ಬೆಂಗಳೂರು: ಸಂಪೂರ್ಣ ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಮಾದಿಗ ಸಂಘಟನೆಗಳ ಒಕ್ಕೂಟದಿಂದ ಮೇ27ರಂದು ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಆರ್.ಪಿ.ಐ, ಡಿ.ಎಸ್.ಎಸ್ ರಾಜ್ಯಾಧ್ಯಕ್ಷ ಎನ್.ಮೂರ್ತಿ ಮಾಹಿತಿ ನೀಡಿದರು.
ಗುರುವಾರ ನಗರದ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಪೂರ್ಣ ಒಳಮೀಸಲಾತಿ ಜಾರಿಗೆ ಆಗ್ರಹಿಸಿ, ರೋಸ್ಟರ್ ಬಿಂದು ಮಾರ್ಪಡಿಸಲು, ಬಡ್ತಿ, ಮುಂಬಡ್ತಿ ಎಸ್.ಸಿ.ಎಸ್.ಪಿ ಟಿ.ಎಸ್ ಹಾಗೂ ಮೀಸಲಾತಿ ಇರುವ ಕಡೆಯಲೆಲ್ಲಾ ಒಳ ಮೀಸಲಾತಿ ಅಳವಡಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ ಎಂದರು.
ಮೀಸಲಾತಿಯಿಂದ ವಂಚಿತರಾದ ಮಾದಿಗ ಸಮುದಾಯಗಳಿಗೆ ಸಮಾನ ಅವಕಾಶಗಳನ್ನು ಒದಗಿಸಿಕೊಡುವ, 101 ಪರಿಶಿಷ್ಟ ಜಾತಿಗಳಿಗೂ ಮೀಸಲಾತಿ ಸಮನಾಗಿ ಹಂಚಿಕೆಯ ಏಕೈಕ ಉದ್ದೇಶದಿಂದ ಒಳ ಮೀಸಲಾತಿ ವ್ಯವಸ್ಥೆ ಜಾರಿ ತರಲಾಗಿದೆ. ನಾಗಮೋಹನ್ದಾಸ್ ಹಾಗೂ ಜೆ.ಸಿ.ಮಾಧುಸ್ವಾಮಿ ವರದಿಯನ್ನು ಸರ್ಕಾರ ತಳ್ಳಿ ಹಾಕಿ ಒಳಮೀಸಲಾತಿ ವಿರೋಧಿಗಳ ಒತ್ತಡಕ್ಕೆ ಮಣಿದು ಬೀಸೋ ದೊಣ್ಣೆ ಏಟಿಗೆ ತಪ್ಪಿಸಿಕೊಳ್ಳಲು ಒಳಮೀಸಲಾತಿ ಜಾರಿಗೆ ತಂದಿರುವುದಾಗಿ ಬೀಗುತ್ತಿದೆ. ಇದು ರಾಜಕೀಯ ತಂತ್ರಗಾರಿಕೆಯ ಅವೈಜ್ಞಾನಿಕ ಒಳಮೀಸಲಾತಿಯಾಗಿದೆ ಎಂದು ಕಿಡಿಕಾರಿದರು.
