ಬೆಂಗಳೂರು: ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು, ವಿರೋಧಿ ನೀತಿಗಳನ್ನು ಕೈಬಿಡಲು ಆಗ್ರಹಿಸಿ ಭಾರತೀಯ ಮಜ್ದೂರ್ ಸಂಘ ರಾಜ್ಯದ ಎಲ್ಲಾ ಯೂನಿಯನ್ ಮೂಲಕ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆಗೆ ಕರೆ ನೀಡಿದ್ದು. ಈ ಹಿನ್ನೆಲೆಯಲ್ಲಿ ಸೋಮವಾರ ಬೆಂಗಳೂರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕೂಡ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ರಾಜ್ಯಾಧ್ಯಕ್ಷ ಎನ್.ಕೆ.ಪ್ರಕಾಶ್ ಮಾದ್ಯಮಗಳ ಜೊತೆ ಮಾತನಾಡಿ, ರಾಜ್ಯ ಸರ್ಕಾರ ಮೇ ತಿಂಗಳಿನಲ್ಲಿ ಹೊರಡಿಸಿರುವ ಕನಿಷ್ಠ ವೇತನ ಅಧಿಸೂಚನೆಯನ್ನು ಹಿಂಪಡೆಯದೇ ತಕ್ಷಣ ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು. ಇ.ಎಸ್.ಐ ವ್ಯಾಪ್ತಿಯ ಮಿತಿಯನ್ನು 42 ಸಾವಿರ ರೂ ಗೆ ಹೆಚ್ಚಿಸಬೇಕು. ಹೆಚ್ಚು ಕಾರ್ಮಿಕರುಗಳಿಗೆ ಈ ಸೌಲಭ್ಯಗಳು ದೊರಕುವಂತಾಗಬೇಕು ಎಂದು ಆಗ್ರಹಿಸಿದರು.
ಇ.ಪಿ.ಎಫ್ ವಂತಿಗೆ ಮಿತಿಯನ್ನು ರೂ 30 ಸಾವಿರ ರೂ ಗೆ ಹೆಚ್ಚಿಸಬೇಕು, ಇ.ಪಿ.ಎಫ್ ಹೆಚ್ಚುವರಿ ಪಿಂಚಣಿ ಯನ್ನು ಎಲ್ಲಾ ವಿಭಾಗದ ಕಾರ್ಮಿಕರಿಗೂ ಜರಿಗೊಳಿಸಬೇಕು. ಉಪಧನವನ್ನು 15 ದಿನದಿಂದ ಒಂದು ತಿಂಗಳಿಗೆ ಹೆಚ್ಚಿಸಬೇಕು ಮತ್ತು ಅದರ ಮಿತಿಯನ್ನು 20 ಲಕ್ಷದಿಂದ 40 ಲಕ್ಷಕ್ಕೆ ಹೆಚ್ಚಿಸಬೇಕು. ಬೋನಸ್ ಮಿತಿಯನ್ನು 7 ಸಾವಿರದಿಂದ 18 ಸಾವಿರಕ್ಕೆ ಹೆಚ್ಚಿಸಬೇಕು. ರಾಷ್ಟ್ರೀಯ ಆರೋಗ್ಯ ಅಭಿಯಾನ, ಅಂಗನವಾಡಿ, ಆಶಾ ಮತ್ತು ಬಿಸಿ ಊಟದ ಕಾರ್ಮಿಕರ ಮಾಸಿಕ ಗೌರವಧನ ಹೆಚ್ಚಳ ಮಾಡಬೇಕು ಎಂದರು.
ಬ್ಯಾಂಕಿಂಗ್ ಉದ್ಯಮದಲ್ಲಿ ವಾರಕ್ಕೆ ಐದು ದಿನಗಳ ಕೆಲಸದ ಪದ್ಧತಿಯನ್ನು ಜಾರಿಗೊಳಿಸಬೇಕು. ಅಂಗನವಾಡಿ ಆಶಾ ಮತ್ತು ಬಿಸಿ ಊಟದ ಕಾರ್ಮಿಕರನ್ನು ಖಾಯಂಗೊಳಿಸಬೇಕು. ರಾಜ್ಯದ ಆರೋಗ್ಯ ಇಲಾಖೆಯ ಒಳ ಮತ್ತು ಹೊರ ಗುತ್ತಿಗೆ ನೌಕರರಿಗೆ ಅವರ ಹುದ್ದೆಗಳ ಮಂಜೂರಾತಿ ಪಡೆದು ಅವರ ಸೇವೆಯ ಆಧಾರದ ಮೇಲೆ ಖಾಯಂಗೊಳಿಸಬೇಕು. ಕಟ್ಟಡ ಕಾರ್ಮಿಕ ಮಂಡಳಿಯಲ್ಲಿನ ಭ್ರಷ್ಟಾಚಾರವನ್ನು ನಿಲ್ಲಿಸಿ ತನಿಖೆ ಮಾಡಬೇಕು ಎಂದು ಎನ್.ಕೆ.ಪ್ರಕಾಶ್ ಒತ್ತಾಯಿಸಿದರು.
ಉಪಾಧ್ಯಕ್ಷ ವೆಂಕಟೇಶ್ ಹೆಚ್. ಎಂ, ರಾಜ್ಯ ಕಾರ್ಯದರ್ಶಿಗಳಾದ ಫಣೀಶ್, ಲಕ್ಷ್ಮಿ, ಜಿಲ್ಲಾಧ್ಯಕ್ಷ ಸುಬ್ರಮಣಿ ಮತ್ತಿತರರು ಹಾಜರಿದ್ದರು.














