ಬೆಂಗಳೂರು: ಗುರುವಾರ ತೆರೆ ಕಂಡ ಕೆಡಿ – ದಿ ಡೆವಿಲ್ ಬರಿ ಕತ್ತಿ-ಮಚ್ಚುಗಳ ಸಿನಿಮಾ ಆಗಿರದೆ, ಪ್ರೀತಿಗಾಗಿ ಮಿಡಿಯುವ ದ್ರೋಹದ ವಿರುದ್ಧ ಗುಡುಗುವ ಒಬ್ಬ ಅನಾಥನ ಆರ್ತನಾದ ಎಂದರೆ ತಪ್ಪಾಗಲಾರದು.
ಸಿನಿಮಾದ ಕಥೆ ನಮ್ಮನ್ನು 1970ರ ದಶಕದ ಬೆಂಗಳೂರಿಗೆ ಕರೆದೊಯ್ಯುತ್ತದೆ. ಆ ಕಾಲದ ಭೂಗತ ಲೋಕದ ಕರಾಳ ಮುಖಗಳು, ಅಧಿಕಾರದ ಹಪಾಹಪಿ, ಬಡವ-ಶ್ರೀಮಂತನ ನಡುವಿನ ಕಂದಕವನ್ನು ಪ್ರೇಮ್ ಅದ್ಭುತವಾಗಿ ಚಿತ್ರಿಸಿದ್ದಾರೆ. ನಾಯಕ ಕೇವಲ ಹೊಡೆಯುವವನಲ್ಲ, ಅನಿವಾರ್ಯತೆಯ ಒಬ್ಬ ಮುಗ್ಧ ಹುಡುಗ ಕಾಳಿದಾಸ, ವಿಧಿ ಆಟಕ್ಕೆ ಸಿಲುಕಿ ಹೇಗೆ ಕೆಡಿ ಎಂಬ ಭಯಾನಕ ಹೆಸರಾಗಿ ಬದಲಾಗುತ್ತಾನೆ ಎಂಬುದು ಚಿತ್ರದ ಜೀವಾಳ. ತನ್ನ ಕುಟುಂಬಕ್ಕೆ, ಅಣ್ಣನಿಗೆ ತೊಂದರೆಯಾದಾಗ ಆ ಮುಗ್ಧತೆ ಮರೆಯಾಗಿ ಅಲ್ಲಿ ರಾಕ್ಷಸನ ಅವತಾರವೊಂದು ಶುರುವಾಗುತ್ತದೆ. ಈ ಜರ್ನಿಯಲ್ಲಿ ಬರುವ ಅಣ್ಣ ತಮ್ಮನ ಸಂಬಂಧದ ಸನ್ನಿವೇಶಗಳು ಸಿನಿಮಾ ನೋಡುವ ಪ್ರೇಕ್ಷಕನ ಕಣ್ಣಲ್ಲಿ ನೀರು ತರಿಸುತ್ತವೆ. ಭಾವನೆ ಮತ್ತು ಹಿಂಸೆಯ ನಡುವಿನ ಆ ತೆಳು ಗೆರೆಯನ್ನು ಪ್ರೇಮ್ ಅತಿ ಅದ್ಭುತವಾಗಿ ತೆರೆಯ ಮುಂದೆ ತಂದಿದ್ದಾರೆ.
ಹಿಂದಿನ ಸಿನಿಮಾಗಳಿಗಿಂತ ಕೆಡಿಯಲ್ಲಿ ಧ್ರುವ ತುಂಬಾ ಪ್ರಬುದ್ಧವಾಗಿ ಕಾಣಿಸಿಕೊಂಡಿದ್ದಾರೆ. ಕ್ರಾಂತಿ ಕುಮಾರ್ ಬರೆದಿರುವ ಸಂಭಾಷಣೆಗಳನ್ನು ಒಪ್ಪಿಸುವ ಶೈಲಿಯಲ್ಲಿ ಆ ಗತ್ತು, ತೂಕ ಮತ್ತು ನೋವು ಸ್ಪಷ್ಟವಾಗಿ ಕಾಣಸಿಗುತ್ತದೆ. ಧ್ರುವ ಸರ್ಜಾ ಕೇವಲ ಸೌಂಡ್ ಮಾಡುವ ನಟನಲ್ಲ, ಭಾವನೆಗಳ ಮೂಲಕ ಸಂಚಲನ ಸೃಷ್ಟಿಸುವ ನಟ ಎಂದು ಈ ಸಿನಿಮಾ ಸಾಬೀತುಪಡಿಸಿದೆ.
