ಬೆಂಗಳೂರು: ವಕ್ಪ್ ಕಮಿಟಿ ಮತ್ತು ಹಜ್ ಸಮಿತಿಯಲ್ಲಿನ ಹಳೆಯ ಸದಸ್ಯರನ್ನು ವಜಾಗೊಳಿಸಿ ನೂತನ ಸದಸ್ಯರನ್ನು ನೇಮಕ ಮಾಡಬೇಕು ಎಂದು ಐಕ್ಯತಾ ಒಕ್ಕೂಟದ ರಾಜ್ಯಾಧ್ಯಕ್ಷ ಮುಜಾಹಿದ್ ಅಲಿಬಾಬ ಒತ್ತಾಯಿಸಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯು.ಟಿ.ಖಾದರ್ ಅವರ ಮೇಲೆ ಮುಸ್ಲಿಂ ಸಮುದಾಯ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡೆ. ಹಾಲಿ ಇರುವ ಸದಸ್ಯರಾದ ಖಾಲೀದ್ ಹಾಗೂ ಇತರರನ್ನು ಕೂಡಲೇ ವಜಾಗೊಳಿಸಿ ನೂತನ ಸದಸ್ಯರನ್ನು ನೇಮಕ ಮಾಡುವ ಮೂಲಕ ವಕ್ಪ್ ಆಸ್ತಿ ಸಂರಕ್ಷಣೆಗೆ ಮುಂದಾಗಬೇಕು. ವಕ್ಪ್ ಬೋರ್ಡ್ ಮತ್ತು ಹಜ್ ಸಮಿತಿಯಲ್ಲಿ ಹಣಕಾಸು ಉಸ್ತುವಾರಿ ಹೊಂದಿರುವ ಷಾಫಿ ಸಾದಿ ಮತ್ತು ಅನ್ವರ್ ಬಾಷಾ ಅವರ ಅಧಿಕಾರವನ್ನು ವಾಪಾಸ್ ಪಡೆದು ಬೇರೆಯವರಿಗೆ ನೀಡಬೇಕು, ಅವರ ಅವಧಿಯಲ್ಲಿ ನಡೆದಿರುವ ಆಕ್ರಮಗಳ ಕುರಿತು ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಮೈಸೂರಿನಲ್ಲಿ 35ವಕ್ಪ್ ಬೋರ್ಡ್ ಆಸ್ತಿಯಲ್ಲಿ 34ವಕ್ಪ್ ಬೋರ್ಡ್ ಆಸ್ತಿಗಳಿಗೆ ಯಾವುದೇ ರೀತಿಯ ನೊಂದಣಿ ದಾಖಲೆಗಳಿಲ್ಲ. ಇದರಿಂದ ಸರ್ಕಾರಕ್ಕೆ ಬಾರೀ ನಷ್ಟವಾಗಿದೆ. ರಾಜ್ಯದಲ್ಲಿ ಸಾವಿರಾರು ಕೋಟಿ ರೂಪಾಯಿ ವಕ್ಪ್ ಆಸ್ತಿ ಕಬಳಿಕೆಯಾಗಿದೆ ಈ ಬಗ್ಗೆ ಇದುವರೆಗೂ ಯಾರೂ ಕೂಡ ಸೂಕ್ತ ಕ್ರಮ ಕೈಗೊಂಡಿಲ್ಲ, ಈ ಕುರಿತು ಸಚಿವ ಯು.ಟಿ.ಖಾದರ್ ಸೂಕ್ತ ಕ್ರಮ ಕೈಗೊಂಡು ಕಬಳಿಕೆ ಆಗಿರುವ ಆಸ್ತಿಯನ್ನು ವಾಪಾಸ್ ಮರಳಿ ಕೊಡಿಸಬೇಕು ಎಂದು ಹೇಳಿದರು.
ರಾಜ್ಯ ಅಲ್ಪಸಂಖ್ಯಾತರ ಇಲಾಖೆ ಹಾಗೂ ವಕ್ಫ್ ಮಂಡಳಿಯಲ್ಲಿ ನಡೆಯುತ್ತಿರುವ ಸರಣಿ ಅಕ್ರಮಗಳು, ಹಜ್ ಭವನ ನಿರ್ವಹಣೆಯಲ್ಲಿನ ಲೋಪದೋಷಗಳು ಹಾಗೂ ಜಿಲ್ಲಾ ವಕ್ಫ್ ಸಮಿತಿಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಕುರಿತು ತಕ್ಷಣವೇ ಗಮನಹರಿಸಿ ಸೂಕ್ತ ಕ್ರಮವನ್ನು ಸಚಿವ ಯು.ಟಿ. ಖಾದರ್ ಕೈಗೊಳ್ಳಬೇಕು. ಅಲ್ಪಸಂಖ್ಯಾತರ ಇಲಾಖೆಯಲ್ಲಿ ಹಿಂದೆ ನಡೆದ ಕೆಲ ಸದಸ್ಯರು ಹಾಗೂ ಮಾಜಿ ಅಧ್ಯಕ್ಷರ ಅಧಿಕಾರಾವಧಿಯ ಅಕ್ರಮಗಳಿಂದಾಗಿ ಸಾರ್ವಜನಿಕರಿಗೆ ಮತ್ತು ಸಮುದಾಯದ ಆಸ್ತಿಗಳಿಗೆ ತೀವ್ರ ತೊಂದರೆಯಾಗಿದೆ. ಆದ್ದರಿಂದ ವಕ್ಫ್ ಪ್ರಾಪರ್ಟಿ ಲೂಟಿಯಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಹಜ್ ಯಾತ್ರಿಕರಿಂದ ಕೊನೆ ಕ್ಷಣದಲ್ಲಿ ಹೆಚ್ಚುವರಿಯಾಗಿ 10 ಸಾವಿರ ರೂಪಾಯಿ ವಸೂಲಿ ಮಾಡಲಾಗುತ್ತಿದೆ. ಕೈ ಗಡಿಯಾರದ ಹೆಸರಿನಲ್ಲಿ ಹಣ ಸಂಗ್ರಹಿಸಿ ಅಕ್ರಮ ಎಸಗಲಾಗುತ್ತಿದೆ. ಈ ಹಣವನ್ನು ತಕ್ಷಣವೇ ವಾಪಸ್ ಕೊಡಿಸಬೇಕು ಹಾಗೂ ಈ ಭ್ರಷ್ಟಾಚಾರದ ಕುರಿತು ಸೂಕ್ತ ವಿಚಾರಣೆ ನಡೆಸಬೇಕು. ಸಾಮಾಜಿಕ ಕಾರ್ಯಕರ್ತ ಐ.ಎ.ಎಸ್ ಜಮೀರ್ ಪಾಷಾ ಅವರ ಕನಸಿನ ಯೋಜನೆಯಾಗಿದ್ದ ಹಜ್ ಭವನದ ಘನತೆ ಮತ್ತು ಮೌಲ್ಯವನ್ನು ಉಳಿಸಿಕೊಳ್ಳಲು ಸರ್ಕಾರ ತಕ್ಷಣವೇ ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು ಎಂದು ಮುಜಾಹಿದ್ ಅಲಿಬಾಬ ಮನವಿ ಮಾಡಿದರು















