ಬೆಂಗಳೂರು: ಗಝಲ್ ಎನ್ನುವುದು ಆಧ್ಯಾತ್ಮ ಮತ್ತು ರಮ್ಯತೆಯ ಸಹಯೋಗದ ಉತ್ಕೃಷ್ಟ ರಚನೆ ಎಂದು ನಿವೃತ್ತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಅಭಿಪ್ರಾಯಪಟ್ಟರು.
ಭಾನುವಾರ ನಗರದ ಗಾಂಧಿ ಭವನದಲ್ಲಿ ಆದರ್ಶ ವಠಾರ ಜನಗಳ ಸಾಂಸ್ಕೃತಿಕ ಜಾಗೃತಿ ವೇದಿಕೆ ವತಿಯಿಂದ ಆಯೋಜಿಸಿದ್ದ ಲೇಖಕ ಸುನೀಲ್ ಕುಮಾರ್ ಎಸ್. ರಚಿಸಿರುವ ಮಧು ಹೀರಿದ ಅಧರಗಳು ಗಝಲ್ ಕೃತಿ ಬಿಡುಗಡೆ ಹಾಗೂ ಎಸ್.ಜಿ.ಸುಶೀಲಮ್ಮ ಅವರಿಗೆ ಅಮ್ಮಂದಿರ ಅಮ್ಮ ಸುಶೀಲಮ್ಮ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಭಾವಗೀತೆ, ಕಥನಗೀತೆ, ಕಾವ್ಯ, ಮಹಾಕಾವ್ಯ ಹೀಗೆ ಕನ್ನಡ ಸಾಹಿತ್ಯದಲ್ಲಿ ಅನೇಕ ಪ್ರಾರಕಾರಗಳಿವೆ. ಅದರಲ್ಲಿ ಗಝಲ್ ಕೂಡ ಒಂದು ಸಾಹಿತ್ಯ ಪ್ರಾಕಾರ. ಆಧ್ಯಾತ್ಮ ಮತ್ತು ರಮ್ಯತೆ ಜೋಡಿ ಇದಾಗಿದೆ. ಹೂವು, ಭೂಮಿ, ಆಕಾಶ, ನಕ್ಷತ್ರ, ಯುದ್ಧ ಸಂಘರ್ಷ ಎಂಬ ವಿಶಿಷ್ಟ ಭಾವಗಳನ್ನು ತೆಗೆದುಕೊಂಡು ಎರಡೆರಡು ಪಂಕ್ತಿಗಳಲ್ಲಿ ಅದನ್ನು ಬರೆಯುತ್ತಾ ಹೋಗುವುದು ಬರೆಯುವುದು ಕಷ್ಟಸಾಧ್ಯ, ಅದಕ್ಕೆ ಪ್ರತಿಭೆ ಮುಖ್ಯ ಎಂದು ತಿಳಿಸಿದರು.
ಗಝಲ್ನಲ್ಲಿನ ವಿಶೇಷತೆ ಅಧ್ಯಾತ್ಮ ಮತ್ತು ರಮ್ಯತೆಯನ್ನು ಒಂದುಗೂಡಿಸುವ ಕ್ರಮ. ಅದನ್ನು ಲೇಖಕ ವಿ.ಸುನೀಲ್ ಕುಮಾರ್ ತಮ್ಮ ಮಧು ಹೀರಿದ ಅಧರಗಳು ಕೃತಿಯಲ್ಲಿ ಚೆನ್ನಾಗಿ ಮಾಡಿದ್ದಾರೆ. ಹಿಂದಿ, ಉರ್ದುವಿನಲ್ಲಿ ಅನೇಕ ಗಝಲ್ಗಳು ಇವೆ. ಅದರ ಪ್ರಭಾವವೂ ಕೂಡ ಈ ಸಂಕಲನದ ಮೇಲೆ ಬೀರಿದೆ. ಹಾಗಾಗಿ ಈ ಸಂಕಲನ ವಿಶಿಷ್ಟವಾದದ್ದು. ಕನ್ನಡದಲ್ಲಿ ಬರೆಯುವ ಗಝಲ್ ಕವಿಗಳು ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚಿದ್ದಾರೆ. ಆದರೆ ದಕ್ಷಿಣ ಕರ್ನಾಟಕದಲ್ಲಿ ತೀರಾ ಕಡಿಮೆ, ಅಂತಹ ಕವಿಗಳ ಸಾಲಿನಲ್ಲಿ ಸುನೀಲ್ ಕುಮಾರ್ ಸೇರಿಕೊಂಡಿದ್ದಾರೆ ಎಂದು ಮಲ್ಲೇಪುರಂ ವೆಂಕಟೇಶ್ ಮೆಚ್ಚುಗೆ ವ್ಯಕ್ತಪಡಿಸಿದರು.
ಗಾಂಧಿ ಸ್ಮಾರಕ ನಿಧಿ ಗೌರವಾಧ್ಯಕ್ಷ ಡಾ.ವೂಡೇ ಪಿ.ಕೃಷ್ಣ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಕವಿತೆ ಓದುವರ ಸಂಖ್ಯೆ ಕಡಿಮೆಯಾಗುತ್ತಿದೆ. ನಮ್ಮಲ್ಲಿ ಕಾವ್ಯ, ಕವಿತೆಯ ಬಗ್ಗೆ ಪ್ರೀತಿ ಹೆಚ್ಚಾದರೆ ಮನುಷ್ಯತ್ವದ ಪ್ರೀತಿ ಹೆಚ್ಚಾಗುತ್ತದೆ. ಒಬ್ಬ ಮನುಷ್ಯನಾಗಬೇಕಾದರೆ ಸಾಹಿತ್ಯದ ಸ್ಪರ್ಷ ಬೇಕು. ಅದು ಇದ್ದಾಗ ಮನುಷ್ಯನಾಗುತ್ತಾನೆ. ಸಾಮಾಜಿಕವಾಗಿ ತನ್ನ ಹಿರಿಮೆಯನ್ನು ಗಳಿಸುವುದಕ್ಕೂ ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಕೃತ ವಿಶ್ವವಿದ್ಯಾನಿಲಯದ ಕುಲಪತಿ ಎಸ್.ಅಹಲ್ಯ, ಲೇಖಕ ಸುನೀಲ್ ಕುಮಾರ್, ಅಧಿಕಾರಿ ಜೆ.ಕೆ.ರಶ್ಮಿ, ಸಮಾಜ ಸೇವಕಿ ಎಸ್.ಜಿ.ಸುಶೀಲಮ್ಮ, ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಎ.ಅಮೃತ್ ರಾಜ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.














