ಬೆಂಗಳೂರು: ರಾಜ್ಯದಲ್ಲಿ ಅಕ್ರಮ ಕೇರಳ ಲಾಟರಿ ಮಾರಾಟವನ್ನು ತಕ್ಷಣ ಸಂಪೂರ್ಣವಾಗಿ ನಿಲ್ಲಿಸಬೇಕು. ಸರ್ಕಾರವು ಶಾಸನಬದ್ಧ ರಾಜ್ಯ ಲಾಟರಿ ಯೋಜನೆಯನ್ನು ಮರು ಜಾರಿಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಲಾಟರಿ ಚಿಲ್ಲರೆ ಮಾರಾಟಗಾರರ ಸಂಘದ ಅಧ್ಯಕ್ಷ ಸಿ. ರಾಮಕೃಷ್ಣ ತಿಳಿಸಿದರು.
ಗುರುವಾರ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಕ್ರಮ ಲಾಟರಿಯಿಂದ ಉಂಟಾಗಿರುವ ಸಮಸ್ಯೆಗಳು ಸರ್ಕಾರದ ನಿರ್ಲಕ್ಷ್ಯ ದಿಂದ ಆಗಿದೆ. ಸಾವಿರಾರು ಕುಟುಂಬಗಳು ಇದರಿಂದ ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿವೆ. 1998 ರಲ್ಲಿ ಕೇರಳ ಸರ್ಕಾರ ಆರಂಭಿಸಿದ ಲಾಟರಿ ಯೋಜನೆಯು ಕಳೆದ ಹಲವು ವರ್ಷಗಳಿಂದ ಕರ್ನಾಟಕದಲ್ಲಿ ಅಕ್ರಮವಾಗಿ ವ್ಯಾಪಕವಾಗಿ ಹರಡುತ್ತಿದೆ. ಪ್ರತಿದಿನ ನೂರಾರು ಕೋಟಿ ರೂಪಾಯಿಗಳ ವ್ಯವಹಾರ ನಡೆಯುತ್ತಿದೆ. ಇದರಿಂದ ಕರ್ನಾಟಕ ಸರ್ಕಾರಕ್ಕೆ ಅಪಾರ ಪ್ರಮಾಣದ ಆದಾಯ ನಷ್ಟವಾಗುತ್ತಿದೆ ಎಂದರು.
ಲಾಟರಿ ಯೋಜನೆಯ ಮೂಲಕ ಸುಮಾರು 5 ರಿಂದ 6 ಸಾವಿರ ಕೋಟಿ ರೂಪಾಯಿಗಳ ವಾರ್ಷಿಕ ಆದಾಯ ರಾಜ್ಯದ ಖಜಾನೆಗೆ ಹರಿದು ಬರುತ್ತಿತ್ತು. ಜೊತೆಗೆ 10 ರಿಂದ 12 ಸಾವಿರಕ್ಕೂ ಹೆಚ್ಚು ಕುಟುಂಬಗಳು ಲಾಟರಿ ಮಾರಾಟವನ್ನೇ ಅವಲಂಬಿಸಿ ಜೀವನ ನಡೆಸುತ್ತಿದ್ದರು. ಆದರೆ 2007ರಲ್ಲಿ ರಾಜ್ಯ ಲಾಟರಿ ಯೋಜನೆ ಸ್ಥಗಿತಗೊಂಡ ನಂತರ ಈ ಕುಟುಂಬಗಳು ಉದ್ಯೋಗ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ತಳ್ಳಲ್ಪಟ್ಟಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಸಾವಿರಾರು ಲಾಟರಿ ಮಾರಾಟಗಾರರ ಬದುಕು, ಉದ್ಯೋಗ ಮತ್ತು ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ರಾಜ್ಯಕ್ಕೆ ಸಾವಿರಾರು ಕೋಟಿ ರೂಪಾಯಿ ಆದಾಯ ತರುವ ಯೋಜನೆಯನ್ನು ಪುನಃ ಆರಂಭಿಸಿ ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳಿಗೆ ಆರ್ಥಿಕ ಬಲ ಒದಗಿಸಬೇಕು ಎಂದು ಹೇಳಿದರು.
ವಕೀಲರಾದ ಭಾಸ್ಕರ್ ಬಾಬು ಮಾತನಾಡಿ, ಲಾಟರಿ ಕಾಯಿದೆ ಆನ್ವಯ ಈ ಮುಂಚೆ ರಾಜ್ಯ ಸರ್ಕಾರ ನಡೆಸುತ್ತಿದ್ದ ಲಾಟರಿಯನ್ನು ಪುನರ್ ಆರಂಭಿಸಬೇಕು. ಇದರಿಂದ ಸರ್ಕಾರಕ್ಕೆ ಅದಾಯ ಬರುತ್ತದೆ. ಲಾಟರಿ ಏಜೆಂಟ್ರಿಗೆ ಉದ್ಯೋಗ ಲಭಿಸುತ್ತದೆ. ಲಾಟರಿಯಿಂದ ಬಂದ ಲಾಭದ ಹಣದಲ್ಲಿ ಸರ್ಕಾರ ಅಭಿವೃದ್ದಿ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದರು.
ವಾರದ ಡ್ರಾ ಹಾಗೂ ಬಂಪರ್ ಡ್ರಾ ಲಾಟರಿ ಖರೀದಿ ಒಂದು ಸಾಮಾನ್ಯ ಹವ್ಯಾಸವಾಗಿದ್ದು, ಲಾಟರಿ ಖರೀದಿದಾರರು ಜೂಜಿನ ವ್ಯಸನಿಗಳಾಗುವುದಿಲ್ಲ. ಕೇರಳ ರಾಜ್ಯ ಲಾಟರಿ ರಾಜ್ಯದಲ್ಲಿ ಕಳ್ಳಸಂತೆ ಮಾರಾಟದಿಂದ ರಾಜ್ಯಕ್ಕೆ ತೆರಿಗೆ ವಂಚನೆಯಾಗುತ್ತಿದೆ. ಕೊಡಲೇ ಮುಖ್ಯಮಂತ್ರಿಗಳು ಕೇರಳ ಲಾಟರಿ ಮಾರಾಟಕ್ಕೆ ಕಡಿವಾಣ ಹಾಕಬೇಕು. ರಾಜ್ಯ ಲಾಟರಿ ಇಲಾಖೆ ಸ್ಥಾಪನೆ ಮಾಡಿ ಸಾಂಪ್ರಾದಾಯಿಕ ಕರ್ನಾಟಕ ಲಾಟರಿ ಮಾರಾಟಕ್ಕೆ ಅವಕಾಶ ನೀಡಬೇಕು ಎಂದು ಹೇಳಿದರು.















