ಬೆಂಗಳೂರು: ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಮೊಮ್ಮಗ ಹುಸೇನ್ ಅವರ ಸಿದ್ಧಾಂತ, ತತ್ವಗಳನ್ನು ಉಳಿಸಬೇಕಾದರೆ ಪ್ರತಿಯೊಬ್ಬ ಜೀವಿಯೂ ಪ್ರಪಂಚದಲ್ಲಿ ಐಕ್ಯತೆ, ಸಹೋದರತ್ವದ ರೀತಿಯಲ್ಲಿ ಬದುಕುವುದು ಅಗತ್ಯವಾಗಿದೆ ಎಂದು ಕೇಂದ್ರ ಪರಿಹಾರ ಸಮಿತಿಯ ಅಧ್ಯಕ್ಷ, ಕೆಪಿಸಿಸಿ ವಕ್ತಾರ ಆಗಾ ಸುಲ್ತಾನ್ ಅಭಿಪ್ರಾಯಪಟ್ಟರು.
ಬಾಲ್ಡ್ ವಿನ್ ಪ್ರೌಢಶಾಲೆಯ ಮೈದಾನದಲ್ಲಿ ಆಯೋಜಿಸಲಾಗಿದ್ದ 34ನೇ ಹುಸೇನ್ ದಿವಸ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದ ಅವರು, ಎಲ್ಲಾ ಸಮುದಾಯದವರು ಸಹೋದರತ್ವ ಐಕ್ಯತೆಯಿಂದ ಬದುಕುವುದು ಅಗತ್ಯವಾಗಿದೆ, ಹುಸೇನ್ ಅವರ ತ್ಯಾಗ ಗುಣಗಳನ್ನು ಅಳವಡಿಸಿಕೊಂಡು ಪ್ರತಿಯೊಬ್ಬರಲ್ಲಿ ಬಾಂಧವ್ಯವನ್ನು ಕಾಪಾಡಿಕೊಳ್ಳುವುದು ಅವಶ್ಯವಾಗಿದೆ ಎಂದು ಹೇಳಿದರು.
ಕಳೆದ 34 ವರ್ಷಗಳಿಂದ ಬೆಂಗಳೂರಿನಲ್ಲಿ ಹುಸೇನ್ ದಿವಸ ಆಚರಣೆ ಮಾಡಲಾಗುತ್ತಿದೆ. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದೆ. ಇಡೀ ವಿಶ್ವದಲ್ಲಿ ಹಿಂಸೆ, ಕ್ರೌರ್ಯ ಹೆಚ್ಚುತ್ತಿದೆ. ನಮ್ಮ ದೇಶದಲ್ಲಿಯೂ ಧರ್ಮ, ಜಾತಿಯ ಹೆಸರಿನಲ್ಲಿ ಹಿಂಸೆ, ಅಸಹಿಷ್ಣುತೆ ಹೆಚ್ಚುತ್ತಿರುವುದ ನೋಡುತ್ತಿದ್ದೇವೆ. ಆದ್ದರಿಂದ ಈ ವರ್ಷ ಜಾಗತಿಕ ಶಾಂತಿಗಾಗಿ ಜಾತ್ಯತೀತತೆ ಎಂಬ ಘೋಷವಾಕ್ಯದಡಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು.
ಹಿಂಸೆ ಹಾಗೂ ಕ್ರೌರ್ಯ ದಿನಗೂಲಿ ಮಾಡುವವರು, ಬಡವರು, ಸಾಮಾನ್ಯ ಜನರ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಗಲ್ಫ್ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಪ್ರತಿಯೊಬ್ಬರೂ ಎದುರಿಸುವಂತಾಗಿದೆ. ಯುದ್ಧಗಳಿಂದ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುವವರಿಗೆ ಲಾಭ ಆಗುತ್ತದೆಯೇ ಹೊರತು, ಬೇರೆ ಯಾರಿಗೂ ಇದರಿಂದ ಪ್ರಯೋಜನವಾಗುವುದಿಲ್ಲ ಎಂದು ತಿಳಿಸಿದರು.
1400 ವರ್ಷಗಳ ಹಿಂದೆ ಕರ್ಬಲಾ ಯುದ್ಧದಲ್ಲಿ ಇಮಾಮ್ ಹುಸೇನ್ ಇಡೀ ವಿಶ್ವಕ್ಕೆ ತ್ಯಾಗ, ಬಲಿದಾನ, ಸಾಮಾಜಿಕ ನ್ಯಾಯದ ಸಂದೇಶವನ್ನು ನೀಡುತ್ತಾ ಹುತಾತ್ಮರಾದರು. ನಮ್ಮ ಹಿರಿಯರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಮೂಲಕ ನಮಗೆ ಸಂವಿಧಾನ ನೀಡಿದರು. ಇಂದು ನಾವು ಆ ಜಾತ್ಯತೀತ ಸಂವಿಧಾನವನ್ನು ರಕ್ಷಿಸಿಕೊಳ್ಳಬೇಕಿದೆ ಎಂದು ಆಗಾ ಸುಲ್ತಾನ್ ಅಭಿಪ್ರಾಯಪಟ್ಟರು.
ಶಾಸಕ ಎನ್.ಎ.ಹ್ಯಾರಿಸ್ ಮಾತನಾಡಿ, ಕಳೆದ 34ವರ್ಷಗಳಿಂದ ಹುಸೇನ್ ದಿವಸ ಆಚರಿಸಿಕೊಂಡು ಬರಲಾಗುತ್ತಿದೆ. ಇದು ಬಾವಕ್ಯತೆಯ, ಹಿಂಸೆಯಿಂದ ಮುಕ್ತರಾಗಿ ಅಹಿಂಸೆ, ಸೌಹರ್ದತೆಯಿಂದ ಮುನ್ನಡೆಯುವ ದಿನವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ರೋಶನ್ ಬೇಗ್, ಐಕ್ಯತಾ ಒಕ್ಕೂಟದ ರಾಜ್ಧಯಾಧ್ಯ ಮುಜಾಹಿದ್ ಅಲಿಬಾಬಾ, ಸೇಂಟ್ ಜೋಸೆಫ್ಸ್ ವಿಶ್ವವಿದ್ಯಾಲಯದ ಕುಲಪತಿ ವಿಕ್ಟರ್ ಲೋಬೋ ಸೇರಿದಂತೆ ವಿವಿಧ ಧರ್ಮ ಗುರುಗಳು, ಸಾವಿರಾರು ಸಂಖ್ಯೆಯಲ್ಲಿ ಶಿಯಾ ಮುಸ್ಲಿಂ ಜನಾಂಗದವರು ಭಾಗವಹಿಸಿದ್ದರು.














