ಬೆಂಗಳೂರು: ಒಳ ಮೀಸಲಾತಿ ಜಾರಿ ಸಂಬಂಧ ಆಗಿರುವ ಎಲ್ಲಾ ತಪ್ಪುಗಳನ್ನು ರಾಜ್ಯ ಸರ್ಕಾರ ಈ ಕೂಡಲೆ ಸರಿಪಡಿಸಬೇಕು. ಇಲ್ಲದಿದ್ದರೆ ಪ್ರತಿ ತಾಲೂಕು ಜಿಲ್ಲೆಗಳಲ್ಲಿ ತೀವ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು. ಈ ಸಂಬಂಧ ಇಂದು ಪದಾಧಿಕಾರಿಗಳ ಮಹತ್ವದ ಸಭೆಯನ್ನು ಕೂಡ ನಡೆಸಲಾಗಿದ್ದು, ಇದರಲ್ಲಿ ಮುಖ್ಯವಾಗಿ ಆಗಸ್ಟ್ 1 ರಂದು ವಿಧಾನಸೌಧ ಚಲೋ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಬಿ ನರಸಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಗುರುವಾರ ಗಾಂಧಿನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 101 ಜಾತಿಗಳಿಗೆ ಅನ್ವಯವಾಗುವಂತೆ ಪರಿಶಿಷ್ಟ ಜಾತಿಗಳಿಗೆ ರಾಜ್ಯ ಸರ್ಕಾರದಿಂದ ಒಳಮೀಸಲಾತಿಯನ್ನು ಅಧಿಕೃತವಾಗಿ ಜಾರಿಗೆ ತರಲಾಗಿದ್ದರೂ, ಅದರಲ್ಲಿನ ಲೋಪದೋಷಗಳನ್ನು ಸರಿಪಡಿಸಿಡಿರುವುದರಿಂದ ಸಾಕಷ್ಟು ಜನಾಂಗಕ್ಕೆ ಅನ್ಯಾಯವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ನಾಗಮೋಹನ್ ದಾಸ್ ಅವರ ವರದಿಯನ್ನು ಬಹುತೇಕವಾಗಿ ಅನುಸರಿಸಿ ಒಳಮೀಸಲಾತಿಯನ್ನು ಜಾರಿಗೆ ತಂದಿದ್ದೇವೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರ ಹೇಳಿಕೊಳ್ಳುತ್ತಿದೆ. ಆದರೆ ಪೂರ್ಣ ಪ್ರಮಾಣದಲ್ಲಿ ಅದರಲ್ಲಿನ ಅಂಶಗಳನ್ನು ಪರಿಗಣಿಸದೆ ಮತ್ತು ಇತರೆ ನಿವೃತ್ತ ನ್ಯಾಯಾಧೀಶರು ಕೂಡ ಈಗಾಗಲೇ ನೀಡಿರುವ ವರದಿಯನ್ನು ಪರಿಶೀಲಿಸದೆ ಆದೇಶ ಹೊರಡಿಸಲಾಗಿದೆ. ರೋಸ್ಟರ್ ಬಿಂದುಗಳಿಗೆ ಸಂಬಂಧಿಸಿದ ಗೊಂದಲ, ಮುಂಬಡ್ತಿಯಲ್ಲಿ ತಾರತಮ್ಯ ಮತ್ತು ಅಲೆಮಾರಿ ಸಮುದಾಯಗಳಿಗೆ ಸೂಕ್ತ ಪ್ರಾತಿನಿಧ್ಯ ದೊರೆಯದಿರುವುದು ಅಂತಿಮ ಆದೇಶದಲ್ಲಿ ಎದ್ದು ಕಾಣುತ್ತಿವೆ ಎಂದು ಹೇಳಿದರು.
ಈಗಿನ ಜಾರಿಗೆ ಬಂದಿರುವ ಒಳಮೀಸಲಾತಿ ಮಾದಿಗರಿಗಂತೂ ಮರಣ ಶಾಸನವಾಗಿದೆ. ಸುಮಾರು 35 ವರ್ಷದ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿಯ ಹಾಕ್ಕೋತಾಯಗಳಿಗೆ ಯಾವುದೇ ಮನ್ನಣೆಯನ್ನು ರಾಜ್ಯ ಸರ್ಕಾರ ನೀಡಿಲ್ಲ. ಒಳಮೀಸಲಾತಿಯನ್ನು ಕೆಲ ಸಚಿವರ ರಾಜಕೀಯ ತಂತ್ರಗಾರಿಕೆಗೆ ಒಳಪಟ್ಟು ಜಾರಿ ಮಾಡಿದಂತೆ ಭಾಸವಾಗುತ್ತಿದೆ. ಅಹಿಂದ ವರ್ಗದ ಕಲ್ಯಾಣಕ್ಕಾಗಿ ಶ್ರಮಿಸುದಾಗಿ ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ರೀತಿಯ ಅನ್ಯಾಯಕ್ಕೆ ಮೂಕ ಪ್ರೇಕ್ಷಕರಾಗಿರುವುದು ದುರ್ದೈವದ ಸಂಗತಿಯಾಗಿದೆ ಎಂದು ನರಸಪ್ಪ ದಂಡೋರ ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವೆಂಕಟೇಶ್ ಕತ್ತಿ ಸೇರಿದಂತೆ ಸಮಿತಿಯ ಪದಾಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.














