ಬೆಂಗಳೂರು: ಕಂದಾಯ, ಗೃಹ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಅಧಿಕಾರಿಗಳು ದಲಿತ ವಿರೋಧಿ ನೀತಿಗಳನ್ನು ಅನುಸರಿಸುತ್ತಿದ್ದು, ಸತತ ಅನ್ಯಾಯವೆಸಗುವುದನ್ನು ಕಾಯಕವಾಗಿಸಿಕೊಂಡಿದ್ದಾರೆ ಎಂದು ಜೈ ಭೀಮ್ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಸಂಸ್ಥಾಪಕ ಹಾಗೂ ರಾಷ್ಟ್ರೀಯ ಅಧ್ಯಕ್ಷ ಬಿ. ಆರ್ ಮುನಿರಾಜು ಕಿಡಿಕಾರಿದರು.
ಸೋಮವಾರ ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಂಗಳೂರು ನಗರ ಜಿಲ್ಲೆಯ ಭೂದಾಖಲೆಗಳ ಉಪನಿರ್ದೇಶಕ ಸುಜಯ್ ಕುಮಾರ್ ಅವರ ವ್ಯಾಪ್ತಿಗೆ ಬರುವ 5 ತಾಲೂಕುಗಳಲ್ಲಿನ ದಲಿತ ಸಮುದಾಯಕ್ಕೆ ಸೇರಿದ ಅಧಿಕಾರಿಗಳ ಮೇಲೆ ಜಾತಿಧೋರಣೆಯನ್ನು ಅನುಸರಿಸುತ್ತಿದ್ದು, ಅಮಾಯಕರನ್ನು ಅಮಾನತುಗೊಳಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಮದ್ಯರಾತ್ರಿ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸುವ, ಬೆದರಿಕೆ ಒಡ್ಡುತ್ತಿದ್ದಾರೆ. ತಾವೇ ಕಚೇರಿಯಲ್ಲಿ ಸರಿಯಾಗಿ ಇರದೆ ಈ ರೀತಿಯ ನಡುವಳಿಕೆ ತೋರುತ್ತಿರುವುದನ್ನು ಉನ್ನತಾಧಿಕಾರಿಗಳು ಗಮನಿಸಿದೆ ಜಾಣ ಕುರುಡು ತೋರುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಂಡಿಕೊಡಿಗೇಹಳ್ಳಿ ಗ್ರಾಮದಲ್ಲಿ ದಲಿತರು ವಾಸಿಸುವ ಎರಡೂ ಬದಿಗಳಲ್ಲಿ ಕಿರಿದಾದ ರಸ್ತೆ ಇದ್ದು, ಇಲ್ಲಿ ಬಿ.ಎಂ.ಆರ್.ಸಿ.ಎಲ್ ಮತ್ತು ಗೇಲ್ ಗ್ಯಾಸ್ ಕಾಮಗಾರಿಗಳನ್ನು ಅನುಮತಿ ಪಡೆದ ಅಧಿಕೃತ ಗುತ್ತಿಗೆದಾರರಿಗೆ ನೀಡದೆ ಖಾಸಗಿ ವ್ಯಕ್ತಿಗಳಿಗೆ ನೀಡಲಾಗಿದ್ದು, ಇವರುಗಳು ಗೂಂಡಾಗಳನ್ನು ಇಟ್ಟುಕೊಂಡು ಅಮಾಯಕ ದಲಿತರಿಗೆ ಬೆದರಿಕೆಗಳನ್ನು ಒಡ್ಡಿ ಪ್ರಾಣಬೆದರಿಕೆ ಹಾಕುತ್ತಿದ್ದಾರೆ. ಈ ವಿಚಾರವನ್ನು ಗೃಹ ಇಲಾಖೆಯ ಉನ್ನತಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಪೊಲೀಸರು ಕೇವಲ ಸಬೂಬು ಹೇಳಿ ಕಳುಹಿಸುವ ಕೆಲಸವನ್ನು ಮಾತ್ರ ಮಾಡುತ್ತಿದ್ದಾರೆ ಎಂದು ದೂರಿದರು.
ಇನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಬಂಡಿಕೊಡಿಗೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋಟ್ಯಾಂತರ ರೂಗಳ ಅವ್ಯವಹಾರಗಳನ್ನು ಮಾಡಿ ಸಿಕ್ಕಿ ಹಾಕಿಕೊಂಡಿರುವ ಭ್ರಷ್ಟ ಸದಸ್ಯರನ್ನು ಅಮಾನತ್ತು ಮಾಡದೇ ಅವರ ಸದಸ್ಯತ್ವವನ್ನು ಮುಂದುವರೆಸಲಾಗಿದೆ. 2020 ರಿಂದ 2025 ರ ತನಕ ಪಂಚಾಯ್ತಿಯಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಈ ಎಲ್ಲಾ ಆರೋಪಗಳು ಹಾಗೂ ದೂರುಗಳ ವಿರುದ್ಧ ಸಿಬಿಐ, ಸಿಓಡಿ, ಲೋಕಾಯುಕ್ತ, ತೆರಿಗೆ ಇಲಾಖೆ ಮತ್ತು ಇನ್ನಿತರ ಇಲಾಖೆಯಿಂದ ತನಿಖೆಗೆ ಒತ್ತಾಯಿಸಿ ಆಗಸ್ಟ್ 10 ರಂದು ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ತಮಟೆ ಚಳುವಳಿ ಹಮ್ಮಿಕೊಳ್ಳಲಾಗಿದೆ ಎಂದು ಬಿ. ಆರ್ ಮುನಿರಾಜು ಮಾಹಿತಿ ನೀಡಿದರು.














