ಬೆಂಗಳೂರು: ಕರ್ನಾಟಕದ ರಾಜಕೀಯ ರಣರಂಗಕ್ಕೆ ಮತ್ತೊಂದು ಹೊಸ ರಾಜಕೀಯ ಪಕ್ಷ ಅಧಿಕೃತವಾಗಿ ಪದಾರ್ಪಣೆ ಮಾಡಿದ್ದು, ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ನಂತಹ ಪ್ರಬಲ ಪಕ್ಷಗಳ ನಡುವೆ, ಅತಿ ಹಿಂದುಳಿದ ವರ್ಗಗಳ ಧ್ವನಿಯನ್ನು ಶಾಸನಸಭೆಯಲ್ಲಿ ಮೊಳಗಿಸುವ ಮಹತ್ವಾಕಾಂಕ್ಷೆಯೊಂದಿಗೆ ವಿಕಾಸಶೀಲ ಇನ್ಸಾನ್ ಪಾರ್ಟಿ ತನ್ನ ರಾಜಕೀಯ ಶುರುಮಾಡಲಿದೆ.
ಈ ಕುರಿತು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ರಾಜ್ಯ ಉಪಾಧ್ಯಕ್ಷ ಮೋಹನ್ ಕುಮಾರ್ ಬಿ.ಕೆ, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ರಾಜ್ಯದ ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡಿ ತುಳಿಯುತ್ತಾ ಬಂದಿವೆ ಇದನ್ನು ತಡೆಯಲು ನಮ್ಮ ಹಕ್ಕನ್ನು ಪಡೆಯಲು ಬಿಹಾರದ ಪಕ್ಷವಾದ ವಿಐಪಿ ಪಕ್ಷಕ್ಕ ರಾಜ್ಯ ಚುನಾವಣಾ ಕಣಕ್ಕೆ ಪಾದಾರ್ಪಣೆ ಮಾಡುತ್ತಿದೆ ಎಂದರು.
ರಾಜ್ಯದಲ್ಲಿ ಕೋಲಿ, ಗಂಗಾಮತ ಹಾಗೂ ಬೆಸ್ತ ಸಮಾಜದವರೇ ನಮ್ಮ ಪಕ್ಷದ ಮೂಲ ಮತದಾರರು. ನಮ್ಮ ಸಮಾಜದ ಜನಸಂಖ್ಯೆ ರಾಜ್ಯದಲ್ಲಿ ಬರೋಬ್ಬರಿ 60 ರಿಂದ 70 ಲಕ್ಷದಷ್ಟಿದೆ. ಆದರೆ, ಇಷ್ಟು ದೊಡ್ಡ ಮಟ್ಟದ ಜನಸಂಖ್ಯೆ ಇದ್ದರೂ ಶಾಸನಸಭೆಯಲ್ಲಿ ನಮ್ಮ ಸಮಾಜದ ಒಬ್ಬನೇ ಒಬ್ಬ ಶಾಸಕನಿಲ್ಲ. ಅಹಿಂದ ನಾಯಕರು ಎನಿಸಿಕೊಂಡಿರುವ ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯ ನಮಗೆ ಅನ್ಯಾಯ ಮಾಡಿದ್ದಾರೆ. ಇದನ್ನು ಅರಿತ ನಾವು 70 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಕಳೆದ ಹಲವಾರು ದಶಕಗಳಿಂದ ಮೂರು ಪ್ರಮುಖ ರಾಜಕೀಯ ಪಕ್ಷಗಳು ಹಿಂದುಳಿದ ಸಮಾಜಗಳನ್ನು ಕೇವಲ ವೋಟ್ ಬ್ಯಾಂಕ್ ಆಗಿ ಬಳಸಿಕೊಂಡು, ಅಧಿಕಾರ ಸಿಕ್ಕ ನಂತರ ನಿರ್ಲಕ್ಷ್ಯ ಮಾಡುತ್ತಿವೆ. ಪ್ರಬಲ ಸಮುದಾಯಗಳು ಮಾತ್ರ ಅಧಿಕಾರದ ಪಾಲು ಹಂಚಿಕೊಳ್ಳುತ್ತಿದ್ದು, ಅತಿ ಹಿಂದುಳಿದ ಹಾಗೂ ಅಲೆಮಾರಿ ಸಮಾಜಗಳನ್ನು ಮೂಲೆಗುಂಪು ಮಾಡಲಾಗಿದೆ ಎಂದರು.
ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಜೂನ್ 7ರಂದು ಬೆಂಗಳೂರಿನ ಪ್ರತಿಷ್ಠಿತ ಅಶೋಕ ಹೋಟೆಲ್ನಲ್ಲಿ ವಿಕಾಸಶೀಲ ಇನ್ಸಾನ್ ಪಾರ್ಟಿಯ ಬೃಹತ್ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಯಾವುದೇ ಸರ್ಕಾರ ರಚನೆಯಾಗಬೇಕಾದರೂ ತಮ್ಮ ಪಕ್ಷದ ಬೆಂಬಲ ಅನಿವಾರ್ಯವಾಗಲಿದೆ. ಇತರ ಪಕ್ಷಗಳಿಗೆ ಮುಂದಿನ ದಿನಗಳಲ್ಲಿ ಬುದ್ದಿಕಲಿಸಲಿದ್ದೇವೆ ಎಂದು ಮೋಹನ್ ಕುಮಾರ್ ಬಿ.ಕೆ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಪ್ರಶಾಂತ್ ಎ ಹೆಚ್, ಹಿಂದುಳಿದ ವರ್ಗಗಳ ರಾಜಗುರು ಸ್ವಾಮಿ, ಶಾಂತಪ್ಪ ಕೋಡಿ, ತಳವಾರ ಪೀಟ ಮಹದೇವ ಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.














