ಬೆಳಗಾವಿ: ತಾಲೂಕಿನ ಬಿಜಗರ್ಣಿ ಗ್ರಾಮ ಪಂಚಾಯಿತಿಯಲ್ಲಿ ಸುಮಾರು 2 ಕೋಟಿ ರೂಪಾಯಿ ಮೊತ್ತದ ಅವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿದ್ದು, ಈ ಕುರಿತು ಬಿಜಗರ್ಣಿ ಗ್ರಾಮಸ್ಥರೊಬ್ಬರು ಈ ಬಗ್ಗೆ ದೂರು ನೀಡಿದ್ದಾರೆ.
ಹಲವಾರು ಭ್ರಷ್ಟಾಚಾರ ಹಾಗೂ ಅಕ್ರಮಗಳನ್ನು ಪ್ರಜಾ ನೆರಳು ದಿನ ಪತ್ರಿಕೆ ಬಯಲಿಗೆಳೆದಿದ್ದು, ಈಗ ಮತ್ತೊಂದು ಭ್ರಷ್ಟಾಚಾರ ಆರೋಪದ ಕರ್ಮಕಾಂಡವನ್ನು ನಿಮ್ಮ ಮುಂದೆ ಇಡುತ್ತಿದೆ. ಬಿಜಗರ್ಣಿ ಗ್ರಾಮಸ್ಥರಾದ ಶಶಿಕಾಂತ ದಾಮು ಮೋರೆ ಎಂಬುವರು ಬಿಜಗರ್ಣಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ ಎನ್ನಲಾದ ಬೋಗಸ್ ಬಿಲ್, ಭ್ರಷ್ಟಾಚಾರಗಳ ಬಗ್ಗೆ ಸಾಕ್ಷ್ಯಾಧಾರಗಳೊಂದಿಗೆ ದೂರು ಸಲ್ಲಿಸಿದ್ದಾರೆ.
ಗ್ರಾಮದ ಮರಾಠಿ ಪ್ರಾಥಮಿಕ ಶಾಲೆಯ ಮೈದಾನ ಅಭಿವೃದ್ಧಿಗೆ 1 ಕೋಟಿಗೂ ಅಧಿಕ ಹಣ ಖರ್ಚು ಮಾಡಿರುವುದುದಾಗಿ ಲೆಕ್ಕ ತೋರಿಸಿ ಬಿಲ್ ಎತ್ತಲಾಗಿದೆ. ಆದರೆ ಈ ಸ್ಥಳವನ್ನು ಖುದ್ದಾಗಿ ನೋಡಿದರೆ ಅಷ್ಟೊಂದು ಪ್ರಮಾಣದ ಯಾವುದೇ ಕಾಮಗಾರಿ ಇಲ್ಲಿ ನಡೆಯದಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ.
ಬಿಜಗರ್ಣಿ ಗ್ರಾಮ ಪಂಚಾಯಿತಿಯ ಹೊಸ ಕಟ್ಟಡ ನಿರ್ಮಾಣಕ್ಕೆ ಒಂದೂವರೆ ಕೋಟಿ ರೂಪಾಯಿ ಖರ್ಚು ಮಾಡಿರುವುದಾಗಿ ಲೆಕ್ಕ ತೋರಿಸಲಾಗಿದೆ. ಆದರೆ ಇದಕ್ಕೆ ಇಷ್ಟೊಂದು ದೊಡ್ಡ ಖರ್ಚು ಆಗಿಲ್ಲ ಎಂದು ಶಶಿಕಾಂತ ದಾಮು ಮೋರೆ ದೂರಿನಲ್ಲಿ ಆರೋಪಿಸಿದ್ದಾರೆ.
ಎನ್.ಆರ್.ಎಲ್.ಎಂ ಶೆಡ್ ಕಟ್ಟಲು 18 ಲಕ್ಷ ರೂಪಾಯಿ ಖರ್ಚು ತೋರಿಸಿ ಬಿಲ್ ಎತ್ತಲಾಗಿದೆ. ಆದರೆ ವಿಚಿತ್ರವೆಂದರೆ ಈ ಕಟ್ಟಡ ಇನ್ನೂವರೆಗೂ ಅಡಿಪಾಯ ಬಿಟ್ಟು ಮೇಲೆ ಎದ್ದಿಲ್ಲ. ಇಂಥ ಕಟ್ಟಡಕ್ಕೆ ಸುಣ್ಣ ಬಣ್ಣ ಬಳಿದಿರುವುದಾಗಿಯೂ ಬಿಲ್ ಎತ್ತಲಾಗಿದೆ ಎಂದು ಮೋರೆ ಹೇಳಿದ್ದಾರೆ.