ಒಳಮೀಸಲಾತಿ ಜಾರಿಗೊಳಿಸಿ ಹೊರಡಿಸಿರುವ ಅಧಿಸೂಚನೆ ಕಾನೂನು ಬಾಹಿರ ಹಾಗೂ ಅವೈಜ್ಞಾನಿಕ ಮತ್ತು ಗೊಂದಲದ ಗೂಡಾಗಿದೆ. ಇದರಿಂದ ಉದ್ದೇಶ ವಿಫಲವಾಗಿದೆ. 3 ಕ್ಕಿಂತ ಕಡಿಮೆ ರೋಸ್ಟರ್ ಹುದ್ದೆಗಳು ಲಭ್ಯವಾಗುತ್ತಿದ್ದು, ಪರಿಶಿಷ್ಟ 101 ಜಾತಿಗಳು ಈ ಹುದ್ದೆಗೆ ಸ್ಪರ್ಧಿಸಬೇಕು ಎಂದು ಆದೇಶಿಸಲಾಗಿದೆ. ಇದು ಒಳಮೀಸಲಾತಿ ಅನ್ವಯಿಸುವುದಿಲ್ಲ ಹೀಗಾಗಿ ಪರಿಶಿಷ್ಟ ಜಾತಿಗಳಿಗೆ 3 ಕ್ಕಿಂತ ಹೆಚ್ಚು ಹುದ್ದೆಗಳು ಲಭ್ಯವಿದ್ದರೆ ಮಾತ್ರ ಒಳಮೀಸಲಾತಿ ಕಲ್ಪಿಸಿದಂತೆ ಆಗಲಿದೆ. ಪರಿಶಿಷ್ಟ ಜಾತಿಯ ಎಬಿಸಿ ಗುಂಪುಗಳಿಗೆ ರೋಸ್ಟರ್ ಸಂಖ್ಯೆ 1,9,15 ಬಿಂದುಗಳು ಲಭ್ಯವಾಗದಿದ್ದರೆ 101 ಪರಿಶಿಷ್ಟ ಜಾತಿಗಳು ಒಟ್ಟಿಗೆ ಸ್ಪರ್ಧಿಸಬೇಕು ಎಂದು ಹೇಳಲಾಗಿದೆ ಎಂದರು.
ಬಿ ಮತ್ತು ಸಿ ವಿಭಾಗದ ಬಲಿಷ್ಟ ಜಾತಿಗಳೊಂದಿಗೆ ಮಾದಿಗ ಸಮುದಾಯ ಮತ್ತು ಅಲೆಮಾರಿ ಜಾತಿಗಳು ಸ್ಪರ್ಧಿಸಿ ತನ್ನ ಪಾಲು ಪಡೆಯಲು ಸಾಧ್ಯವಿಲ್ಲ. ಪರಿಶಿಷ್ಟ ಜಾತಿಗಳಿಗೆ ಮೀಸಲಿರಿಸಿರುವ ಬಹುತೇಕ ಹುದ್ದೆಗಳು ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಬಲಾಡ್ಯರಾಗಿರುವ ಪರಿಶಿಷ್ಟ ಜಾತಿಗಳ ಪಾಲಾಗುವಂತೆ ಹುನ್ನಾರ ನಡೆಸಲಾಗಿದೆ ಎಂದು ಆರೋಪಿಸಿದರು.
3 ಕ್ಕಿಂತ ಕಡಿಮೆ ರೋಸ್ಟರ್ ಹುದ್ದೆಗಳು ಲಭ್ಯವಾದರೆ ಪರಿಶಿಷ್ಟ ಸಾಮಾನ್ಯ ಎಂಬುದು ಅವೈಜ್ಞಾನಿಕ ಮತ್ತು ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಉಲ್ಲಂಘನೆ ಹಾಗೂ ಅಸಂವಿಧಾನಿಕ ಆದೇಶವಾಗಿದೆ. ಇದರ ಪರಿಣಾಮ ಬಹುತೇಕ ಗೆಜೆಟೆಡ್ ಕ್ಲಾಸ್ 1, 2 ಹುದ್ದೆಗಳು, ತಾಂತ್ರಿಕ ಶಿಕ್ಷಣ ಸಂಸ್ಥೆಗಳು, ವಿಶ್ವ ವಿದ್ಯಾಲಯದ ಕುಲಪತಿ, ಕುಲಸಚಿವ, ಪ್ರಾಧ್ಯಾಪಕ, ಸಹಾಯ ಪ್ರಾಧ್ಯಪಕ, ಹೆಚ್ಚುವರಿ ಪ್ರಾಧ್ಯಾಪಕ ಇತರೆ ಹುದ್ದೆಗಳು ಹಾಗೂ ಹಲವಾರು ಇಲಾಖೆಗಳಲ್ಲಿ ಮತ್ತು ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ನೇಮಕಾತಿಗಳು, ಕಲ್ಯಾಣ ಕರ್ನಾಟಕದ ಮೀಸಲಾತಿ ಹುದ್ದೆಗಳು ಅಲ್ಲದೆ ನೂರಾರು ಅನುದಾನ ಮತ್ತು ಅನುದಾನ ರಹಿತ ಸಂಸ್ಥೆಗಳ ಶಾಲಾ, ಕಾಲೇಜುಗಳಲ್ಲಿನ ಹುದ್ದೆಗಳಲ್ಲಿ ಲಭ್ಯವಾಗುವ ಹುದ್ದೆಗಳಲ್ಲಿ ಒಳಮೀಸಲಾತಿ ದೊರೆಯದಂತೆ ವ್ಯವಸ್ಥಿತ ಷಡ್ಯಾಂತರ ರೂಪಿಸಲಾಗಿದೆ ಎಂದು ದೂರಿದರು.
