ಬೆಂಗಳೂರು: ಕಾನೂನು ಪ್ರತಿಯೊಬ್ಬ ನಾಗರೀಕನ ಜೀವನದ ಅವಿಭಾಜ್ಯ ಅಂಗವಾಗಿದೆ. ಈ ದೇಶದ ಪ್ರತಿಯೊಬ್ಬ ಪ್ರಜೆ ಸುರಕ್ಷಿತವಾಗಿ ಬಾಳಬೇಕಾದರೆ ಇದರ ಅಗತ್ಯ ಬಹಳಷ್ಟಿದೆ. ಆದ್ದರಿಂದ ನೆಲದ ಕಾನೂನನ್ನು ಎಲ್ಲರೂ ಗೌರವಿಸಿ, ಆದರಿಸುವುದು ಅನಿವಾರ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಜಸ್ಟಿಸ್ ಪದ್ಮರಾಜ್ ಎನ್ ದೇಸಾಯಿ ಅಭಿಪ್ರಾಯಪಟ್ಟರು.
ಶುಕ್ರವಾರ ಬಿಎಂಎಸ್ ಕಾಲೇಜಿನ ಇಂಡೋರ್ ಸ್ಟೇಡಿಯಂ ನಲ್ಲಿ ಬಿ.ಎಂ.ಎಸ್ ಲಾ ಕಾಲೇಜಿನ ಗ್ರಾಜುಯೇಷನ್ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಪದ್ಮರಾಜ್ ದೇಸಾಯಿ ಅವರು, ಪ್ರತಿಯೊಬ್ಬ ವ್ಯಕ್ತಿಗೂ ಕಾನೂನಿನ ಅರಿವಿನ ಅಗತ್ಯವಿದೆ. ಈ ನಿಟ್ಟಿನಲ್ಲಿ ಕಾನೂನು ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿಯನ್ನು ಮನಗೊಂಡು ಸಮಾಜವನ್ನು ಕಟ್ಟುವ ಕೆಲಸಕ್ಕೆ ಮುಂದಾಗಬೇಕಿದೆ. ವಿದ್ಯಾರ್ಥಿಗಳ ಪಾತ್ರ ಇದರಲ್ಲಿ ಪ್ರಮುಖವಾಗಿದೆ ಎಂದರು.
ಸ್ವಾತಂತ್ರ್ಯ ಸಂಗ್ರಾಮದ ಮುಖ್ಯ ವಾಹಿನಿಯಲ್ಲಿ ಇದ್ದವರು ವಕೀಲರೆ ಆಗಿದ್ದಾರೆ. ಮಹಾತ್ಮ ಗಾಂಧೀಜಿ, ಜವಾಹರ್ ಲಾಲ್ ನೆಹರು, ಬಾಬಾ ಸಾಹೇಬ್ ಅಂಬೇಡ್ಕರ್, ವಲ್ಲಭಾಯಿ ಪಟೇಲ್ ಸೇರಿದಂತೆ ಬಹುತೇಕ ಅಂದಿನ ನಾಯಕರು ಕಾನೂನು ಪದವೀಧರರಾಗಿದ್ದರು. ಅವರುಗಳಿಂದಲೇ ನಮ್ಮ ದೇಶಕ್ಕೆ ಸ್ವಾತಂತ್ರ ಸಿಗುವಂತಾಯಿತು ಎಂದು ಹೇಳಿದರು.
ನ್ಯಾಯಾಂಗ ಪ್ರತಿಯೊಬ್ಬ ನಾಗರೀಕರ ದುಃಖ ವಿಮಾನಗಳಿಗೆ ಪರಿಹಾರವಾಗಿ ಕಾರ್ಯನಿರ್ವಹಿಸಿದೆ. ಬರೀ ವ್ಯಕ್ತಿಗಳು ಮಾತ್ರವಲ್ಲದೆ ಸಂಘ, ಸಂಸ್ಥೆಗಳಿಗೆ ಸುಲಲಿತವಾಗಿ ಕೆಲಸ ನಿರ್ವಹಿಸಲು ಅನುವು ಮಾಡಿ ಕೊಟ್ಟಿದೆ. ದೇಶಗಳ ನಡುವೆ ಉತ್ತಮ ಬಾಂಧವ್ಯಕ್ಕೆ ಸೇತುವೆಯಾಗಿದೆ. ಸಮರೋಪಾದಿಯಲ್ಲಿ ಎಲ್ಲಾ ಹಂತದ ನ್ಯಾಯಾಲಯಗಳು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಇನ್ನು ಈ ತಂತ್ರಜ್ಞಾನದ ಯುಗದಲ್ಲಿ ಕಾನೂನಿನ ಮಹತ್ವ ಮತ್ತಷ್ಟು ಹೆಚ್ಚಾಗಿದೆ. ಆದ್ದರಿಂದ ಪದವಿ ಪೂರೈಸಿದ ವಿದ್ಯಾರ್ಥಿಗಳಿಗೆ ವಿಪುಲ ಅವಕಾಶಗಳು ತೆರೆದುಕೊಳ್ಳುತ್ತಿವೆ ಎಂದು ತಿಳಿಸಿದರು.
287 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ:
ಬಿಎಂಎಸ್ ಕಾನೂನು ಕಾಲೇಜಿನ ಪದವಿ ಪ್ರಧಾನ ಸಮಾರಂಭದಲ್ಲಿ ಒಟ್ಟು 287 ವಿದ್ಯಾರ್ಥಿಗಳು ಪದವಿಯನ್ನು ಪಡೆದರು. 32 ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಪಡೆದು ವಿಶೇಷ ಪುರಸ್ಕಾರಕ್ಕೆ ಬಾಜನರಾದರು. ಅಲುಮಿನಿ ಕಾಂಟ್ರಿಬ್ಯೂಷನ್ ಅವಾರ್ಡ್ಸ್ 12 ಜನಕ್ಕೆ ನೀಡಲಾಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಚೇರ್ಮನ್ ಅವಿರಾಮ ಶರ್ಮ, ಆಡಳಿತ ಅಧಿಕಾರಿ ಎಸ್. ರಾಘವನ್, ಪ್ರಿನ್ಸಿಪಾಲರಾದ ಡಾ. ಅನಿತಾ ಎಫ್. ಎನ್. ಡಿಸೋಜ ಹಾಗೂ ಇತರರು ಹಾಜರಿದ್ದರು. ಸ್ವಾಗತ ಭಾಷಣವನ್ನು ಡಾ. ವೀರಭದ್ರಯ್ಯ ಮಾಡಿದರು ವಂದನಾರ್ಪಣ ಭಾಷಣವನ್ನು ವಾಸವಿ ಎಲ್. ಎಸ್ ಮಾಡಿದರು.