ಪ್ರೇಮ್ ಸಿನಿಮಾವನ್ನು ಕೇವಲ ನಿರ್ದೇಶಿಸಿಲ್ಲ, ಬದಲಾಗಿ ಭಾರತೀಯ ಚಿತ್ರರಂಗದ ದೊಡ್ಡ ಶಕ್ತಿಗಳನ್ನು ಒಂದೇ ವೇದಿಕೆಗೆ ತಂದಿದ್ದಾರೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಪಾತ್ರ ಸಿನಿಮಾದಲ್ಲಿ ತೂಕದ ಹರಳು ಇದ್ದಂತೆ ಭಾಸವಾಗುತ್ತದೆ. ಅವರ ಅನುಭವದ ನಟನೆ ಸಿನಿಮಾದ ಗಾಂಭೀರ್ಯವನ್ನು ಹೆಚ್ಚಿಸಿದೆ. ಇನ್ನು ನಾವೆಲ್ಲರೂ ನೋಡಿದ್ದ ಚಾಕ್ಲೇಟ್ ಹೀರೊ ರಮೇಶ್ ಇಲ್ಲಿ ಕಣ್ಮರೆಯಾಗಿದ್ದಾರೆ. ಅವರ ಹೊಸ ಅವತಾರ ಪ್ರೇಕ್ಷಕರಿಗೆ ದೊಡ್ಡ ಶಾಕ್ ನೀಡುತ್ತದೆ. ಇಂತಹ ಕ್ರೂರ ಸೈಡ್ ಅವರಲ್ಲಿತ್ತಾ ಎಂದು ಆಶ್ಚರ್ಯವಾಗುತ್ತದ ಉಳಿದಂತೆ ಸಂಜಯ್ ದತ್ ಮತ್ತು ಶಿಲ್ಪಾ ಶೆಟ್ಟಿ ಚಿತ್ರಕ್ಕೆ ಪ್ಯಾನ್ ಇಂಡಿಯಾ ಮೆರುಗನ್ನು ನೀಡಿದ್ದಾರೆ. ಅವರ ಪಾತ್ರಗಳು ಸಿನಿಮಾದ ವ್ಯಾಪ್ತಿಯನ್ನು ಹೆಚ್ಚಿಸಿವೆ. ಕಿಚ್ಚ ಸುದೀಪ್ ಅವರ ಪ್ರವೇಶವಂತೂ ಇಡೀ ಸಿನಿಮಾದ ಅತಿದೊಡ್ಡ ಹೈಲೈಟ್ ಆಗಿದೆ. ಅವರ ಧ್ವನಿ ಮತ್ತು ಕ್ಲೈಮ್ಯಾಕ್ಸ್ನಲ್ಲಿ ಬರುವ ಅವರ ಕಾಲಭೈರವನ ಅವತಾರ ಥ್ರಿಲ್ ನೀಡುತ್ತದೆ. ಅವರ ಎಂಟ್ರಿ ಕೊಟ್ಟಾಗ ಥಿಯೇಟರ್ನಲ್ಲಿ ಆಗುವ ಸಿಳ್ಳೆ-ಚಪ್ಪಾಳೆಗಳೇ ಆ ಪಾತ್ರದ ಪವರ್ ಏನು ಎಂಬುದನ್ನು ಸಾರಿ ಹೇಳುತ್ತವೆ.
ಒಟ್ಟಿನಲ್ಲಿ ಕೆಡಿ ಚಿತ್ರವು ತಾಂತ್ರಿಕವಾಗಿ ಹೊಸ ಸಂಚಲನ ಸೃಷ್ಟಿಸಿದ್ದು, ಚಿತ್ರದ ಪ್ರತಿ ದೃಶ್ಯವೂ ಅದ್ದೂರಿಯಾಗಿ ಮೂಡಿಬರಲು ತಾಂತ್ರಿಕ ವರ್ಗದ ಶ್ರಮ ಎದ್ದು ಕಾಣುತ್ತಿದೆ.














