ಬೆಂಗಳೂರು: ಮಾಜಿ ಪ್ರಧಾನ ಮಂತ್ರಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಹುಟ್ಟು ಹಬ್ಬದ ಅಂಗವಾಗಿ ಅವರ ಕಟ್ಟಾ ಅಭಿಮಾನಿ, ವಿಧಾನ ಪರಿಷತ್ ಶಾಸಕ, ಜೆಡಿಎಸ್ ಹಿರಿಯ ನಾಯಕ ಟಿ.ಎ.ಶರವಣ ಹಮ್ಮಿಕೊಂಡ ಕಾರ್ಯ ಮಾದರಿಯಾಗಿ ಕಂಡುಬಂದಿತು.
ಸೋಮವಾರ ಒಂದು ದಿನ ಬೆಂಗಳೂರಿನ ಬಸವನಗುಡಿಯ ಹನುಮಂತ ನಗರದದ 50 ಅಡಿ ರಸ್ತೆಯ ನಮ್ಮ ದೇವೇಗೌಡ ಅಪ್ಪಾಜಿ ಕ್ಯಾಂಟೀನ್ನಲ್ಲಿ ಕೇವಲ 1 ರೂ.ಗೆ ಉಪಹಾರ ಹಾಗೂ ಮುದ್ದೆ ಊಟವನ್ನೂ ವಿತರಿಸಲಾಯಿತು. ಸಾವಿರಾರು ಜನ ಊಟ ಮಾಡಿ ಖುಷಿಪಟ್ಟರು. ಈ ಸಂದರ್ಭದಲ್ಲಿ ಪೌರ ಕಾರ್ಮಿಕರು ಮತ್ತು ಆಟೋ ಚಾಲಕರಿಗೆ ಬಟ್ಟೆ ವಿತರಣೆ ಮಾಡಲಾಯಿತು.
ಈ ವಿಶೇಷ ಕಾರ್ಯಕ್ಕೆ ಬಿಗ್ ಬಾಸ್ ಸೀಸನ್ -12 ವಿನ್ನರ್ ಗಿಲ್ಲಿ ನಟ ಅವರ ಆಗಮನ ಮೆರಗು ನೀಡಿತು. ಗಿಲ್ಲಿ ಅವರನ್ನು ನೋಡಲು, ಸಾವಿರಾರು ಜನ ಸೇರಿದ್ದರು. ಹಲವು ಗಣ್ಯರು ಈ ಸಂದರ್ಭಕ್ಕೆ ಸಾಕ್ಷಿಯಾದರು.
ಹಸಿದವರಿಗೆ ಅತಿ ಕಡಿಮೆ ಬೆಲೆಯಲ್ಲಿ ಊಟ, ಉಪಹಾರ ಒದಗಿಸುವ ದೇವೇಗೌಡ ಅಪ್ಪಾಜಿ ಕ್ಯಾಂಟೀನ್ ಅನ್ನು ವಿಧಾನ ಪರಿಷತ್ ಶಾಸಕ ಟಿ.ಎ.ಶರವಣ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಕಳೆದ 9 ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಬಸವನಗುಡಿ ವಿಧಾನಸಭಾ ಕ್ಷೇತ್ರದ ಹನುಮಂತ ನಗರದಲ್ಲಿ ಈ ಕ್ಯಾಂಟೀನ್ ಪ್ರತಿ ದಿನ ಸಾವಿರಾರು ಜನರಿಗೆ ಗುಣಮಟ್ಟದ, ಶುಚಿ ಹಾಗೂ ರುಚಿಯಾದ ಊಟ, ಉಪಹಾರಗಳನ್ನು ನೀಡುತ್ತಾ ಬಂದಿದೆ.
ವಿಶೇಷವಾಗಿ ಕೋವಿಡ್ ಸಮಯದಲ್ಲಿ ಈ ಕ್ಯಾಂಟೀನ್ ಲಕ್ಷಾಂತರ ಜನರಿಗೆ ಸಹಕಾರಿಯಾಗಿತ್ತು. ಹಸಿದವರಿಗೆ ಅನ್ನ ಕೊಡಬೇಕು ಎಂಬುದು ದೇವೇಗೌಡ ಅವರ ಕನಸಾಗಿದೆ. ಅದನ್ನು ನನಸಾಗಿಸಲು ಅವರ ಅಭಿಮಾನಿ ಶರವಣ ಅವರು ನಿರಂತರವಾಗಿ ಶ್ರಮಿಸುತ್ತಿದ್ದಾರೆ.