ಬಡ್ತಿ ಮತ್ತು ಮುಂಬಡ್ತಿಯಲ್ಲಿ ಮೀಸಲಾತಿ ನೀಡಲಾಗಿಲ್ಲ. ಆದಿ ಕರ್ನಾಟಕ, ಆದಿದ್ರಾವಿಡ, ಆದಿ ಆಂಧ್ರ ಜಾತಿಗಳಿಗೆ ನಾಗಮೋಹನ್ ದಾಸ್ ಆಯೋಗ ಶೇ.1% ರಷ್ಟು ಮೀಸಲಾತಿ ನೀಡಿತ್ತು. ಆದರೆ ಈ ಗುಂಪನ್ನು ತುಂಡರಿಸಿ ಈ ಜಾತಿಗಳನ್ನು ಗೊಂದಲದಲ್ಲಿ ಕೆಡವಿದೆ. 59 ಅಲೆಮಾರಿ ಮತ್ತು ಅರೆಅಲೆಮಾರಿ ಜಾತಿಗಳು ತೀರ ಹಿಂದುಳಿದಿದ್ದು, ಈ ಜಾತಿಗಳಿಗೆ ವಿಶೇಷ ಸ್ಥಾನ ನೀಡಿದ ಆಯೋಗ ಎ ಗ್ರೂಪ್ನಲ್ಲಿ ಶೇ.1% ರಷ್ಟು ಮೀಸಲಾತಿ ನೀಡಿತ್ತು. ಸರ್ಕಾರ ಯಾವ ಆಯೋಗದ ವರದಿಯನ್ನು ಆಧರಿಸಿದೆ ಸಿ ಗ್ರೂಪ್ನ ಬಲಿಷ್ಟ ಜಾತಿಗಳೊಂದಿಗೆ ಸೇರಿಸಿದೆ ಎನ್ನುವುದು ಅರ್ಥವಾಗುತ್ತಿಲ್ಲ. ಇದರಿಂದ ತೀವ್ರ ಅನ್ಯಾಯ ಆಗಿದೆ. ಈ ಕರಾಳ ಆದೇಶ ಕೆಲ ಜಾತಿಗಳಿಗೆ ಮರಣ ಶಾಸನವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಗೌರವಾಧ್ಯಕ್ಷ ಕೇಶವಮೂರ್ತಿ, ವಿಶ್ವ ಜಾಂಭವ ಮಹಾ ಸಭಾ ರಾಜ್ಯಾಧ್ಯಕ್ಷ ಡಾ.ಭೀಮರಾಜ್, ಅಖಿಲ ಭಾರತ ಮಾದಿಗ ದಂಡೋರ ರಾಜ್ಯಾಧ್ಯಕ್ಷ ಹುಸೇನಪ್ಪ ಮಾದಾರ್, ಜೈಭೀಮ್ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಕೆ.ಬಿ.ಆರ್.ಮುನಿರಾಜ್ ಮತ್ತಿತರರು ಹಾಜರಿದ್ದರು.














