ಬೆಂಗಳೂರು: ಫ್ರೀಡಂ ಪಾರ್ಕ್ ಅವರಣದಲ್ಲಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಕೇಂದ್ರ ಬಿಜೆಪಿ ಸರ್ಕಾರದ ರೈತ ವಿರೋಧಿ ಯು.ಎಸ್.ವ್ಯಾಪಾರ ಒಪ್ಪಂದವನ್ನು ರದ್ದುಗೊಳಿಸಬೇಕು ಮತ್ತು ಎಂ.ಎಸ್.ಪಿ.ಗೆ ಕಾನೂನು ಬದ್ದ ಖಾತರಿ ನೀಡಿ , ದೇಶ ರೈತರು ಮತ್ತು ಕೃಷಿಯನ್ನು ಉಳಿಸುವಂತೆ ಸತ್ಯಾಗ್ರಹ ಕಾರ್ಯಕ್ರಮ ನಡೆಯಿತು.
ವಿಧಾನಪರಿಷತ್ ಸದಸ್ಯ ಸಲೀಮ್ ಅಹಮದ್, ರಾಜ್ಯ ಯುವ ಕಾಂಗ್ರೆಸ್ ಸಮಿತಿ ರಾಜ್ಯಾಧ್ಯಕ್ಷ ಹೆಚ್.ಎಸ್.ಮಂಜುನಾಥ್ ಗೌಡ, ಮಾಜಿ ಮಹಾಪೌರ ಜೆ.ಹುಚ್ಚಪ್ಪ, ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಎಸ್.ಕೇಶವಮೂರ್ತಿ, ಮೋಹನ್ ಕುಮಾರ್ ಯುವ ಕಾಂಗ್ರೆಸ್ ಸಮಿತಿಯ ಮುಖಂಡರುಗಳು, ಕಾರ್ಯಕರ್ತರುಗಳು ಭಾಗವಹಿಸಿದ್ದರು.
ಪ್ರತಿಭಟನೆಯಲ್ಲಿ ಸಲೀಮ್ ಅಹಮದ್ ಮಾತನಾಡಿ ರೈತ ಪರ ಹೋರಾಟ ಹಿನ್ನಲೆಯಲ್ಲಿ ರಾಜ್ಯ ಯುವ ಕಾಂಗ್ರೆಸ್ ವತಿಯಿಂದ ಕಿಸಾನ್ ನ್ಯಾಯ ಸತ್ಯಾಗ್ರಹ ಮಾಡುತ್ತಿದ್ದಾರೆ. 11ವರ್ಷಗಳಿಂದ ಬಿಜೆಪಿ ಕೇಂದ್ರ ಸರ್ಕಾರ ರೈತರ ಹಿತ ಕಾಪಾಡಲಿಲ್ಲ. ಇಂಡೋ-ಅಮೇರಿಕಾ ಒಪ್ಪಂದ ದೇಶದ ರೈತರಿಗೆ ಮರಣ ಶಾಸನವಾಗಿದೆ. 24ಕೋಟಿ ಯುವಕ-ಯುವತಿಯರಿಗೆ ಉದ್ಯೋಗ ಕೊಡುತ್ತೇವೆ ಎಂದು ಹೇಳಿ ಎರಡು ಕೋಟಿ ಉದ್ಯೋಗ ಕೊಟ್ಟಿಲ್ಲ. ಕಪ್ಪು ಹಣ ತರುತ್ತೇವೆ ಎಂದು ಸುಳ್ಳು ಹೇಳಿ ದೇಶದ ಜನರಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.
