ಬೆಂಗಳೂರು: ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಗೆ ಸಿಟಿ ಸಿವಿಲ್ ಅಧಿಕೃತವಾಗಿ ಪೂರ್ಣ ಪ್ರಮಾಣದ ತಡೆ ನೀಡಿ ಆದೇಶಿಸಿದೆ. ಮುಂದಿನ ಹಂತದ ವಿಚಾರಣೆ ಜೂನ್ 29 ರಂದು ನೆಡೆಯಲಿದ್ದು ಅಲ್ಲಿಯವರೆಗೆ ಯಾವುದೇ ಚುನಾವಣಾ ಪ್ರಕ್ರಿಯೆ ಮುಂದುವರೆಸುವಂತಿಲ್ಲ ಅಂತ ಅಭಿಪ್ರಾಯ ವ್ಯಕ್ತಪಡಿಸಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ ನಾಗನಗೌಡ ಹೇಳಿದರು.
ಈ ಕುರಿತು ಶನಿವಾರ ಸಂಜೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನ್ಯಾಯಾಲಯ ತಡೆಯಾಜ್ಞೆ ದಿಕ್ಕರಿಸಿ ಒಂದು ಹಂತದ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯನ್ನು ನಡೆಸಲಾಗಿತ್ತು. ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ನಿಂದ ರಾಜ್ಯಾದ್ಯಂತ ನಡೆಯುತ್ತಿರುವ ಶಿಕ್ಷಕರ ಸಂಘದ ಚುನಾವಣೆಗೆ ತಡೆಯಾಜ್ಞೆ ಇದ್ದರೂ ಸಂವಿಧಾನಕ್ಕೆ ಅಪಚಾರ ಮಾಡಲಾಗಿತ್ತು. ಚುನಾವಣೆ ರದ್ದು ಪಡಿಸಿ ಮರುಚುನಾವಣೆ ನಡೆಸಬೇಕು ಮತ್ತು ಚುನಾವಣಾ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯರು ನ್ಯಾಯಾಲಯಕ್ಕೆ ದಾವೆಯನ್ನು ಹೂಡಿದ್ದರು, ಈ ಹಿನ್ನಲೆಯಲ್ಲಿ ಇಂದು ನ್ಯಾಯಾಲಯದಿಂದ ಸ್ಪಷ್ಟ ನಿರ್ದೇಶನ ದೊರೆತಿದ್ದು, ಸತ್ಯಕ್ಕೆ ತಾತ್ಕಾಲಿಕ ಜಯ ಸಿಕ್ಕಂತಾಗಿದೆ ಎಂದು ಅಭಿಪ್ರಾಯಪಟ್ಟರು.
ಶುಕ್ರವಾರ ನ್ಯಾಯಾಲಯದ ತಡೆಯಾಜ್ಞೆ ಪ್ರತಿಯನ್ನು ಸ್ವೀಕರಿಸಲು ಸಂಘದ ಚುನಾವಣಾಧಿಕಾರಿಗಳು ಕಚೇರಿಯಲ್ಲಿ ಇಲ್ಲದೇ ಮೋಸ ಮಾಡಿದ್ದರು, ರಾಜ್ಯ ಸಂಘದ 25ಸಾವಿರ ಸದಸ್ಯರನ್ನು ಮತದಾನ ಪಟ್ಟಿಯಿಂದ ಹೊರಗಿಟ್ಟು ಚುನಾವಣೆ ನಡೆಸಲಾಗುತ್ತಿತ್ತು, ಇದನ್ನು ಪ್ರಶ್ನಿಸಿ ಸಿವಿಲ್ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿ ನ್ಯಾಯಾಧೀಶರು ಸಂಪೂರ್ಣ ತಡೆ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಸಂಘದ ಖಚಾಂಚಿ ಸುರೇಶ್ ಶೆಡಸಾಳ್ ಮಾತನಾಡಿ, 25ಸಾವಿರ ಶಿಕ್ಷಕರನ್ನು ಚುನಾವಣೆಯಿಂದ ದೂರವಿಟ್ಟು ರಾಜ್ಯಾಧ್ಯಕ್ಷರು ಚುನಾವಣೆ ನಡೆಸುತ್ತಿದರು.10 ಜಿಲ್ಲೆಗಳ ಶಿಕ್ಷಕರ ಸಂಘದ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಶಿಕ್ಷಕರ ಸಂಘವನ್ನು ದಿವಾಳಿಯತ್ತ ತೆಗೆದುಕೊಂಡು ಹೋಗುತ್ತಿದ್ದರು ಇದಕ್ಕೆ ಕೋರ್ಟ್ ತಡೆ ನೀಡಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
ಬಹಳಷ್ಟು ತಾಲೂಕುಗಳಲ್ಲಿ ಚುನಾವಣಾ ಕಚೇರಿಯನ್ನು ತೆರೆಯದೆ, ಚುನಾವಣಾಧಿಕಾರಿ ನೇಮಕ ಮಾಡದೇ, ಮತದಾರರ ಪಟ್ಟಿ ನೀಡದೇ, ತಮಗೆ ಬೇಕಾದ 50-60ಶಿಕ್ಷಕರನ್ನು ಸೇರಿಸಿ ಅಕ್ರಮವಾಗಿ ನಾಮಪತ್ರ ಪಡೆದು ನಡೆಸುತ್ತಿದ್ದ ಚುನಾವಣಾ ಪ್ರಕ್ರಿಯೆಗೆ ಸದ್ಯಕ್ಕೆ ತಡೆ ಸಿಕ್ಕಿರುವುದು ಸಾಮಾನ್ಯ ಶಿಕ್ಷಕರ ಹೋರಾಟಕ್ಕೆ ಸಂದ ಜಯವಾಗಿದೆ ಎಂದರು.
ಮಂಡ್ಯ ಜಿಲ್ಲಾ ದಕ್ಷಿಣ ವಲಯ ಅಧ್ಯಕ್ಷ ಚಂದ್ರಶೇಖರ್ ಆರ್ಯ, ವಿಜಯಪುರ ಜಿಲ್ಲೆಯ ಶಿಕ್ಷಕಿ ಜಯಶ್ರೀ ಬೆಣ್ಣಿ ಸೇರಿದಂತೆ ಹಲವು ಪದಾಧಿಕಾರಿಗಳು, ಶಿಕ್ಷಕರು ಈ ಸಂದರ್ಭದಲ್ಲಿ ಹಾಜರಿದ್ದರು.














