ಬೆಂಗಳೂರು: ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಸುದೀರ್ಘ 33 ವರ್ಷಗಳಿಂದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ಶನಿವಾರ ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಯಲ್ಲಿ ಸೇವಾ ನಿವೃತ್ತಿ ಹೊಂದುತ್ತಿರುವ ಪ್ರಾಂಶುಪಾಲ ಡಾ. ಎಸ್. ವಿಜಯ್ ಕುಮಾರ್ ಅವರಿಗೆ ಕರ್ನಾಟಕ ರಾಜ್ಯ ತಾಂತ್ರಿಕ ಶಿಕ್ಷಣ ಇಲಾಖೆ ಎಸ್.ಸಿ- ಎಸ್.ಟಿ ನೌಕರರ ಒಕ್ಕೂಟ ಮತ್ತು ರಾಜ್ಯ ಸರ್ಕಾರಿ ಎಸ್.ಸಿ- ಎಸ್. ಟಿ ನೌಕರರ ಸಮನ್ವಯ ಸಮಿತಿಯ ವತಿಯಿಂದ ಬೀಳ್ಕೊಡುಗೆ ಸಮಾರಂಭ ನೆರವೇರಿಸಲಾಯಿತು ಈ ವೇಳೆ ಹಲವು ಗಣ್ಯರು ಅವರನ್ನು ಸನ್ಮಾನಿಸಿ ಗೌರವಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ಎಸ್.ಸಿ- ಎಸ್.ಟಿ ನೌಕರರ ಸಮನ್ವಯ ಸಮಿತಿಯ ರಾಜ್ಯಾಧ್ಯಕ್ಷ ಎಸ್. ಶಿವಶಂಕರ್, ಉಪಾಧ್ಯಕ್ಷ ಕೆಂಪ ಸಿದ್ದಯ್ಯ, ವಿಭಾಗಾಧಿಕಾರಿ ಶ್ಯಾಮಲಾ ಕುಮಾರಿ, ಉಪನ್ಯಾಸಕರುಗಳಾದ ಶಂಕರ್ ಗುರು, ಶ್ರೀನಿವಾಸ ಮೂರ್ತಿ, ಡಾ. ಮಹೇಶ್ ಕುಮಾರ್ ಎಂ, ಮಳವಳ್ಳಿ, ಸೋಮಶೇಖರ್, ನರಸಿಂಹ ಮೂರ್ತಿ, ಸಂದೇಶ ಕುಮಾರ್, ಸಿಬ್ಬಂದಿಗಳಾದ ರಮೇಶ್ ಮತ್ತು ಸೋಮಣ್ಣ, ಅಬ್ರರ್, ಭಾಸ್ಕರ್ ಸೇರಿದಂತೆ ಅಭಿಮಾನಿ ವರ್ಗದವರು, ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸುಮಾರು 33 ವರ್ಷಗಳ ತಾಂತ್ರಿಕ ಶಿಕ್ಷಣ ಇಲಾಖೆಯಡಿಯಲ್ಲಿ ಸೇವೆ ಸಲ್ಲಿಸಿರುವುದು ತೃಪ್ತಿ ತಂದಿದೆ. 1993 ರಲ್ಲಿ ಉಪನ್ಯಾಸಕನಾಗಿ ಸೇವೆಯನ್ನು ಆರಂಭಿಸಿದ ನಾನು ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಯ ಪ್ರಾಂಶುಪಾಲನಾಗಿ ನಿರ್ವೃತ್ತಿ ಹೊಂದುತ್ತಿದ್ದು, ಒಟ್ಟು ಸೇವಾವಧಿ ತೃಪ್ತಿಯನ್ನು ನೀಡಿದೆ ಎಂದು ಹೇಳಿದರು.
ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಉಪ ನಿರ್ದೇಶಕ, ಜಂಟಿ ನಿರ್ದೇಶಕ ಹುದ್ದೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇನೆ. ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಪಠ್ಯ ಕ್ರಮಗಳನ್ನು ನಿರೂಪಣೆ ಮಾಡುವಲ್ಲಿಯೂ ಭಾಗವಹಿಸಿರುವುದು ಸಂತೃಪ್ತಿಯನ್ನು ನೀಡಿದೆ. ಅನೇಕ ಸಂಘ ಸಂಸ್ಥೆಗಳಲ್ಲಿ ಸೇವಾವಧಿಯ ನಂತರದ ಸಮಯದಲ್ಲಿ ತೊಡಗಿಸಿಕೊಂಡು ಸಮುದಾಯಕ್ಕೆ ಮತ್ತು ಇಡೀ ಸಮಾಜಕ್ಕೆ ಕೊಡುಗೆ ನೀಡಲು ಪ್ರಯತ್ನಿಸಿದ್ದೇನೆ ಎಂದರು.
ಕರ್ನಾಟಕ ರಾಜ್ಯ ಎಸ್.ಸಿ – ಎಸ್.ಟಿ ನೌಕರರ ಸಮನ್ವಯ ಸಮಿತಿಯ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದೇನೆ. ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಸಹ ಯಶಸ್ವಿಯಾಗಿ ನಿರ್ವಹಿಸಿ ಹಲವು ಹೋರಾಟಗಳ ನೇತೃತ್ವ ವಹಿಸಿದ್ದೇನೆ. ಕಾರ್ಯಾಧ್ಯಕ್ಷ ಶಿವಶಂಕರ್ ಅವರ ಜೊತೆಗೂಡಿ ನೌಕರರ ಹಿತಾಸಕ್ತಿಗೆ ಬಂದ ಕುತ್ತಿಗಳ ವಿರುದ್ಧ ಹಲವು ಹೋರಾಟಗಳನ್ನು ಹಲವು ವರ್ಷಗಳ ಕಾಲ ನಿರಂತರವಾಗಿ ಆಯೋಜನೆ ಮಾಡಿರುವುದು ಅವಿಸ್ಮರಣೀಯವಾಗಿದೆ ಎಂದು ಡಾ. ಎಸ್. ವಿಜಯ್ ಕುಮಾರ್ ನುಡಿದರು.














