ಜನಸಾಮಾನ್ಯರಿಗೆ ನ್ಯಾಯಾಲಯಗಳು ದೇಗುಲಗಳಾಗಿವೆ: ಡಿ. ಕೆ ಶಿವಕುಮಾರ್

WhatsApp
Telegram
Facebook
Twitter
LinkedIn

ಬೆಂಗಳೂರು: ಜನಸಾಮಾನ್ಯರು ಸರ್ಕಾರಿ ಕಚೇರಿಗಳು ಅಥವಾ ನ್ಯಾಯಾಲಯದ ಕದ ತಟ್ಟಿದಾಗ ದೇವರನ್ನೇ ಕೇಳುತ್ತಿದ್ದೇವೆ ಎಂಬ ಮನೋಭಾವವಿರುತ್ತದೆ. ಅದರಲ್ಲೂ ನ್ಯಾಯಾಲಯಗಳು ಅವರಿಗೆ ದೇಗುಲಗಳಾಗಿವೆ. ಆದ್ದರಿಂದ ಅಲ್ಲಿ ಜನರಿಗೆ ನ್ಯಾಯ ಒದಗಿಸುವುದು ಬಹಳ ಮುಖ್ಯ ಎಂದು ಸಿಎಂ ಡಿ. ಕೆ ಶಿವಕುಮಾರ್ ಹೇಳಿದರು.

ಕರ್ನಾಟಕ ನ್ಯಾಯಾಂಗ ಅಕಾಡೆಮಿಯಲ್ಲಿ ಭಾನುವಾರ ನಡೆದ ದಕ್ಷಿಣ ವಲಯದ ಕಾನ್ಸುಲೇಷನ್ ಆಫ್ ಸ್ಟಾಕ್ ಸಾಕ್ಷಿಗಳ ಸುಧಾರಣಾ ಸಮಿತಿ 2026ರ ಸಮಾರೋಪ  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸ್ಟಾಕ್ ವಿಟ್ನೆಸ್ ರಿಫಾರ್ಮ್ಸ್ಫ್ ಕಮಿಟಿ ನಮಗೆ ಏಕೆ ಅಗತ್ಯವಿದೆ ಎಂದು ಪರಿಶೀಲಿಸಿ ಈ ಕ್ಷೇತ್ರದಲ್ಲಿಯೂ ಕರ್ನಾಟಕ ಮುನ್ನಡೆ ಸಾಧಿಸಲಿದೆ. ಒಂದಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಸಾಕ್ಷಿದಾರನಾಗುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಒಬ್ಬನೇ ವ್ಯಕ್ತಿ  ಹಲವಾರು ಪ್ರಕರಣಗಳಲ್ಲಿ ಸಾಕ್ಷಿಯಾಗಿ ಬಂದರೆ ನ್ಯಾಯಯುತ ಪ್ರಶ್ನೆಗಳು ಏಳುತ್ತವೆ. ನಿಜವಾಗಿಯೂ ಒಬ್ಬ ವ್ಯಕ್ತಿ ಸಾಕ್ಷಿದಾರನಾದರೆ ನಮ್ಮ ತನಿಖೆಯ ಪ್ರಕ್ರಿಯೆ ಬೇರೆಯ ಮಾರ್ಗವನ್ನು ಹಿಡಿಯಬಹುದು. ಸಾಕ್ಷಿ ಎಂದರೆ ಪ್ರಕರಣದ ಕಡತಲ್ಲಿನ ಹೆಸರು ಮಾತ್ರವಲ್ಲ, ಅವರು ದಾಖಲೆಯಾಗಿರುತ್ತಾರೆ ಎಂದರು.

