ಖಾನಾಪುರ: ತಾಲೂಕು ಸರ್ವೆ ಡಿಪಾರ್ಟಮೆಂಟಿನಲ್ಲಿ ಸರ್ವೆಯರ್ ಆಗಿರುವ ಆಸಾಮಿಯೊಬ್ಬರು ತಾಲೂಕಿನಲ್ಲಿಯೇ 4 ಎಕರೆ ಜಮೀನು ಅಭಿವೃದ್ಧಿ ಪಡಿಸಿ ಲೇಔಟ್ ಮಾಡಿದ್ದಾರೆ. ಸಾಮಾನ್ಯವಾಗಿ ಸರ್ಕಾರಿ ನೌಕರನೊಬ್ಬ ಖಾಸಗಿಯಾಗಿ ಲಾಭದಾಯಕ ದಂಧೆ ಮಾಡಲು ನಿಯಮಾವಳಿಗಳಲ್ಲಿ ಅವಕಾಶವೇ ಇಲ್ಲ. ಆದರೂ ಖಾನಾಪುರ ತಾಲೂಕಿನ ಸರ್ವೆ ಇಲಾಖೆ ಅಧಿಕಾರಿಯು ರಾಜಾರೋಷವಾಗಿ ಭ್ರಷ್ಟಾಚಾರದಲ್ಲಿ ನಿರತರಾಗಿದ್ದಾರೆ.
ಇತ್ತೀಚಿನ ಎರಡು ವರ್ಷಗಳಲ್ಲಿ ಮೂವರು ಸರ್ವೆಯರ್ಗಳ ಮೇಲೆ ಲೋಕಾಯುಕ್ತ ದಾಳಿಯಾಗಿದೆ. ಜೊತೆಗೆ ಓರ್ವ ತಹಶೀಲ್ದಾರ್ ಮೇಲೆಯೂ ಲೋಕಾಯುಕ್ತ ದಾಳಿಯಾಗಿದೆ. ಈ ಪ್ರಕರಣಗಳ ತನಿಖೆ ನಡೆಯುತ್ತಿದೆ. ಇದಲ್ಲದೆ ಚೋರ್ಲಾ ಮಾನ್ ಗ್ರಾಮದ ಬಳಿ ನಡೆದ 500 ಎಕರೆ ಜಮೀನು ಅವ್ಯವಹಾರ ಪ್ರಕರಣದಲ್ಲಿ ಇಬ್ಬರು ಸರ್ವೆಯರ್ ಅಮಾನತು ಆಗಿದ್ದಾರೆ. ಇದು ರಾಜ್ಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು.
ಈಗ ಬೆಳಗಾವಿ ಖಾನಾಪುರ ತಾಲೂಕಿನಲ್ಲಿಯೂ ಬಹಳ ದೊಡ್ಡ ಪ್ರಮಾಣದ ಭೂ ಅವ್ಯವಹಾರಗಳು ನಡೆಯುತ್ತಿರುವುದು ಕಂಡು ಬಂದಿದೆ. ಸರ್ಕಾರಿ ಅಧಿಕಾರಿಗಳು ಯಾವುದೇ ಹೆದರಿಕೆ ಇಲ್ಲದೆ ತಮ್ಮ ಹೆಂಡತಿ, ಬಂಧುಗಳು ಹೀಗೆ ಕಂಡ ಕಂಡವರ ಹೆಸರಲ್ಲಿ ಜಮೀನು ಖರೀದಿಸಿ ಲೇಔಟ್ ಮಾಡುತ್ತಿರುವುದು ಸತ್ಯ. ಈ ಭ್ರಷ್ಟ ಅಧಿಕಾರಿಗಳಿಗೆ ಇಷ್ಟೆಲ್ಲ ಅಕ್ರಮ ಎಸಗಲು ಧೈರ್ಯ ಬಂದಿದ್ದಾದರೂ ಹೇಗೆ ಎಂಬ ಪ್ರಶ್ನೆ ಮೂಡಿದೆ.
ತಾಲೂಕಿನಲ್ಲಿ ಏಜೆಂಟ್ ಗಳು ಮತ್ತು ಡೆವಲಪರ್ಗಳೊಂದಿಗೆ ಸೇರಿಕೊಂಡು ಸಾಕಷ್ಟು ಅವ್ಯವಹಾರಗಳನ್ನು ಇವರು ಮಾಡಿದ್ದಾರೆ. ಇದರ ಸಮಗ್ರ ದಾಖಲಾತಿಗಳು ಪ್ರಜಾ ನೆರಳು ದಿನಪತ್ರಿಕೆಗೆ ಲಭ್ಯವಾಗಿದ್ದು, ಶೀಘ್ರದಲ್ಲಿಯೇ ಈ ಆಸಾಮಿಗಳ ಜಾತಕವನ್ನು ಬಿಚ್ಚಿಡಲಾಗುವುದು.
ಯಾರೇ ಅಧಿಕಾರಿಗಳು ಅಕ್ರಮ ಎಸಗುವುದು ಕಂಡು ಬಂದರೆ ಅವರಿಗೆ ನೋಟಿಸ್ ಕೊಟ್ಟು ಶಿಸ್ತು ಕ್ರಮಕ್ಕೆ ಮುಂದಾಗುತ್ತೇವೆ. ಯಾವುದೇ ಸರ್ಕಾರಿ ನೌಕರರು ಖಾಸಗಿ ವ್ಯವಹಾರ ಮಾಡಲು ಅವಕಾಶವಿಲ್ಲ. ಇದರ ಬಗ್ಗೆ ನಮ್ಮ ಗಮನಕ್ಕೆ ಬಂದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಭೂಮಾಪನ ಇಲಾಖೆಯ ಜಂಟಿ ನಿರ್ದೇಶಕ ಉಮೇಶ ಬಿ.ಜಿ ಪ್ರಜಾ ನೆರಳು ದಿನಪತ್ರಿಕೆಗೆ ಹೇಳಿಕೆ ನೀಡಿದ್ದಾರೆ.















