ಬೆಂಗಳೂರು: ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಹಿರಿಯ ರಾಜಕಾರಣಿ ಹಾಗೂ ಮಾದಿಗ ಸಮುದಾಯದ ಮುಖಂಡ ಕೆ.ಹೆಚ್. ಮುನಿಯಪ್ಪರವರಿಗೆ ಉಪಮುಖ್ಯಮಂತ್ರಿ ಸ್ಥಾನ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಖಾತೆಯನ್ನು ನೀಡಬೇಕು ಎಂದು ಆರ್ಪಿಐ(ಬಿ) ರಾಷ್ಟ್ರೀಯ ಅಧ್ಯಕ್ಷ ಹಾಗೂ ಡಿಎಸ್ಎಸ್ ರಾಜ್ಯಾಧ್ಯಕ್ಷ ಡಾ. ಎನ್. ಮೂರ್ತಿ ಒತ್ತಾಯಿಸಿದರು.
ಗುರುವಾರ ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ರಾಜ್ಯದ ನೂತನ ಸರ್ಕಾರ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಅವರ ಸಚಿವ ಸಂಪುಟಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಮಾದಿಗೆ ಸಮುದಾಯದ ಹಿರಿಯ ರಾಜಕಾರಣಿ, 7 ಬಾರಿ ಸಂಸದ, 2 ಬಾರಿ ಕೇಂದ್ರ ಸಚಿವ, ಹಲವು ಬಾರಿ ರಾಜ್ಯ ಸಚಿವ ಸಂಪುಟದಲ್ಲಿ ಸಚಿವರಾಗಿ ಪ್ರಾಮಾಣೀಕ ಸೇವೆ ಸಲ್ಲಿಸಿರುವ ಕೆ.ಹೆಚ್.ಮುನಿಯಪ್ಪ ನವರಿಗೆ ಉಪಮುಖ್ಯಮಂತ್ರಿ ಸ್ಥಾನದ ಜತೆಗೆ ಸಮಾಜ ಕಲ್ಯಾಣ ಇಲಾಖೆಯ ಸಚಿವರನ್ನಾಗಿ ನೇಮಿಸಬೇಕು. ಇದು ಮಾದಿಗ ಸಂಘಟನೆಗಳ ಒಕ್ಕೂಟದ ಆಗ್ರಹವಾಗಿದೆ ಎಂದರು.
ರಾಜ್ಯದಲ್ಲಿ 200ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಪರಿಶಿಷ್ಟ ಜಾತಿಯ ಮಾದಿಗರು ಬಹುಸಂಖ್ಯಾತರು. ಇವರು ತೀರ ಹಿಂದುಳಿದವರು 75 ವರ್ಷಗಳಿಂದ ಆಡಳಿತ ಮಾಡಿದ ಸರ್ಕಾರಗಳು ಪರಿಶಿಷ್ಟರಲ್ಲಿ ಬಹುಸಂಖ್ಯಾತರಾದ ಮಾದಿಗರಿಗೆ ಹಾಗೂ 59 ಅಲೆಮಾರಿ ಸಮುದಾಯಕ್ಕೆ ಸರಿಯಾದ ಮೀಸಲಾತಿ ಸಾಮಾಜಿಕ ನ್ಯಾಯ ಒದಗಿಸಲು ವಿಫಲವಾಗಿದೆ. ಬಿಜೆಪಿ ಆಡಳಿತ ಸೇರಿದಂತೆ ಕಳೆದ 13 ವರ್ಷಗಳಿಂದ ಮಾದಿಗ ಮತ್ತು 59 ಅಲೆಮಾರಿ ಸಮುದಾಯಗಳು ಸಮಾಜ ಕಲ್ಯಾಣ ಇಲಾಖೆಯಿಂದ ವಂಚಿತರಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗಿಲ್ಲ. ಆದ್ದರಿಂದ ಸಮಾಜ ಕಲ್ಯಾಣ ಸಚಿವ ಸ್ಥಾನವನ್ನು ಮಾದಿಗ ಸಮುದಾಯದ ಸಚಿವರಿಗೆ ನೀಡಿ ಈ ಸಮುದಾಯದ ಅಭಿವೃದ್ಧಿಗೆ ಅನುಕೂಲಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಉಳಿದಂತೆ ಮಾದಿಗ ಸಮುದಾಯದ ಹಿರಿಯ ರಾಜಕೀಯ ಮುತ್ಸದ್ದಿ ಆರ್.