ಬೆಂಗಳೂರು: ಮಂಗಳವಾರ ಜಿ.ಕೆ.ವಿ.ಕೆ ಆವರಣದಲ್ಲಿ ನಡೆದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ವಾರ್ಷಿಕ ಘಟಿಕೋತ್ಸವದಲ್ಲಿ ಹಿರಿಯ ಕಾರ್ಡಿಯಾಕ್ ಅನಸ್ತೇಶಿಯಾ ತಜ್ಞೆಯಾದ ಡಾ ಸುಮೇಧಾ ಹರೀಶ್ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.
32 ವರ್ಷದ ಡಾ ಸುಮೇಧಾ ಹರೀಶ್ ಕಾರ್ಡಿಯಾಕ್ ಅನಸ್ತೇಶಿಯಾ ವಿಭಾಗದಲ್ಲಿ ಡಾಕ್ಟರೇಟ್ ಪದವಿಯನ್ನು ಪ್ರಥಮ ಸ್ಥಾನದಲ್ಲಿ ಪೂರ್ಣಗೊಳಿಸಿದ್ದು, ಅವರಿಗೆ ವಿಶ್ವವಿದ್ಯಾಲಯದ ಕುಲಪತಿ ಡಾ ಭಗವಾನ್ ಬಿ.ಸಿ ಪದವಿ ಪತ್ರವನ್ನು ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಕುಲಸಚಿವ ಅರ್ಜುನ್ ಒಡೆಯರ್, ಮೌಲ್ಯಮಾಪನ ಕುಲಸಚಿವ ಡಾ. ರಿಯಾಜ್ ಬಾಷಾ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಬಸವೇಶ್ವರ ವೈದ್ಯಕೀಯ ಕಾಲೇಜಿನಲ್ಲಿ ಪದವಿಯನ್ನು ಪೂರೈಸಿರುವ ಡಾ ಸುಮೇಧಾ ತಮ್ಮ ಕಠಿಣ ಪರಿಶ್ರಮದಿಂದ ಲಕ್ನೋ ನ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಎಂ. ಡಿ ಅನಸ್ತೇಶಿಯಾಲಜಿಯಲ್ಲಿ ಐದನೇ ಸ್ಥಾನ ಪಡೆದು ಪೂರೈಸಿದ್ದಾರೆ. ರೋಟರಿ ಸಂಸ್ಥೆಯ ಇಂಟರ್ನೆಶಿಪ್ ಕೂಡ ಯಶಸ್ವಿಯಾಗಿ ಪೂರೈಸಿರುವ ಇವರು, ಜನಕ್ ಮೆಹತ ಯುವ ವಿಜ್ಞಾನಿ ಪ್ರಶಸ್ತಿಯನ್ನು ಸಹ ಮುಡಿಗೇರಿಸಿಕೊಂಡಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ನಾನು 2023 ರಿಂದ 2026 ರವರೆಗೆ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಾ ಡಾಕ್ಟರೇಟ್ ಇನ್ ಕಾರ್ಡಿಯಾಕ್ ಅನಸ್ತೇಶಿಯ ಪದವಿಯನ್ನು ಪೂರೈಸಿದ್ದೇನೆ. ಈ ಸಾಧನೆಗೆ ನನ್ನ ಇಡೀ ಕುಟುಂಬದ ಸದಸ್ಯರು ಮುಖ್ಯವಾಗಿ ಪತಿ, ತಂದೆ, ತಾಯಿ, ಅತ್ತೆ, ಮಾವ ಅವರುಗಳಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದರು.
ಬೈ ಪಾಸ್ ಸರ್ಜರಿಗೆ ಬರುವ ರೋಗಿಗಳಿಗೆ ಕಾರ್ಡಿಯಾಕ್ ಅನಸ್ತೇಶಿಯಾ ತಜ್ಞರ ಅವಶ್ಯಕತೆ ಬಹಳಷ್ಟು ಇದೆ. ನೋವಿಲ್ಲದ ಶಸ್ತ್ರಚಿಕಿತ್ಸೆ ಈ ವೈದ್ಯರ ಪ್ರಮುಖ ಜವಾಬ್ದಾರಿಯಾಗಿದೆ. ಸದ್ಯ ಫೋರ್ಟಿಸ್ ಆಸ್ಪತ್ರೆಯಲ್ಲಿ ತಜ್ಞ ವೈದ್ಯೆಯಾಗಿ ನಾನು ಕಾರ್ಯನಿರ್ವಹಿಸುತ್ತಿದ್ದು, ದಿನಾ ಖುಷಿಯಿಂದ ವೃತ್ತಿ ಬದುಕನ್ನು ರೂಪಿಸಿಕೊಂಡಿದ್ದೇನೆ. ರೋಗಿಗಳಿಗೆ ಇನ್ನೂ ಹೆಚ್ಚು ಸೇವೆ ಮಾಡುವುದು ನನ್ನ ಮಹಾದಾಸೆ ಆಗಿದೆ ಎಂದರು.
ಸತ್ಯ ಸಾಯಿ ಆಸ್ಪತ್ರೆಯಿಂದ ಉಚಿತ ವೈದ್ಯಕೀಯ ಸೇವೆ ನೀಡುವ ಕ್ಯಾಂಪ್ ಗಳಲ್ಲಿ ಭಾಗವಹಿಸಿದ್ದೇನೆ. ಈ ವೇಳೆ 15 ಚಿಕ್ಕ ಮಕ್ಕಳ ಶಸ್ತ್ರಚಿಕಿತ್ಸೆಗೆ ಉಚಿತ ಸೇವೆ ನೀಡಿರುವ ತೃಪ್ತಿ ನನಗಿದೆ. ಈ ಮಾದರಿಯಲ್ಲಿ ಜೀವನ ದುದ್ದಕ್ಕೂ ಬಡವರ, ನಿರ್ಗತಿಕರ ಸೇವೆಯನ್ನು ಖುದ್ದಾಗಿ ಮಾಡಬೇಕು ಎನ್ನುವ ಮಹದಾಸೆ ನನಗಿದೆ. ಆದರೆ ಈ ವೈದ್ಯಕೀಯ ವಿಭಾಗದಲ್ಲಿ ಸಾಕಷ್ಟು ಒತ್ತಡಗಳಿದ್ದು, ಅದನ್ನು ಸರಿಯಾಗಿ ನಿರ್ವಹಣೆ ಮಾಡಿದರೆ ಇದಕ್ಕಿಂದ ಉತ್ಕೃಷ್ಟವಾದ ಸೇವೆ ಮೊತ್ತೊಂದಿಲ್ಲ ಎನ್ನುವುದು ನನ್ನ ಅಭಿಪ್ರಾಯವಾಗಿದೆ ಎಂದು ಡಾ ಸುಮೇಧಾ ಹರೀಶ್ ತಿಳಿಸಿದರು.














