ಬೆಂಗಳೂರು: ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ವಿಶ್ವಕರ್ಮ ಸಮುದಾಯದ ಪಾತ್ರ ದೊಡ್ಡದು ಎಂದು ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಡಾ. ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಹೇಳಿದರು.
ಭಾನುವಾರ ಸಂಜೆ ಟೌನ್ಹಾಲ್ನಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಲಿಗಾಲದಲ್ಲಿ ಯಾರೂ ದೇವರನ್ನು ನೇರವಾಗಿ ನೋಡಿಲ್ಲ. ಆದ್ದರಿಂದ ವಿಗ್ರಹಗಳು ಪರಮಾತ್ಮನನ್ನು ನೋಡುವ ಅತ್ಯುತ್ತಮ ಮತ್ತು ಏಕೈಕ ಪರಿಯಾಗಿದೆ. ಅಂತಹ ವಿಗ್ರಹಗಳನ್ನು, ದೇವಾಲಯಗಳನ್ನು ನಿರ್ಮಾಣ ಮಾಡುವವರು ವಿಶ್ವಕರ್ಮ ಸಮುದಾಯದವರಾಗಿದ್ದಾರೆ. ಇದರಿಂದ ವಿಶ್ವಕರ್ಮರ ಸೇವೆ ಸಮಾಜಕ್ಕೆ ಕೊಡುಗೆಯಾಗಿದೆ ಎಂದು ಹೇಳಿದರು.
ಸಮಾಜದ ಸಂಘಟನೆಗಾಗಿ ಕೆ.ಪಿ. ನಂಜುಂಡಿ ಹಲವು ವರ್ಷಗಳಿಂದ ಬಹಳ ಶ್ರಮಪಟ್ಟಿದ್ದಾರೆ. ಮುಜರಾಯಿ ಇಲಾಖೆಯ ಎ ಮತ್ತು ಬಿ ದರ್ಜೆ ದೇವಾಲಯಗಳ ವ್ಯವಸ್ಥಾಪನ ಸಮಿತಿಯಲ್ಲಿ ವಿಶ್ವಕರ್ಮರೊಬ್ಬರಿಗೆ ಸ್ಥಾನ ನೀಡುವ ಅವರ ಬೇಡಿಕೆಯನ್ನು ಈಗಾಗಲೇ ಸದನದಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗಿದೆ. ಅದನ್ನು ಪ್ರತ್ಯೇಕವಾಗಿ ಮತ್ತೊಮ್ಮೆ ರಾಜ್ಯಪಾಲರಿಗೆ ಕಳುಹಿಸಿಕೊಡಲಾಗುವುದು ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಕಾರ್ಯಕ್ರಮದಲ್ಲಿ ಭರವಸೆ ನೀಡಿದರು.
ಶಾಸಕ ಎಸ್.ಟಿ ಸೋಮಶೇಖರ್ ಮಾತನಾಡಿ, ವಿಶ್ವಕರ್ಮರು ರಾಜ್ಯದ ಪ್ರಮುಖ ಸಮಾಜವಾಗಿದ್ದಾರೆ. 369 ವಾರ್ಡ್ಗಳಿರುವ ಗ್ರೇಟರ್ ಬೆಂಗಳೂರು ಚುನಾವಣೆಯಲ್ಲಿ 1 ಸ್ಥಾನಕ್ಕೆ ಟಿಕೆಟ್ಗಾಗಿ ವಿನಂತಿಸುವ ಅಗತ್ಯವಿಲ್ಲ. ಅದ ಅವರ ಹಕ್ಕು, ಅದನ್ನು ಗಟ್ಟಿ ಧ್ವನಿಯಿಂದ ಕೇಳಿದರೆ ಅದಕ್ಕೆ ಸೂಕ್ತ ಬೆಂಬಲ ನೀಡಲು ತಯಾರಿದ್ದೇನೆ ಎಂದರು.
ಯಾವುದೇ ಪದವಿ, ವಿದ್ಯೆ ಇಲ್ಲದೆ ದೇಶವನ್ನು ಕಟ್ಟುವುದು ವಿಶ್ವಕರ್ಮರಿಗೆ ರಕ್ತಗತವಾಗಿ ಬಂದಿದೆ. ರೈತರಿಗಾಗಿ ಕೃಷಿ ಉಪಕರಣಗಳನ್ನು ಕುಲುಮೆಯಲ್ಲಿ ಮಾಡಿ ಕೊಟ್ಟಿದ್ದು ವಿಶ್ವಕರ್ಮರು. ಈ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಒದಗಿಸುವುದೇ ನನ್ನ ಗುರಿ ಎಂದು ವಿಶ್ವಕರ್ಮ ಮಹಾಸಭೆಯ ರಾಜ್ಯಾಧ್ಯಕ್ಷ ಕೆ.ಪಿ. ನಂಜುಂಡಿ ಪ್ರತಿಪಾದಿಸಿದರು.
ಪತ್ರಕರ್ತ ರವಿ ಹೆಗಡೆ, ಲಗ್ಗೆರೆ ರವಿಕುಮಾರ್, ಐ.ಸಿ. ಪಾಂಚಾಳ್, ಸಮುದಾಯದ ಸ್ವಾಮೀಜಿಗಳು ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.














