ಬೆಂಗಳೂರು: ಕರ್ನಾಟಕ ರಾಜ್ಯ ಪತ್ತಿನ ಸಹಕಾರ ಸಂಘಗಳ ಮಹಾಮಂಡಳ ಬೆಂಗಳೂರು ಇದರ ಮಾಜಿ ಅಧ್ಯಕ್ಷರುಗಳಾದ ಕೆ.ಲಲಿತಾ ಜಿ.ಟಿ.ದೇವೇಗೌಡ, ಸಿ.ಎಂ.ಮಾರೇಗೌಡ, ವಿ.ರಾಜುರವರ ಅವಧಿಯಲ್ಲಿ ನಡೆದಿರುವ ರೂ 24 ಕೋಟಿ 75 ಲಕ್ಷ ಅವ್ಯವಹಾರದ ಬಗ್ಗೆ ಸೂಕ್ತ ದಾಖಲೆಗಳಿದ್ದರೂ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗಿಲ್ಲ ಎಂದು ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ಅಧ್ಯಕ್ಷ ಎಸ್.ಚಂದ್ರಶೇಖರ್ ಆರೋಪಿಸಿದರು.
ಗುರುವಾರ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಪತ್ತಿನ ಸಹಕಾರ ಸಂಘಗಳ ಮಹಮಂಡಳ ನಿಯಮಿತವನ್ನು ನಿವೃತ್ತ ಐ.ಎ.ಎಸ್.ಅಧಿಕಾರಿ ಲಕ್ಕೇಗೌಡರು ಸ್ಥಾಪನೆ ಮಾಡಿದರು. ಇಲ್ಲಿ ಸರಿ ಸುಮಾರು 3000 ಪತ್ತಿನ ಸಹಕಾರ ಸಂಘಗಳ ಸದಸ್ಯತ್ವ ಹೊಂದಿದ್ದಾರೆ. ಸದಸ್ಯರು 50 ಸಾವಿರ ಠೇವಣಿ ಇಟ್ಟು ಅದರಿಂದ ಬರುವ ಬಡ್ಡಿ ಹಣದಲ್ಲಿ ಸಂಘವನ್ನು ಮುನ್ನೆಡೆಸುತ್ತಿರುತ್ತಾರೆ, ಇ-ಸ್ಟ್ಯಾಪಿಂಗ್ ಪೇಪರ್ ವ್ಯವಹಾರ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಮುಖ್ಯವಾಗಿ ಮಾಜಿ ಸಚಿವ ಜಿ.ಟಿ.ದೇವೇಗೌಡರ ಪತ್ನಿ ಕೆ.ಲಲಿತಾ ಜಿ.ಟಿ.ದೇವೇಗೌಡ, ಸಿ.ಎಂ.ಮಾರೇಗೌಡ, ವಿ.ರಾಜುರವರ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅವ್ಯವಹಾರವಾಗಿದೆ ಎಂದರು.
ಈ ಬಗ್ಗೆ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಸಂಬಂಧ ಮುಖ್ಯಮಂತ್ರಿಗಳಿಗೆ ದೂರು ನೀಡಲಾಗಿದೆ. ಈ ಹಿನ್ನಲೆಯಲ್ಲಿ ಸಿಐಡಿ ಇಲಾಖೆ ಅರೋಪ ಪಟ್ಟಿ ತಯಾರಿಸಿ ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಿ ಇವರುಗಳ ಮೇಲೆ ಕಾನೂನು ಚೌಕಟ್ಟಿನಲ್ಲಿ ದೂರು ದಾಖಲಿಸಿಕೊಳ್ಳಬೇಕು. ಪತ್ತಿನ ಸಹಕಾರ ದುರುಪಯೋಗವಾಗಿರುವ ಹಣವನ್ನು ವಸೂಲಾತಿ ಮಾಡಿ ಸಹಕಾರಿಗಳಿಗೆ ನ್ಯಾಯ ದೊರಕಿಸಿಕೊಡಬೇಕು. ಈ ಹಣ ವಾಪಸ್ಸು ಬರುವವರಗೆ ನಮ್ಮ ಹೋರಾಟ ನಿಲ್ಲದು ಎಂದು ಹೇಳಿದರು.
ಅಕ್ರಮವಾಗಿರುವ ಬಗ್ಗೆ ರಾಜ್ಯ ಸಹಕಾರ ಸಂಘಗಳ ನಿಬಂಧಕರು, ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಯಡಿ ತನಿಖೆಗೆ ಆದೇಶಿಸಲಾಗಿ, 2016ರ ಏಪ್ರಿಲ್ 1ರಿಂದ 2024ರ ಮಾರ್ಚ್ 31ರ ವರೆಗೂ ಮರು ಲೆಕ್ಕಪರಿಶೋಧನೆ ಮಾಡಿದಾಗ ಅಕ್ರಮ ಮತ್ತೇ ಬಯಲಿಗೆ ಬಂದಿದೆ. ಕೆ.ಲಲಿತಾ ಜಿ.ಟಿ ದೇವೇಗೌಡರ ಅವಧಿಯಲ್ಲಿ 12.77 ಕೋಟಿ ರೂ.ಗಳು, ಸಿ.ಎಂ. ಮಾರೇಗೌಡರ ಅವಧಿಯಲ್ಲಿ 8.78 ಕೋಟಿ ರೂ.ಗಳು, ವಿ. ರಾಜು ಅವಧಿಯಲ್ಲಿ 14.85 ಲಕ್ಷ ರೂ.ಗಳು ಹಾಗೂ ನಾರಾಯಣಗೌಡ, ಕೆ.ಎನ್. ಗುರುಪ್ರಸಾದ್ ಮತ್ತು ಆಶಾಲತಾ ಅವರುಗಳ ಅವಧಿಯಲ್ಲಿ 2.04 ಕೋಟಿ ಅವ್ಯವಹಾರ ಆಗಿದೆ ಎಂದು ಎಸ್.ಚಂದ್ರಶೇಖರ್ ವಿವರಿಸಿದರು.
ಈ ವೇಳೆ ಜನತಾ ಬಜಾರ್ ನಿರ್ದೇಶಕ ಜಿ. ಮಂಜುನಾಥ್, ಅಧ್ಯಕ್ಷ ವಿ.ಎಸ್ ರಮೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಮಂಜುನಾಥ್, ಮುಖಂಡ ನಿರಂಜನ್ ಬಾಬು ಇದ್ದರು.