ಬಿ.ತಿಮ್ಮಪುರ್ರವರನ್ನು ಸಚಿವರನ್ನಾಗಿ ಮಾಡಿ ಪ್ರಬಲ ಖಾತೆ ನೀಡಬೇಕು. ರಾಜ್ಯ ಸಚಿವ ಸಂಪುಟದಲ್ಲಿ ಮಾದಿಗ ಸಮುದಾಯಕ್ಕೆ ಒಟ್ಟು 3 ಸಚಿವ ಸ್ಥಾನ ನೀಡಿ ಸಂವಿಧಾನಾತ್ಮಕ ಪ್ರಾತಿನಿಧ್ಯ ಕಲ್ಪಿಸಿ ಸಾಮಾಜಿಕ ನ್ಯಾಯ ಪರಿಕಲ್ಪನೆಗೆ ಬೆಲೆ ನೀಡಬೇಕು. ಕಾಂಗ್ರೆಸ್ ಪಕ್ಷದಲ್ಲಿ ದುಡಿದ ಮಾದಿಗ ಹಾಗೂ ಅಲೆಮಾರಿ ಕಾರ್ಯಕರ್ತರಿಗೆ ನಿಗಮ ಮಂಡಳಿಗಳಲ್ಲಿ ಅಧ್ಯಕ್ಷ ಸ್ಥಾನ ನೀಡಿ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಅಲೆಮಾರಿ ಸಮುದಾಯಕ್ಕೆ ಪ್ರತ್ಯೇಕ ಮೊದಲ ಪ್ರಾತಿನಿಧ್ಯದ ಒಳಮೀಸಲಾತಿ ನೀಡಬೇಕು ಹಾಗೂ ಅಲೆಮಾರಿ ಸಮೂದಾಯದ ಸಮಗ್ರ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮಮಂಡಳಿ ಸ್ಥಾಪಿಸಿ ಈ ಸಮಾಜದವರನ್ನೇ ಅಧ್ಯಕ್ಷರು ಹಾಗೂ ಸದಸ್ಯನ್ನರಾಗಿ ನೇಮಿಸಬೇಕು. ರಾಜ್ಯದ 200 ಕ್ಷೇತ್ರಗಳಲ್ಲಿ ಬಹುಸಂಖ್ಯಾತರಾದ ಮಾದಿಗ ಸಮುದಾಯವನ್ನು ಕಡೆಗಣಿಸಿ ನಿರ್ಲಕ್ಷಿಸಿದ್ದರೆ ಮುಂದಿನ 2028ರ ವಿಧಾನಸಭಾ ಚುನಾವಣೆ ಹಾಗೂ ಜಿ.ಬಿ.ಎ ಇತರೆ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಸಮುದಾಯ ಪಣ ತೊಡಬೇಕಾಗುತ್ತದೆ. ಅಲ್ಲದೆ ಈ ಎಲ್ಲಾ ಹಕ್ಕೋತ್ತಾಯಗಳು ಈಡೇರುವವರೆಗೂ ರಾಜ್ಯಾದ್ಯಂತ ಜನಾಂದೋಲನ ಹೋರಾಟ ನಡೆಸಲು ಮಾದಿಗ ಸಂಘಟನೆಗಳ ಒಕ್ಕೂಟ ತೀರ್ಮಾನ ಕೈಗೊಂಡಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾದಿಗ ಸಂಘಟನೆಗಳ ಒಕ್ಕೂಟದ ಮುಖಂಡರುಗಳಾದ ಶಂಕರಪ್ಪ, ಕೇಶವಮೂರ್ತಿ, ಡಾ.ಭೀಮರಾಜ್, ನಾರಾಯಣಸ್ವಾಮಿ, ಕದ್ರೇಶ್ ಕೆ.ಎಂ., ಹುಸೇನಪ್ಪ, ದೇವರಾಜ್ ಕೈವಾರ, ಬಿ.ಆರ್.ಮುನಿರಾಜು, ಜೆ.ಸಿ.ಪ್ರಕಾಶ್, ಲಿಂಗರಾಜು, ಕೆ.ಆರ್.ದೇವರಾಜ್, ರಮೇಶ್, ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.














