ಬೆಳಗಾವಿ: ತಾಲೂಕಿನ ಬಿಜಗರ್ಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕಾವಳೇವಾಡಿ ಗ್ರಾಮದಲ್ಲಿ ಹೊಸ ಗಟಾರು ನಿರ್ಮಾಣ ಕಾಮಗಾರಿಯಲ್ಲಿ ಭಾರಿ ಗೋಲ್ಮಾಲ್ ನಡೆದಿರುವುದು ಬೆಳಕಿಗೆ ಬಂದಿದೆ. ಸದರಿ ಗಟಾರು ಕಾಮಗಾರಿಯನ್ನೇ ಮಾಡದೆ ಗ್ರಾಮ ಪಂಚಾಯಿತಿಯವರು ಬಿಲ್ ತೆಗೆದಿರುವುದು ಗೊತ್ತಾಗಿದೆ.
ಪಿಡಿಒ ರವಿಕಾಂತ ಸಿ. ಅವರು ಮೂಲದಲ್ಲಿ ಗಟಾರು ನಿರ್ಮಾಣ ಮಾಡಬೇಕಿದ್ದ ಜಾಗದ ಬಗ್ಗೆ ವಿವಾದ ಇರುವುದರಿಂದ ಇದೇ ಕೆಲಸವನ್ನು ಬೇರೆ ಕಡೆ ಮಾಡಿ ಬಿಲ್ ತೆಗೆಯಲಾಗಿದೆ ಎಂದು ವಿಚಿತ್ರ ಹೇಳಿಕೆ ನೀಡಿದ್ದಾರೆ. ಎಲ್ಲಿ ಅಗತ್ಯವಿದೆ ಅಲ್ಲಿ ಕೆಲಸ ಮಾಡದೆ ಬೇರೆಲ್ಲೋ ಕಾಮಗಾರಿ ಮಾಡಿದ್ದು ಯಾಕೆ ಎಂಬ ಪ್ರಶ್ನೆ ಗ್ರಾಮಸ್ಥರಲ್ಲಿ ಮೂಡಿದೆ.
ಸದರಿ ಕಾಮಗಾರಿಗಳ ಬಗ್ಗೆ ಈ ಹಿಂದೆ ಪ್ರಜಾ ನೆರಳು ದಿನಪತ್ರಿಕೆಯು ಇದೇ ಪಿಡಿಒ ಅವರನ್ನು ಪ್ರಶ್ನಿಸಿದ ಸಂದರ್ಭದಲ್ಲಿ, ಈ ಕಾಮಗಾರಿಯ ಬಗೆಗಿನ ದಾಖಲೆಗಳನ್ನು ಪತ್ರಿಕೆಗೆ ಕೊಡುವುದಾಗಿ ಅವರು ಹೇಳಿದ್ದರು. ಆದರೆ ಈವರೆಗೂ ಯಾವುದೇ ಸೂಕ್ತ ದಾಖಲಾತಿಗಳನ್ನು ಕೊಡಲು ಅವರು ವಿಫಲರಾಗಿದ್ದಾರೆ.
ಬಿಜಗರ್ಣಿ ಭಾಗದಲ್ಲಿ ರೈತಾಪಿ ಸಮುದಾಯವೇ ಹೆಚ್ಚಾಗಿದೆ. ಅವರು ಕಷ್ಟಪಟ್ಟು ದುಡಿದು ಕಟ್ಟಿದ ತೆರಿಗೆ ಹಣವನ್ನು ಗ್ರಾಪಂ ಅಧಿಕಾರಿಗಳು ಪೋಲು ಮಾಡುತ್ತಿರುವುದು ಅಕ್ಷಮ್ಯವಾಗಿದೆ. ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು ಅಧಿಕಾರ ದುರ್ಬಳಕೆ ಮಾಡಿಕೊಂಡು ಅಕ್ರಮಗಳನ್ನು ಎಸಗಿದ್ದಾರೆ ಎಂದು ಜನ ಹೇಳುತ್ತಿದ್ದಾರೆ. ಈಗಲಾದರೂ ನಮ್ಮ ಬೆಳಗಾವಿ ಜಿಪಂ ಸಿಇಒ ಆಗಿರುವ ಸನ್ಮಾನ್ಯ ರಾಹುಲ್ ಶಿಂದೆ ಇವರು ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಜರುಗಿಸಬೇಕಿದೆ.
ಸಿಇಒ ಸಾಹೇಬ್ರು, ಲೋಕಾಯುಕ್ತರು ಗಮನಿಸಲಿ:
ಬಿಜಗರ್ಣಿ ಗ್ರಾಮ ಪಂಚಾಯಿತಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಆದರೆ ಇವತ್ತಿನವರೆಗೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು, ಲೋಕಾಯುಕ್ತ ಅಧಿಕಾರಿಗಳು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಅಲ್ಲದೆ ಈ ಕುರಿತು ತನಿಖೆಗೂ ಮುಂದಾಗಿಲ್ಲದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದೆ.













