ಬೆಂಗಳೂರು: ಎಸ್.ಸಿ ಸಮಾಜದಲ್ಲಿ ಒಳಮೀಸಲಾತಿ ಆಗಬೇಕೆಂದು ಯೋಚಿಸುತ್ತಿದ್ದಾರೆ. ಇದಕ್ಕೂ ಮೊದಲು ಹಿಂದುಳಿದ ವರ್ಗದ 102 ಜಾತಿಗಳಲ್ಲಿ ಒಳಮೀಸಲಾತಿ ಆಗಬೇಕು ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯಾಧ್ಯಕ್ಷ ಕೆ.ಪಿ. ನಂಜುಂಡಿ ವಿಶ್ವಕರ್ಮ ತಿಳಿಸಿದರು.
ಶುಕ್ರವಾರ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ವತಿಯಿಂದ ನಗರದ ಗುರುರಾಜ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ 3ನೇ ರಾಜ್ಯಮಟ್ಟದ ವಧು-ವರರ ಸಮಾವೇಶದಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗದ 108 ಜಾತಿಗಳ ಪೈಕಿ ವಿಶ್ವಕರ್ಮ ಸಮುದಾಯದಕ್ಕೆ ಒಳಮೀಸಲಾತಿ ಸಿಗುತ್ತಿಲ್ಲ. ರಾಜ್ಯದಲ್ಲಿ ಕುರುಬರ ನಂತರ ವಿಶ್ವಕರ್ಮ 2ನೇ ಸ್ಥಾನದಲ್ಲಿದ್ದಾರೆ. ದೇಶದಲ್ಲಿ 11 ಕೋಟಿಯಷ್ಟಿದ್ದರೆ, ರಾಜ್ಯದಲ್ಲಿ 40 ಲಕ್ಷ ಜನರಿದ್ದಾರೆ. ಆದರೆ ಸಮೀಕ್ಷೆಯಲ್ಲಿ ಸಂಖ್ಯೆಯನ್ನು ಕೇವಲ 8 ಲಕ್ಷಕ್ಕೆ ತಂದಿಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ವಿಶ್ವಕರ್ಮ ಸಮಾಜ ಛಿದ್ರ-ಛಿದ್ರವಾಗಿದ್ದು, ಇದನ್ನು ಸರಿಪಡಿಸಲು ಎಲ್ಲರೂ ಒಂದಾಗಬೇಕು. ನಮಗೆ ಸಾಮಾಜಿಕ ಸ್ಥಾನಮಾನ ಹಾಗೂ ರಾಜಕೀಯ ನ್ಯಾಯ ಸಿಗಬೇಕೆಂದರೆ ನಾವೆಲ್ಲರು ಆಂತರಿಕ ಬೇಧ ಮರೆತು ಒಂದಾಗಬೇಕು ಎಂದು ಕರೆ ನೀಡಿದರು.
ವಿಜಯವಾಣಿ ದಿನಪತ್ರಿಕೆ ಪ್ರಧಾನ ಸಂಪಾದಕ ಚನ್ನೇಗೌಡ ಮಾತನಾಡಿ, ವಿಶ್ವಕರ್ಮ ಸಮಾಜ ಐದಾರೂ ಹೋಳುಗಾಗಿ ಒಡೆದು ಹೋಗಿದೆ. ರಾಜ್ಯದಲ್ಲಿ 35-40 ಲಕ್ಷ ಜನ ಸಂಖ್ಯೆ ಇರುವ ಸಮಾಜದ ಸಂಖ್ಯೆಯನ್ನು 7ರಿಂದ 8 ಲಕ್ಷಕ್ಕೆ ತಂದಿಟ್ಟಿರುವುದು ಗಂಭೀರವಾದ ವಿಚಾರ. ಈ ಸಮಸ್ಯೆಯನ್ನು ಸಮಾಜದ ಪ್ರಮುಖರು ಸಮಾಲೋಚಿಸಿ ಬಗೆಹರಿಸಿಕೊಳ್ಳಬೇಕು ಎಂದರು.
ಸಮಾಜದ ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡಬೇಕು. ಈ ಮೂಲಕ ಅವರಿಗೆ ಯು.ಪಿ.ಎಸ್.ಸಿ ಹಾಗೂ ಕೆ.ಪಿ.ಎಸ್.ಸಿ ಪರೀಕ್ಷೆಗಳಿಗೆ ತರಬೇತಿ ಕೊಡಬೇಕು. ಇದಕ್ಕಾಗಿ ರಾಜ್ಯ ಮಟ್ಟದಲ್ಲಿ ತರಬೇತಿ ಕೇಂದ್ರ ತೆರೆಯಬೇಕು. ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಕೌಶಲವನ್ನು ಮೇಲ್ದರ್ಜೆಗೇರಿಸಿಕೊಳ್ಳಬೇಕು ಮತ್ತು ನಂಜುಂಡಿ ವಿಶ್ವಕರ್ಮ ಅವರಿಗೆ ಮುಂದಿನ 2 ವರ್ ಸಚಿವ ಸ್ಥಾನ ಸಿಗಬೇಕು ಎಂದು ಆಶಿಸಿದರು.
ಪ್ರಸ್ತುತ ಎಸ್.ಐ.ಆರ್ ಮುಖೇನ ಮತದಾನದ ಹಕ್ಕನ್ನು ಮೊಟಕುಗೊಳಿಸುವ ಕೆಲಸ ಮಾಡಲಾಗುತ್ತಿದೆ. ಹಾಗಾಗಿ ಸಮಾಜ ಬಾಂಧವರು ತಮ್ಮ ಮತಗಳನ್ನು ರಕ್ಷಿಸಿಕೊಳ್ಳುವ ಕೆಲಸ ಮಾಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ ಚಂದ್ರಶೇಖರ್ ಕರೆ ನೀಡಿದರು.















