ಬೆಂಗಳೂರು: ನಾಳೆ ರಾಷ್ಟ್ರಾದ್ಯಂತ ಕರೆ ನೀಡಲಾಗಿರುವ ಔಷಧಿ ವ್ಯಾಪಾರಿಗಳ ಒಂದು ದಿನದ ಮುಷ್ಕರಕ್ಕೆ ಬೆಂಗಳೂರು ನಗರ ಜಿಲ್ಲೆಯ ಔಷಧಿ ವ್ಯಾಪಾರಿಗಳು ಸಹಕಾರ ನೀಡಲಿದ್ದಾರೆ ಎಂದು ಬೆಂಗಳೂರು ಫಾರ್ಮ ರಿಟೇಲರ್ಸ್ ಅಂಡ್ ಡಿಸ್ಟ್ರಿಬ್ಯೂಟರ್ಸ್ ಪೋರಂ ಸ್ಪಷ್ಟಪಡಿಸಿದೆ.
ಮಂಗಳವಾರ ಈ ಕುರಿತು ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಪೋರಂ ನ ಅಧ್ಯಕ್ಷ ಆರ್. ರಘುನಾಥ್ ರೆಡ್ಡಿ, ಅಖಿಲ ಭಾರತ ಔಷಧಿ ವ್ಯಾಪಾರಿಗಳ ಸಂಘಟನೆ ದೇಶದ 12.40 ಲಕ್ಷಕ್ಕೂ ಹೆಚ್ಚು ಔಷಧಿ ವ್ಯಾಪಾರಿಗಳನ್ನು ಪ್ರತಿನಿಧಿಸುತ್ತದೆ. ಇದರೊಂದಿಗೆ ಕರ್ನಾಟಕ ರಾಜ್ಯ ಔಷಧಿ ವ್ಯಾಪಾರಿಗಳ ಸಂಘವೂ ಕೈಜೋಡಿಸಿದೆ. ಇದರ ಅಂಗ ಸಂಸ್ಥೆಯಾದ ಬೆಂಗಳೂರು ಫಾರ್ಮಾ ಕಿಟೇಲರ್ಸ್ ಅಂಡ್ ಡಿಸ್ಟ್ರಿಬ್ಯೂಟರ್ಸ್ ಫೋರಂ ಸಂಪೂರ್ಣ ನಾಳಿನ ಬಂದ್ ಗೆ ಬೆಂಬಲವನ್ನು ಘೋಷಿಸುತ್ತದೆ ಎಂದರು.
ಮೇ 20 ರಂದು ರಾಷ್ಟ್ರವ್ಯಾಪಿ ಒಂದು ದಿನದ ಸಾಂಕೇತಿಕ ಬಂದ್ಗೆ ಕರೆ ನೀಡಲಾಗಿದೆ. ನಮ್ಮ ಪ್ರಮುಖ ಸಮಸ್ಯೆಗಳಿಗೆ ಹಲವು ಬಾರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳಲಾಗಿಲ್ಲ. ಇದರಲ್ಲಿ ಅಕ್ರಮ ಇ-ಫಾರ್ಮಸಿಯಗಳನ್ನು ನಿಯಂತ್ರಿಸುವುದು ಪ್ರಮುಖ ಬೇಡಿಕೆಯಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಯದರ್ಶಿ ಸಿ.ವಿ ರಾಮೇಶಬಾಬು ಮಾತನಾಡಿ, ನಿಯಂತ್ರಣವಿಲ್ಲದೆ ಆನ್ಲೈನ್ ಔಷಧ ಮಾರಾಟ ಮಾಡಲಾಗುತ್ತಿದೆ. ನಕಲಿ ಪ್ರಿಸ್ಕ್ರಿಪ್ಪನ್ಗಳ ಬಳಕೆ ಕೂಡನಡೆಯುತ್ತಿದೆ. ಆಂಟಿಬಯೋಟಿಕ್ ಮತ್ತು ಚಟಕ್ಕೆ ಔಷಧಿಗಳ ದುರುಪಯೋಗವಾಗುತ್ತಿದೆ. ರೋಗಿ ಮತ್ತು ಫಾರ್ಮಸಿಸ್ಟ್ ನಡುವೆ ನೇರ ಸಂಪರ್ಕದ ಕೊರತೆಯಂತೂ ಎದ್ದು ಕಾಣುತ್ತಿದೆ. ನಕಲಿ ಮತ್ತು ಸರಿಯಾಗಿ ಸಂಗ್ರಹಿಸದ ಔಷಧಿಗಳಿಂದ ಅಪಾಯ ಕಟ್ಟಿಟ್ಟಬುತ್ತಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಅತಿಯಾದ ಡಿಸ್ಕೌಂಟ್ ನೀತಿ ಸರಿಯಲ್ಲ. ದೊಡ್ಡ ಕಂಪನಿಗಳ ಭಾರೀ ರಿಯಾಯಿತಿಯಿಂದ ಸಣ್ಣ ವ್ಯಾಪಾರಿಗಳಿಗೆ ಅಪಾಯ ತಪ್ಪಿದ್ದಲ್ಲ. ಇವೆಲ್ಲದರಿಂದ ಮಾರುಕಟ್ಟೆಯಲ್ಲಿ ಏಕಾಧಿಪತ್ಯದ ಭೀತಿ ಎದುರಾಗಿದೆ. ಆದ್ದರಿಂದ ಅಕ್ರಮ ಇ-ಫಾರ್ಮಸಿಗಳನ್ನು ಬಂದ್ ಮಾಡಬೇಕು. ಅತಿಯಾದ ಡಿಸ್ಕೌಂಟ್ ನೀಡುವುದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಸಣ್ಣ ಔಷಧಿ ವ್ಯಾಪಾರಿಗಳನ್ನು ರಕ್ಷಿಸಬೇಕು. ಇದು ಕೇವಲ ವ್ಯಾಪಾರದ ವಿಷಯವಲ್ಲ, ಸಾರ್ವಜನಿಕ ಆರೋಗ್ಯದ ಪ್ರಶ್ನೆಯಾಗಿದೆ. ದೇಶದ ಔಷಧ ವಿತರಣಾ ವ್ಯವಸ್ಥೆ ದುರ್ಬಲಗೊಂಡರೆ ಅದರ ದೊಡ್ಡ ನಷ್ಟ ಸಾಮಾನ್ಯ ರೋಗಿಗಳಿಗೆ ಆಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಂಟಿ ಕಾರ್ಯದರ್ಶಿ ಆರ್ ಸಿದ್ದಲಿಂಗೇಶ್ವರ, ಖಜಾಂಚಿ ಬಿ ನಾಗೇಶ್ ಕುಮಾರ್, ಪದಾಧಿಕಾರಿಗಳಾದ ಟಿ.ಆರ್ ಶ್ರೀನಿವಾಸ್, ಡಿ.ಆರ್ ಶಂಕರ್, ಹೆಚ್. ಎಸ್ ರಮೇಶ್ ಕುಮಾರ್, ಬಿ.ಕೆ ಅಶೋಕ್, ಎನ್. ಹರೀಶ್ ಉಪಸ್ಥಿತರಿದ್ದರು.