ಶಶಿಕಾಂತ ದಾಮು ಮೋರೆ ಅವರು ಈ ಎಲ್ಲ ಬಾಬ್ತುಗಳ ಬಗ್ಗೆ ಮಾಹಿತಿ ಕೋರಿ ಆರ್.ಟಿ.ಐ ಅಡಿಯಲ್ಲಿ 2025ರ ಜೂನ್ 3 ರಂದು ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ 7 ತಿಂಗಳು ಕಳೆದರೂ ಗ್ರಾಪಂ ಇದಕ್ಕೆ ಉತ್ತರವನ್ನೇ ನೀಡಿಲ್ಲ.
15ನೇ ಹಣಕಾಸು ಯೋಜನೆ ಅಡಿಯಲ್ಲಿ ಬೋಗಸ್ ಬಿಲ್ಲ ತಯಾರಿಸಿ ಹಣ ನುಂಗಲಾಗಿದೆ ಎಂದು ಆರೋಪಿಸಲಾಗಿದೆ. ವಿಶೇಷ ಏನೆಂದರೆ ಹಾಲಿ ಗ್ರಾಮ ಪಂಚಾಯತ್ ಸದಸ್ಯ ಮಹೇಶ ಪಾಟೀಲ ಎಂಬುವರು ತಮ್ಮದೇ ಮಾಲೀಕತ್ವದ ವೈಷ್ಣವಿ ಟ್ರೇಡರ್ಸ್ ಅಂಗಡಿಯಿಂದ ಗ್ರಾಪಂ ಕಾಮಗಾರಿಗಳಿಗೆ ಮಟೀರಿಯಲ್ ಪೂರೈಕೆ ಮಾಡಿರುವುದಾಗಿ ಬಿಲ್ ಸೃಷ್ಟಿಸಿ ಹಣ ಕಬಳಿಸಿದ್ದಾರೆ ಎಂದು ದೂರುದಾರ ಮೋರೆ ಗಂಭೀರ ಆರೋಪ ಮಾಡಿದ್ದಾರೆ.
ಹಾಲಿ ಸದಸ್ಯರು ಹೀಗೆ ಯಾವುದೇ ಸರ್ಕಾರಿ ವ್ಯವಹಾರಗಳಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲವಾದರೂ ಇವರು ಹೇಗೆ ಬಿಲ್ ತೆಗೆದರು ಮತ್ತು ಅದನ್ನು ಹೇಗೆ ಪಾಸ್ ಮಾಡಿಸಿಕೊಂಡರು? ಇಷ್ಟೊಂದು ಭ್ರಷ್ಟಾಚಾರ ಆರೋಪ ಕೇಳಿ ಬಂದರೂ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಸುಮ್ಮನಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.
ದೂರುದಾರ ಶಶಿಕಾಂತ ದಾಮು ಮೋರೆ ಹೇಳುವುದೇನು?
ಬಿಜಗರ್ಣಿ ಗ್ರಾಮ ಪಂಚಾಯಿತಿಯ ಕಾಮಗಾರಿಗಳಲ್ಲಿ ಅಕ್ರಮ ನಡೆದಿರುವ ಬಗ್ಗೆ ನನಗೆ ಮಾಹಿತಿ ಸಿಕ್ಕಿದ್ದರಿಂದ ಜಿಲ್ಲಾ ಪಂಚಾಯಿತಿ ಮತ್ತು ಒಂಬುಡ್ಸ್ ಮನ್ ಅವರಿಗೆ ಸಾಕ್ಷಿಗಳ ಸಮೇತ ದೂರು ನೀಡಿದ್ದೇನೆ. ಆದರೂ ಮೇಲಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಎಲ್ಲ ಅವ್ಯವಹಾರಗಳು ಹರ್ಷವರ್ಧನ್ ಅಗಸರ್ ಎಂಬುವರು ಪಿಡಿಒ ಆಗಿದ್ದ 2023 ರಿಂದ 2024 ರವರೆಗಿನ ಅವಧಿಯಲ್ಲಿ ನಡೆದಿವೆ ಎಂದು ದೂರುದಾರ ಶಶಿಕಾಂತ ಮೋರೆ ಪ್ರಜಾನೆರಳು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.