ನಮಗೆ ಅಧಿಕಾರ ಕೊಡಿ ರಾಮರಾಜ್ಯ ಮಾಡುತ್ತೇವೆ ಎಂದು ಹೇಳಿದ್ದರು ಅದರೆ ಇಂದು ರಾವಣರಾಜ್ಯವಾಗಿದೆ. ಕೊರೋನ ಸಂದರ್ಭದಲ್ಲಿ ಲಕ್ಷಾಂತರ ಜನರ ಸಾವನ್ನಪ್ಪಿದ್ದರು, ದೇಶದ ಜನರ ರಕ್ಷಣೆಗೆ ಬರಲಿಲ್ಲ. ರೈತರು ದೇಶದ ಜೀವನಾಡಿ ಅವರ ರಕ್ಷಣೆಗೆ ಕಾಂಗ್ರೆಸ್ ಪಕ್ಷ ಕಟಿಬದ್ದವಾಗಿ ಹೋರಾಟ ಮಾಡುತ್ತಿದೆ. ನುಡಿದಂತೆ ನಡೆ, ನಡೆದಂತೆ ನುಡಿದ ಕಾಂಗ್ರೆಸ್ ಪಕ್ಷಕ್ಕೆ ರೈತರ ಬೆಂಬಲವಿದೆ. ಅಮೇರಿಕಾ ವಿರುದ್ದ ದೇಶದ ಜನರು ಚರ್ಚೆ ಮಾಡುತ್ತಿದ್ದಾರೆ ಅದರೆ ಪ್ರಧಾನಿ ಮೋದಿರವರು ಅಮೇರಿಕಾ ಅಧ್ಯಕ್ಷರ ಬೆದರಿಕೆ ಹೆದರಿ ಆಡಳಿತ ನಡೆಸುತ್ತಿದ್ದಾರೆ. ರೈತ ವಿರೋಧಿ ಒಪ್ಪಂದ ರದ್ದು ಮಾಡಬೇಕು ಎಂದು ಆಗ್ರಹಿಸಿದರು.
ಹೆಚ್.ಎಸ್.ಮಂಜುನಾಥ್ ಗೌಡ ಮಾತನಾಡಿ, ರೈತ ವಿರೋಧಿ ಒಪ್ಪಂದ ರಾಷ್ಟ್ರೀಯ ಮಟ್ಟದಲ್ಲಿ ಯುವ ಕಾಂಗ್ರೆಸ್ ಪ್ರತಿಭಟನೆ ನಡೆಸಲಾಗುತ್ತಿದೆ. ಉದ್ಯೋಗವಿಲ್ಲ, ಸಮಾನತೆ ಇಲ್ಲ ಉನ್ನಾವ್ ಹತ್ಯೆಖಂಡ ಮಣಿಪುರದಲ್ಲಿ ಸಾವು-ನೋವು ಸಂಭವಿಸಿದರೂ ಪ್ರಧಾನಿ ನರೇಂದ್ರಮೋದಿರವರು ಗಮನಹರಿಸಿಲ್ಲ. ಒಲಂಪಿಕ್ ಪದಕ ವಿಜೇತರಿಗೆ ರಸ್ತೆಯಲ್ಲಿ ಹೊಡೆದು, ಜೈಲುಗಟ್ಟಿದರು. ಕೇಂದ್ರ ಸರ್ಕಾರ. ಪ್ರಧಾನಿ ನರೇಂದ್ರಮೋದಿ ರವರು ಮೇಕಪ್ ಮಾಡಿಕೊಂಡು ದೇಶದ ಜನರಿಗೆ ನಾಟಕ ಪ್ರದರ್ಶನ ಮಾಡುತಿದ್ದಾರೆ. ಪ್ರಧಾನಿ ದೇಶದ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಜಾತಿವಾದ, ಕೋಮುವಾದ ಬಿಜೆಪಿ ಪಕ್ಷದ್ದಾಗಿದೆ ಎಂದರು.
ಕಾಂಗ್ರೆಸ್ ಪಕ್ಷ ಸಂವಿಧಾನ ಎತ್ತಿ ಹಿಡಿಯುವ ಮತ್ತು ಎಲ್ಲ ಜಾತಿ, ಧರ್ಮದವರು ಸಹೋದರರಂತೆ ಬಾಳುವ ಸಿದ್ದಾಂತ ನಂಬಿಕೆವುಳ್ಳದ್ದಾಗಿದೆ. ರೈತ ವಿರೋದಿ ಒಪ್ಪಂದ ರದ್ದು ಮಾಡಬೇಕು ಎಂದು ರಾಜ್ಯ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯರವರ ಮಾರ್ಗದರ್ಶನದಲ್ಲಿ ಸತ್ಯಾಗ್ರಹ ಹಮ್ಮಕೊಳ್ಳಲಾಗಿದೆ ಎಂದು ಹೇಳಿದರು.















