ಬೆಂಗಳೂರು: ನ್ಯಾಯವನ್ನು ಒದಗಿಸುವುದು ಸಮಾಜಮುಖಿ ಕಾರ್ಯವಾಗಿದೆ. ಇದು ಯಾವುದೇ ಬೇರೆ ಕೆಲಸ ಅಥವಾ ವ್ಯಾಪಾರಕ್ಕಿಂತ ಭಿನ್ನವಾದ ವೃತ್ತಿಯಾಗಿದೆ. ಸಮಾಜವನ್ನು ಕಟ್ಟುವ ಮತ್ತು ಸರಿದಾರಿಗೆ ತರುವ ಕೆಲಸ ನ್ಯಾಯವಾದಿಗಳ ಕೈಯಲ್ಲಿದೆ ಎಂದು ಹೈ ಕೋರ್ಟ್ ಹಿರಿಯ ನ್ಯಾಯವಾದಿ ವಿ ಸುಧೀಶ್ ಪೈ ಅಭಿಪ್ರಾಯಪಟ್ಟರು.
ಭಾನುವಾರ ಬಸವನಗುಡಿಯ ಬಿ.ಎಂ.ಎಸ್ ಕಾನೂನು ಕಾಲೇಜಿನಲ್ಲಿ ಆಯೋಜಿಸಲಾಗಿದ್ದ 11 ನೇ ಬಿ.ಎಂ ಶ್ರೀನಿವಾಸಯ್ಯ ಸ್ಮರಣಾರ್ಥ ಮೂಟ್ ಕೋರ್ಟ್ ಸ್ಪರ್ಧೆಯ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕಾನೂನು ಕಾಲೇಜುಗಳಿಂದ ಹೊರ ಬರುತ್ತಿರುವ ವಿದ್ಯಾರ್ಥಿಗಳು ಕಾರ್ಪೋರೇಟ್ ವಲಯದ ಕಡೆ ಕೆಲಸ ನಿರ್ವಹಿಸಲು ಮನಸ್ಸು ಮಾಡುತ್ತಿದ್ದು, ಅದಕ್ಕಿಂತ ವಕೀಲರಾಗಿ ಕೋರ್ಟ್ ಕಲಾಪಗಳಲ್ಲಿ ಭಾಗವಸಿ ಸಾಮಾನ್ಯ ಜನರಿಗೆ ನ್ಯಾಯವನ್ನು ಒದಗಿಸುವ ಕೆಲಸವನ್ನು ಮಾಡಬೇಕು. ಇದಕ್ಕೆ ಕಾಲೇಜಿನಿಂದಲೇ ಪ್ರೇರೇಪಣೆ ದೊರೆಯಬೇಕಿದ್ದು, ಇದಕ್ಕೆ ಮೂಟ್ ಕೋರ್ಟ್ ನಂತಹ ಸ್ಪರ್ಧೆಗಳು ಪೂರಕವಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕದ ಹೈ ಕೋರ್ಟ್ ಹಿರಿಯ ನ್ಯಾಯವಾದಿ ಜಿ.ಎಲ್ ವಿಶ್ವನಾಥ್ ಮಾತನಾಡಿ, ಬಿ.ಎಂ.ಎಸ್ ಕಾನೂನು ಕಾಲೇಜಿನಿಂದ ಹೊರಬಂದ ಸಾಕಷ್ಟು ವಿದ್ಯಾರ್ಥಿಗಳು ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಹಿರಿಯ ನ್ಯಾಯವಾದಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಇದನ್ನು ಪ್ರೇರೇಪಣೆಯಾಗಿ ಈಗಿನ ವಿದ್ಯಾರ್ಥಿಗಳು ತೆಗೆದುಕೊಳ್ಳಬೇಕು. ಆದಷ್ಟು ಕಾರ್ಪೊರೇಟ್ ವಲಯದ ಕಡೆ ಮುಖ ಮಾಡದೆ ವಕೀಲರಾಗಿ ಸೇವೆ ಸಲ್ಲಿಸುವ ಕಡೆ ಮುಖಮಾಡಬೇಕು. ಸತ್ಯ ಮತ್ತು ನಿಖರತೆಯನ್ನು ಕಾಪಾಡಿಕೊಳ್ಳಲು ವಿದ್ಯಾರ್ಥಿ ದೆಸೆಯಿಂದಲೇ ತಯಾರಾಗಬೇಕು ಎಂದು ಕರೆ ನೀಡಿದರು.
ಎ. ಐ ಕಾನೂನು ಮಾಹಿತಿ ಪಡೆಯಲು ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ ಆದರೆ ಅದನ್ನೇ ನೆಚ್ಚಿಕೊಂಡು ಕೆಲಸ ನಿರ್ವಹಿಸಬಾರರು. ಕಕ್ಷಿದಾರರ ಕುರಿತು ಮಾನವೀಯತೆಯನ್ನು ಇಟ್ಟುಕೊಂಡು ಕೆಲಸ ನಿರ್ವಹಿಸಬೇಕು. ವಿದ್ಯಾರ್ಥಿ ದೆಸೆಯಿಂದಲೇ ಜವಾಬ್ದಾರಿ ಬದ್ಧತೆಯನ್ನು ಜೀವನದ ಕೊನೆಯವರೆಗೆ ಅಳವಡಿಸಿಕೊಳ್ಳುವುದು ಸಹ ಉತ್ತಮ ವಕೀಲರಾಗುವ ಬಹು ಮುಖ್ಯ ಅಂಶವಾಗಿದೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಶಿಲ್ಪಾ ಷಾ, ಬಿ.ಎಂ.ಎಸ್ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಾ ಅನಿತಾ ಎಫ್. ಎನ್ ಡಿಸೋಜಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ ಅಲಯನ್ಸ್ ವಿಶ್ವವಿದ್ಯಾಲಯದ ಕಾನೂನು ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು ಪಡೆದರೆ, ಮೈಸೂರಿನ ಜೆ.ಎಸ್.ಎಸ್ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಬಹುಮಾನವನ್ನು ಪಡೆದರು.














