ಬೆಳಗಾವಿ: ಖಾನಾಪುರ ಬಿಜೆಪಿ ಶಾಸಕ ವಿಠ್ಠಲ ಹಲಗೇಕರ ಅವರ ಅಧಿಕೃತ ಆಪ್ತ ಸಹಾಯಕ ಗುರುರಾಜ ಚರಕಿ ಎಂಬುವರು ಅನುದಾನ ಬಿಡುಗಡೆಗೆ ಕಮಿಷನ್ ಬೇಕು ಅಂತಾ ಕೇಳಿದ ಫೋನ್ ಸಂಭಾಷಣೆಯ ಆಡಿಯೋ ವೈರಲ್ ಆಗಿದ್ದು, ಸಂಚಲನ ಸೃಷ್ಟಿಸಿದೆ.
ಗುರುರಾಜ ಅವರಿಗೆ ಶಿರೋಲಿ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯ ಕೃಷ್ಣಾ ಎಂಬುವರು ಫೋನ್ ಮಾಡಿ ದೀಪಕ್ ನನ್ನ ಜೊತಗೆ ಇದ್ದಾರೆ. 20 ಲಕ್ಷ ರೂಪಾಯಿ ಫಂಡ್ ಬಗ್ಗೆ ಅವರ ಜೊತೆ ಮಾತಾಡಿ ಎನ್ನುತ್ತಾರೆ. ದೀಪಕ್ ಇವರು ಶಿರೋಲಿ ಗ್ರಾಪಂನ ಹಾಲಿ ಸದಸ್ಯರು. ಸಂಭಾಷಣೆ ಮುಂದುವರಿದಂತೆ ಅನುದಾನ ಬಿಡುಗಡೆ ಮಾಡಲು ಶೇ 25 ರಷ್ಟು ಕಮಿಷನ್ ನೀಡುವಂತೆ ಕೇಳುತ್ತಾರೆ. ಅದಕ್ಕೆ ಪ್ರತಿಕ್ರಿಯಿಸಿದ ಕೃಷ್ಣಾ ಮತ್ತು ದೀಪಕ್ ಇಬ್ಬರೂ ಇದು ತೀರಾ ಜಾಸ್ತಿ ಆಯ್ತು ಅನ್ನುತ್ತಾರೆ. ಇದಕ್ಕೆ ಉತ್ತರಿಸುವ ಗುರುರಾಜ, ನಾನು ಇದಕ್ಕೆ ಈಗಾಗಲೇ ಬಡ್ಡಿ ಕಟ್ಟುತ್ತಿರುವೆ ಅನ್ನುತ್ತಾರೆ. ದೀಪಕ್ ನಿನಗೆ ಇದರ ಬಗ್ಗೆ ಗೊತ್ತಿದೆ, ಬೇಕಾದರೆ ನಿಮ್ಮ ಸಾಹೇಬರಿಗೆ ಕೇಳಿ ನೋಡು ಅಂತಾರೆ. 25 ಪರ್ಸೆಂಟ್ ಕೊಟ್ರೆ ನಮಗೇನು ಉಳಿಯುತ್ತೆ ಅಂತಾ ಇಬ್ಬರೂ ಕೇಳುತ್ತಾರೆ.
ಈ ಆಡಿಯೋ ವೈರಲ್ ಆದ ನಂತರ ಎಚ್ಚೆತ್ತುಕೊಂಡಿರುವ ಶಾಸಕ ವಿಠ್ಠಲ ಹಲಗೇಕರ್ ಅವರು ಸದರಿ ಆಪ್ತ ಸಹಾಯಕ ನನಗೆ ಬೇಡ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಚರಕಿ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಬೇಕೆಂದು ಶಾಸಕ ಹಲಗೇಕರ್ ಮನವಿ ಮಾಡಿದ್ದಾರೆ. ಇನ್ನು ಪ್ರಜಾ ನೆರಳು ಪತ್ರಿಕೆಗೆ ಸಿಕ್ಕ ನಂಬಲರ್ಹ ಮಾಹಿತಿಯ ಪ್ರಕಾರ, ಗುರುರಾಜ ಚರ್ಕಿ ತಾನು ವಿಜಯಪುರದ ಎಸ್ಪಿ ಅವರಿಗೆ ಪಿಎ ಆಗಿ ಕೆಲಸ ಮಾಡಿರುವುದಾಗಿ ಹೇಳಿಕೊಂಡು ಸುತ್ತಾಡುತ್ತಾರೆ














