ಬೆಂಗಳೂರು: ಕ್ಯಾನ್ಸರ್ ಚಿಕಿತ್ಸೆಗಾಗಿಯೇ ಮೀಸಲಾದ ಭಾರತದ ಅತಿದೊಡ್ಡ ಆಸ್ಪತ್ರೆಗಳ ಸಮೂಹವಾಗಿರುವ, ಹೆಲ್ತ್ಕೇರ್ ಗ್ಲೋಬಲ್ ಎಂಟರ್ಪ್ರೈಸಸ್ ಲಿಮಿಟೆಡ್ ಮಂಗಳವಾರ ಹೆಬ್ಬಾಳದ ಬ್ಯಾಟರಾಯನಪುರದಲ್ಲಿ ತನ್ನ ನೂತನ ಸಮಗ್ರ ಕ್ಯಾನ್ಸರ್ ಆಸ್ಪತ್ರೆಯನ್ನು ಉದ್ಘಾಟಿಸಿದೆ. ಈ ಮೂಲಕ ಉತ್ತರ ಬೆಂಗಳೂರಿನಲ್ಲಿ ಸುಧಾರಿತ ಆಂಕೊಲಾಜಿ ಸೇವೆಗಳ ಲಭ್ಯತೆ ಮತ್ತಷ್ಟು ಬಲಗೊಂಡಂತಾಗಿದೆ.
ಅತ್ಯಾಧುನಿಕ ತಂತ್ರಜ್ಞಾನ, ಪರಿಣಿತ ವೈದ್ಯಕೀಯ ತಂಡದ ಸಹಾನುಭೂತಿಯುತ ಆರೈಕೆಯನ್ನು ಒಂದೇ ಸೂರಿನಡಿ ತರುತ್ತಿರುವ ಆಸ್ಪತ್ರೆಯು, ಕರ್ನಾಟಕದ ಜನತೆಗೆ ವಿಶ್ವದರ್ಜೆಯ ಚಿಕಿತ್ಸೆಯನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಲು ಮುಂದಾಗಿದೆ. ನಿಖರ ಆಂಕೊಲಾಜಿ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲಾಗಲಿರುವ 132 ಹಾಸಿಗೆಗಳ ಸಾಮರ್ಥ್ಯದ ಈ ಹೊಸ ಸಂಕೀರ್ಣವು ಕರ್ನಾಟಕದ ಮೊಟ್ಟಮೊದಲ ಎಲೆಕ್ಟಾ ಯೂನಿಟಿ ಎಂಆರ್-ಲಿನಾಕ್ ತಂತ್ರಜ್ಞಾನ ಪರಿಚಯಿಸಿದೆ. ಇದು ವಿಶ್ವದ ಅತ್ಯಾಧುನಿಕ ನಿಖರ ವಿಕಿರಣ ಚಿಕಿತ್ಸಾ ವ್ಯವಸ್ಥೆಗಳಲ್ಲಿ ಒಂದಾಗಿದೆ.
ಈ ಕ್ರಾಂತಿಕಾರಿ ತಂತ್ರಜ್ಞಾನವು ಅತ್ಯುನ್ನತ ಗುಣಮಟ್ಟದ ಎಮ್ಆರ್ಐ ಇಮೇಜಿಂಗ್ ಅನ್ನು ಲೀನಿಯರ್ ಆಕ್ಸಿಲರೇಟರ್ ನೊಂದಿಗೆ ಅದ್ಭುತವಾಗಿ ಸಂಯೋಜಿಸುವುದಲ್ಲದೆ, ಅತ್ಯಂತ ನಿಖರವಾದ ರೋಗಿಯ ಪರಿಸ್ಥಿತಿಗೆ ತಕ್ಕಂತೆ ತಕ್ಷಣವೇ ಬದಲಾಯಿಸಬಲ್ಲ ಸಾಮರ್ಥ್ಯ ಹೊಂದಿದೆ. ಇನ್ನು ಎಲ್ಲಾ ರೀತಿಯ ಕ್ಯಾನ್ಸರ್ಗಳಿಗೆ ಚಿಕಿತ್ಸೆ ನೀಡುವ ಸಮಗ್ರ ಕೇಂದ್ರವಾಗಿ ವಿನ್ಯಾಸಗೊಳಿಸಲಾಗಿರುವ ಈ ಆಸ್ಪತ್ರೆಯು, ರೋಗನಿರ್ಣಯ, ಅತ್ಯಾಧುನಿಕ ಚಿಕಿತ್ಸೆ, ರೋಗಮುಕ್ತರಾಗಲು ಪೂರಕ ಬೆಂಬಲ ಒದಗಿಸಲಿದೆ.
