ಬೆಂಗಳೂರು: ಸಮಾಜ ಸೇವೆ ಹಾಗೂ ಸಾರ್ವಜನಿಕ ರಂಗದಲ್ಲಿ ಸತತವಾಗಿ ತೊಡಗಿಸಿಕೊಂಡಿರುವ ನಗರದ ಬಿಟಿಎಂ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ನಾಯಕಿ, ಸಮಾಜ ಸೇವಕಿ ಡಾ. ಕವಿತಾ ಶ್ರೀನಾಥ್ ಅವರಿಗೆ ಅಂತರರಾಷ್ಟ್ರೀಯ ಮಟ್ಟದ ಗೌರವ ಲಭಿಸಿದೆ. ಶ್ರೀಲಂಕಾದ ರಾಜಧಾನಿ ಕೊಲಂಬೋದಲ್ಲಿನ ಪ್ರಧಾನಮಂತ್ರಿಗಳ ಅಧಿಕೃತ ನಿವಾಸದಲ್ಲಿ ಇತ್ತೀಚೆಗೆ ನಡೆದ ಅದ್ಧೂರಿ ಸಮಾರಂಭದಲ್ಲಿ ಪ್ರತಿಷ್ಠಿತ ಶಿ ಫಾರ್ ದಿ ನೇಷನ್ ಪ್ರಶಸ್ತಿ ನೀಡಿ ಅವರನ್ನು ಗೌರವಿಸಲಾಗಿದೆ.
ಪ್ರಪಂಚದಾದ್ಯಂತ ಸಮಾಜ ಸೇವೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಸುಮಾರು 3,500ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದು, ಅದರಲ್ಲಿ ಡಾ. ಕವಿತಾ ಶ್ರೀನಾಥ್ ಅವರ ನಿರಂತರ ಸಮಾಜ ಸೇವೆಯನ್ನು ಪರಿಗಣಿಸಿ ಆಯ್ಕೆ ಸಮಿತಿಯು ಸ್ವಯಂಪ್ರೇರಿತವಾಗಿ ಇವರನ್ನು ಆಯ್ಕೆ ಮಾಡಿದೆ. ಯುಕೆ, ಯುಎಸ್ಎ, ರಷ್ಯಾ, ಮಲೇಷಿಯಾ, ಉಕ್ರೇನ್, ಸಾಲ್ವೇನಿಯಾ ಹಾಗೂ ನೇಪಾಳ ಸೇರಿದಂತೆ ವಿವಿಧ ದೇಶಗಳ ಸಾಧಕ ಮಹಿಳೆಯರೊಂದಿಗೆ ಭಾರತದ ಪ್ರತಿನಿಧಿಯಾಗಿ ಡಾ. ಕವಿತಾ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಡಾ. ಕವಿತಾ, ನನ್ನ ಬಾಲ್ಯದಿಂದಲೇ ಸಮಾಜ ಸೇವೆಯಲ್ಲಿ ಆಸಕ್ತಿ ಇತ್ತು. ನಾನು ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಸುಮಾರು 85 ದಿನಗಳ ಕಾಲ ಪ್ರತಿದಿನ 3 ಸಾವಿರಕ್ಕೂ ಹೆಚ್ಚು ಜನರಿಗೆ ಉಚಿತ ಆಹಾರ ಪೊಟ್ಟಣಗಳನ್ನು ವಿತರಿಸಿದ್ದೇನೆ. ಅಷ್ಟೇ ಅಲ್ಲದೆ ಆ ವೇಳೆ ವಿವಿಧ ಭಾಗಗಳ ಲಕ್ಷಾಂತರ ಬಡ ಕುಟುಂಬಗಳಿಗೆ ಪಡಿತರ ಕಿಟ್ಗಳನ್ನು ತಲುಪಿಸಿದ್ದೇನೆ. ಕೇವಲ ಹಣ ಅಥವಾ ತಾತ್ಕಾಲಿಕ ನೆರವು ನೀಡುವುದಕ್ಕಿಂತ, ಮಹಿಳೆಯರು ಹಾಗೂ ಬಡ ಜನರಿಗೆ ಸ್ವಾವಲಂಬಿ ಜೀವನ ನಡೆಸಲು ಸೂಕ್ತ ತರಬೇತಿ ಹಾಗೂ ಉದ್ಯೋಗಾವಕಾಶ ಕಲ್ಪಿಸುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಇಂದಿಗೂ ಅವುಗಳನ್ನು ಮುಂದುವರಿಸಿದ್ದೇನೆ ಎಂದು ತಿಳಿಸಿದರು
ಈ ಅಂತರರಾಷ್ಟ್ರೀಯ ಗೌರವದ ಬೆನ್ನಲ್ಲೇ ನನಗೆ ಮತ್ತೊಂದು ಗರಿ ಒಲಿದು ಬಂದಿದೆ. ಸೌತ್ ಇಂಡಿಯಾ ವುಮೆನ್ ಅಚೀವರ್ಸ್ ಪ್ರಶಸ್ತಿಗೂ ಆಯ್ಕೆಯಾಗಿದ್ದೇನೆ. ಇದೇ ತಿಂಗಳ 27ರಂದು ಚೆನ್ನೈನಲ್ಲಿ ನಡೆಯಲಿರುವ ವರ್ಣರಂಜಿತ ಸಮಾರಂಭದಲ್ಲಿ ಈ ಪ್ರಶಸ್ತಿ ಸ್ವೀಕರಿಸಲಿದ್ದೇನೆ. ಈಗಾಗಲೇ ಲಭಿಸಿರುವ ಮತ್ತು ಲಭಿಸುತ್ತಿರುವ ಪ್ರಶಸ್ತಿ ಮತ್ತು ಗೌರವಗಳು ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಸಮಾಜದಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಮತ್ತು ಕಷ್ಟಪಟ್ಟು ಮೇಲೆ ಬರುತ್ತಿರುವ ಪ್ರತಿಯೊಬ್ಬ ಸಾಧಕ ಮಹಿಳೆಗೆ ನನ್ನ ಪ್ರಶಸ್ತಿಗಳನ್ನು ಅರ್ಪಿಸುತ್ತೇನೆ. ಬಡವರ ಹಾಗೂ ಸಮಾಜದ ಏಳಿಗೆಗಾಗಿ ಕೊನೆಯುಸಿರಿರುವವರೆಗೂ ಸೇವೆ ಸಲ್ಲಿಸುತ್ತೇನೆ ಎಂದು ಡಾ. ಕವಿತಾ ಶ್ರೀನಾಥ್ ಪುನರುಚ್ಚರಿಸಿದರು.















