ಬೆಳಗಾವಿ: ಖಾನಾಪೂರ ತಾಲೂಕಿನ ಜಾಂಬೋಟಿಯಿಂದ ಕಣಕುಂಬಿಗೆ ಹೋಗುವ ರಸ್ತೆಯಲ್ಲಿ ಅಕ್ರಮವಾಗಿ 14 ಸಾವಿರ ಲೀಟರ್ ಸ್ವೀರಿಟ್ ಸಾಗಿಸುತ್ತಿದ್ದ ಲಾರಿಯನ್ನು ಜಪ್ತಿ ಮಾಡಿ ಚಾಲಕನನ್ನು ವಶಕ್ಕೆ ಪಡೆದು ನೋಟಿಸ್ ನೀಡಲಾಗಿದೆ. ವಾಹನದ ಮಾಲೀಕನನ್ನು ಬಂಧಿಸಲು ಅಬಕಾರಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ವಶಕ್ಕೆ ಪಡೆದ ವಾಹನ ಚಾಲಕನನ್ನು 47 ವರ್ಷದ ಸಿದ್ದರಾಜು ಪುಟ್ಟಸ್ವಾಮಿ ಶೆಟ್ಟಿ ಎಂದು ಗುರುತಿಸಲಾಗಿದ್ದು, ಈತ ಮೂಲತಃ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹೆಗ್ಗಿನವಾಳು ಗ್ರಾಮದವನಾಗಿದ್ದಾನೆ. ಚಾಕಲೇಟ್ ಬಣ್ಣದ ಅಶೋಕ ಲೆಲ್ಯಾಂಡ್ ಕಂಪನಿಯ ಲಾರಿ ವಶಕ್ಕೆ ಪಡೆದ ವಾಹನವಾಗಿದೆ. ಬಿಎನ್ಎಸ್ಎಸ್ ಕಾಯ್ದೆ 2023ರ ಕಲಂ 35(3)ರನ್ವಯ ಮುಂದಿನ ತನಿಖೆ ನಡೆಯಲಿದೆ. ಈ ದಾಳಿಯನ್ನು ಅಬಕಾರಿ ಅಪರ ಆಯುಕ್ತ ವೈ ಮಂಜುನಾಥ್ ನೇತೃತ್ವದಲ್ಲಿ ನಡೆಸಲಾಗಿದೆ.
ಅಬಕಾರಿ ಜಂಟಿ ಆಯುಕ್ತ ಎಫ್.ಎಚ್.ಚಲವಾದಿ, ಅಬಕಾರಿ ಉಪ ಆಯುಕ್ತ ಜಗದೀಶ್ ಎನ್.ಕೆ, ಅಬಕಾರಿ ಅಧೀಕ್ಷಕ ವಿಜಯಕುಮಾರ.ಜೆ. ಹಿರೇಮಠ, ಅಬಕಾರಿ ಉಪ ಅಧೀಕ್ಷಕರಾದ ರವಿ ಎಂ ಮುರಗೋಡ, ಅಬಕಾರಿ ನಿರೀಕ್ಷಕರಾದ ಮಂಜುನಾಥ ಮೆಳ್ಳಿಗೇರಿ, ನೂರುಲ್ಲಾ ಖಾನ್, ಸುನೀಲ ಎಸ್ ಪಾಟೀಲ, ಅಬಕಾರಿ ಮುಖ್ಯ ಪೇದೆ ಮಂಜುನಾಥ ಬಳಗಪ್ಪ, ಅಬಕಾರಿ ಪೇದೆಗಳಾದ ವಾಯ್. ಬಿ. ಪಾಟೀಲ, ಬಸವರಾಜ ವಿವೇಕಿ ಹಾಗೂ ಪ್ರಕಾಶ ನಂದಿ ದಾಳಿ ನಡೆಸಿದ ತಂಡದಲ್ಲಿದ್ದರು.