ಈ ನೂತನ ಸೌಲಭ್ಯವನ್ನು ಉದ್ಘಾಟಿಸಿ ಮಾತನಾಡಿದ ಸ್ಯಾಂಡಲ್ವುಡ್ನ ಖ್ಯಾತ ನಟ, ನಿರ್ದೇಶಕ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಕ್ಯಾನ್ಸರ್ ಎಂಬುದು ಕೇವಲ ರೋಗಿಯನ್ನಷ್ಟೇ ಅಲ್ಲ, ಇಡೀ ಕುಟುಂಬವನ್ನೇ ತಲ್ಲಣಗೊಳಿಸುವ ರೋಗವಾಗಿದೆ. ಈ ನಿಟ್ಟಿನಲ್ಲಿ ಸಕಾಲಿಕ ರೋಗನಿರ್ಣಯ, ವ್ಯಾಪಕ ಜಾಗೃತಿ ಮತ್ತು ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆ ಲಭ್ಯವಾಗುವುದು ರೋಗಿಯ ಜೀವನದಲ್ಲಿ ನಿಜವಾದ ಬದಲಾವಣೆಯನ್ನು ತರಬಲ್ಲದು. ಎಚ್ಸಿಜಿಯ ಈ ಹೊಸ ಆಸ್ಪತ್ರೆಯು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಪರಿಣಿತ ವೈದ್ಯಕೀಯ ಆರೈಕೆಯನ್ನು ಜನರಿಗೆ ತಲುಪಿಸುವ ಮೂಲಕ ಈ ದಿಸೆಯಲ್ಲಿ ಶಕ್ತಿಶಾಲಿ ಹೆಜ್ಜೆಯನ್ನಿಟ್ಟಿದೆ. ಬೆಂಗಳೂರು ಮತ್ತು ಕರ್ನಾಟಕದಾದ್ಯಂತ ಕುಟುಂಬಗಳಿಗೆ ಇಂತಹ ವಿಶ್ವದರ್ಜೆಯ ಕ್ಯಾನ್ಸರ್ ಚಿಕಿತ್ಸೆ ಅತ್ಯಂತ ಸುಲಭವಾಗಿ ಸಿಗುತ್ತಿರುವುದು ನಿಜಕ್ಕೂ ಹೆಮ್ಮೆಯ ಹಾಗೂ ಸಂತೋಷದ ಸಂಗತಿಯಾಗಿದೆ ಎಂದು ಪ್ರಶಂಸಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಹೆಲ್ತ್ಕೇರ್ ಗ್ಲೋಬಲ್ ಎಂಟರ್ಪ್ರೈಸಸ್ ಲಿಮಿಟೆಡ್ ಸಂಸ್ಥಾಪಕ ಹಾಗೂ ಅಧ್ಯಕ್ಷ ಡಾ. ಬಿ. ಎಸ್. ಅಜಯ್ಕುಮಾರ್, ಇಂದಿನ ದಿನಗಳಲ್ಲಿ ಕ್ಯಾನ್ಸರ್ ಚಿಕಿತ್ಸೆಯು ದತ್ತಾಂಶ ಆಧಾರಿತ ತಂತ್ರಜ್ಞಾನದ ಪ್ರಗತಿಯನ್ನು ಒಳಗೊಂಡಿದ್ದು, ದೀರ್ಘಕಾಲೀನ ಚಿಕಿತ್ಸಾ ಫಲಿತಾಂಶಗಳನ್ನು ಸುಧಾರಿಸುವತ್ತ ಗಮನ ಹರಿಸಿದೆ. ನಮ್ಮ ಗುರಿ ಕ್ಯಾನ್ಸರ್ ಮರುಕಳಿಸದಂತೆ ತಡೆಯುವುದಾಗಿದೆ ಎಂದು ಹೇಳಿದರು.
ಹೆಲ್ತ್ಕೇರ್ ಗ್ಲೋಬಲ್ ಎಂಟರ್ಪ್ರೈಸಸ್ ಲಿಮಿಟೆಡ್ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಸಿಇಒ ಡಾ. ಮನೀಶ್ ಮಟ್ಟೂ, ಎಚ್ಸಿಜಿ ಕ್ಯಾನ್ಸರ್ ಆಸ್ಪತ್ರೆ ಸಿಒಒ ಮನಿಷಾ ಕುಮಾರ್ ಸೇರಿದಂತೆ ಹಲವು ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.














