.
ಹಿಂದಿನ ಬಿ.ಜೆ.ಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ಹಿಜಾಬ್ ನಿಷೇಧ, ಆಝಾನ್ ನಿಯಂತ್ರಣ, ಹಲಾಲ್ ಕಟ್ ಕುರಿತ ಭಿನ್ನಾಭಿಪ್ರಾಯ, ಹಿಂದೂ ದೇವಸ್ಥಾನಗಳಲ್ಲಿ ಮುಸ್ಲಿಮರಿಗೆ ಅವಕಾಶ ನಿರಾಕರಣೆ ಸೇರಿದಂತೆ ಹತ್ತು ಹಲವು ಮುಸ್ಲಿಂ ವಿರೋಧಿ ಧೋರಣೆಗಳನ್ನು ತೆಗೆದು ಹಾಕುವುದಾಗಿ ಕಾಂಗ್ರೆಸ್ ಸರ್ಕಾರ ಆಶ್ವಾಸನೆ ನೀಡಿತ್ತು. ಆದರೆ ಹಿಂದಿನ ಮೂರು ವರ್ಷಗಳ ಅವಧಿಯಲ್ಲಿ ಅಷ್ಟಾಗಿ ಇವುಗಳ ಕುರಿತು ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲು ಸರ್ಕಾರಕ್ಕೆ ಆಗಿಲ್ಲ. ಈಗ ಮೂಲ ಕಾಂಗ್ರೆಸ್ಸಿಗರಾದ ಡಿ ಕೆ ಶಿವಕುಮಾರ್ ಮುಖ್ಯಮಂತ್ರಿಗಳಾಗಿದ್ದು, ಇವಕ್ಕೆಲ್ಲ ತಾರ್ಕಿಕ ನಿರ್ಧಾರಗಳನ್ನು ಕೈಗೊಳ್ಳುವ ವಿಶ್ವಾಸವಿದೆ ಎಂದು ಮುಜಾಹಿದ್ ಅಲಿಬಾಬ ತಿಳಿಸಿದರು.