ವಿಧಾನಸಭೆಗೆ 8 ಅವಧಿಗಳಿಂದ ಸತತವಾಗಿ ಆಯ್ಕೆಯಾಗಿದ್ದೇನೆ. ಸುದೀರ್ಘ ಸಾರ್ವಜನಿಕ ಜೀವನದ ಪಯಣ ನನ್ನದು. 47ನೇ ವಯಸ್ಸಿನಲ್ಲಿ ಪದವೀಧರನಾದೆ. ಜ್ಞಾನ, ಶಿಕ್ಷಣದ ಶಕ್ತಿ ಏನೆಂದು ಅರಿತಿದ್ದೇನೆ. ಮನುಷ್ಯನಿಗೆ ಗಡಿಗಳಿವೆ. ಆದರೆ ಜ್ಞಾನಕ್ಕೆ ಗಡಿಗಳಿಲ್ಲ. ನ್ಯಾಯಮೂರ್ತಿಗಳ ಜ್ಞಾನದ ಹರಿವು ವಿಸ್ತಾರವಾದ್ದುದು. ಅಧಿಕಾರಿಗಳಿಂದಲೂ ನಾನು ಕಲಿಯುತ್ತೇನೆ. ನಿರ್ಧಾರಗಳನ್ನು ಕೈಗೊಳ್ಳುವಾಗ ಅನುಭವದ ಆಧಾರದ ಮೇಲೆ ಕೈಗೊಳ್ಳುತ್ತೇವೆ ಎಂದರು.

ಇತ್ತೀಚೆಗೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ನ್ಯಾಯವನ್ನು ಎರಡು ವರ್ಷಗಳೊಳಗೆ ನೀಡಿದ ಕರ್ನಾಟಕದ ನ್ಯಾಯಾಲಯದ ತೀರ್ಪಿನ ಬಗ್ಗೆ ದೇಶದೆಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಕರ್ನಾಟಕದ ಕಾರ್ಯಾಂಗ ಮತ್ತು ನ್ಯಾಯಾಂಗದ ಗುಣಮಟ್ಟ ಅತ್ಯುತ್ತಮವಾದದ್ದು. ಅದಕ್ಕಾಗಿಯೇ ಬೆಂಗಳೂರಿನಲ್ಲಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯವಿದ್ದು, ದೇಶದೆಲ್ಲೆಡೆಯಿಂದ ವಿದ್ಯಾರ್ಥಿಗಳು ಇಲ್ಲಿಗೆ ಓದಲು ಬರುತ್ತಾರೆ ಎಂದರು.

ಆಧುನಿಕ ತಂತ್ರಜ್ಞಾನದ ನೆರವಿನಿಂದ ಹಿಂದೆಂದಿಗಿಂತಲೂ ಈಗ ತನಿಖೆ ನಡೆಸುವುದು ಸುಲಭವಾಗಿದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಸಾಕ್ಷಿದಾರನ ವಿಶ್ವಾಸಾರ್ಹತೆ ಅತಿ ಮುಖ್ಯವಾಗುತ್ತದೆ. ಡಿಜಿಟಲ್ ಯುಗದಲ್ಲಿ ಪರಿಹಾರಗಳನ್ನು ಕಂಡುಕೊಳ್ಳುವಾಗ ನಾವು ಜಾಗೃತಿ ಹಾಗೂ ಸಮತೋಲನವನ್ನು ಕಾಯ್ದುಕೊಳ್ಳಬೇಕು.ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು, ಕೇರಳ, ತೆಲಂಗಾಣ ಮತ್ತಿತರೆ ರಾಜ್ಯಗಳಿಂದ ಸಮಿತಿ ಬಂದು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಕರ್ನಾಟಕ ಸರ್ಕಾರ ಅಗತ್ಯವಿರುವ ಸಂಪೂರ್ಣ ನೆರವನ್ನು ಒದಗಿಸಲಿದೆ ಎಂದು ಭರವಸೆ ನೀಡಿದರು.

ಕರ್ನಾಟಕದಲ್ಲಿ ಶಾಸಕಾಂಗ ಮತ್ತು ನ್ಯಾಯಾಂಗ ಎದುರು ಬದುರಾಗಿದೆ. ಪ್ರಜಾಪ್ರಭುತ್ವದ ನಾಲ್ಕು ಆಧಾರ ಸ್ತಂಭಗಳು ಗಮನಿಸುತ್ತಿರುತ್ತವೆ. ನಾವು ತಪ್ಪು ಮಾಡಿದರೆ, ಕಾರ್ಯಾಂಗ ಮಾರ್ಗದರ್ಶನ ಮಾಡುತ್ತದೆ. ಮೂರು ಸ್ತಂಭಗಳು ತಪ್ಪು ಮಾಡಿದರೆ ಮಾಧ್ಯಮ ನಮ್ಮ ತಪ್ಪುಗಳನ್ನು ತಿದ್ದುತ್ತದೆ. ಇತ್ತೀಚೆಗೆ ಮಾಧ್ಯಮಗಳು ಕೂಡ ನ್ಯಾಯಾಂಗದ ರೀತಿಯಲ್ಲಿ ವಿಚಾರಣೆ ಕೈಗೊಂಡು ಎಲ್ಲರಲ್ಲಿಯೂ ಅಭಿಪ್ರಾಯ ಮೂಡಿಸುವ ಕೆಲಸವನ್ನು ಮಾಡುತ್ತಿವೆ. ಇಂತಹ ಪ್ರಭಾವಗಳಿಗೆ ಯಾರು ಒಳಗಾಗಬಾರದು ಎಂದು ಸಲಹೆ ನೀಡಿದರು.

ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಅಧಿಕಾರವು ಸಂವಿಧಾನದ ಕಾರಣದಿಂದ ಪ್ರತ್ಯೇಕವಾಗಿದ್ದರೂ ಸಂವಿಧಾನವನ್ನು ರಕ್ಷಿಸುವ ಗುರಿ ಹೊಂದಿವೆ. ಇಲ್ಲಿ ನ್ಯಾಯಾಂಗದ ಸ್ವಾತಂತ್ರ್ಯವನ್ನು ನಾವು ಗೌರವಿಸಬೇಕು. ನ್ಯಾಯಾಂಗವು ಶಾಸಕಾಂಗ ಮತ್ತು ಕಾರ್ಯಾಂಗಕ್ಕಿಂತ ಮುಖ್ಯ ಆಗಬೇಕು. ನಾವು ವಿವಿಧ ಸಂಸ್ಥೆಗಳನ್ನು ಪ್ರತಿನಿಧಿಸಿದರೂ ಜನರ ಕಲ್ಯಾಣಕ್ಕಾಗಿ ಒಟ್ಟಾಗಿ ಕಾರ್ಯನಿರ್ವಹಿಸಬೇಕು. ಕಾನೂನು ಸುವ್ಯಸ್ಥೆಯನ್ನು ಕಾಪಾಡಬೇಕು ಹಾಗೂ ಜನರ ಹಕ್ಕುಗಳನ್ನು ರಕ್ಷಿಸುವ ಗುರುತುರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ನ್ಯಾಯಾಂಗದಲ್ಲಿಯೂ ಎಐ ಬಳಕೆಯಾಗುತ್ತಿದೆ. ಒಟ್ಟಾಗಿ ಕೆಲಸ ಮಾಡುವುದು ಇಂದಿನ ಅಗತ್ಯವಾಗಿದೆ. ಸ್ಟಾಕ್ ವಿಟ್ನೆಸ್  ರಿಫಾರ್ಮ್ಸ ಕಮಿಟಿಯ ಸಭೆಯು ನ್ಯಾಯ ಸದಾ ಮೇಲುಗೈ ಸಾಧಿಸಲು ಹೊಸ ದಾರಿಗಳನ್ನು ರೂಪಿಸಲಿ ಎಂದು ಡಿ. ಕೆ ಶಿವಕುಮಾರ್ ಹಾರೈಸಿದರು.

ಹೈಕೋರ್ಟ್ ನ್ಯಾಯಮೂರ್ತಿ ಜಯಂತ್ ಬ್ಯಾನರ್ಜಿ, ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಾಧೀಶ ಹಾಗೂ ಸ್ಟಾಕ್ ವಿಟ್ನೆಸ್ ರಿಫಾರ್ಮ್ಸ್ ಕಮಿಟಿಯ ಅಧ್ಯಕ್ಷ ವಿವೇಕ್ ಅಗರ್ವಾಲ್, ಬೆಂಗಳೂರಿನ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ ಕಾಮತ್, ಕರ್ನಾಟಕ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ ಶೆಟ್ಟಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಸ್ಟಾಕ್ ವಿಟ್ನೆಸ್ ರಿಫಾರ್ಮ್ಸ್ ಕಮಿಟಿಯ ಸದಸ್ಯರುಗಳಾದ ಎಸ್. ರಾಜಶೇಖರ್, ಎಸ್.ಡಿ. ಸಂಜಯ್ ಮತ್ತಿತರರು ಉಪಸ್ಥಿತರಿದ್ದರು

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon