ಬೆಂಗಳೂರು: ಮುಕ್ತ ಸಮಾಜ, ವಿಚಾರ, ವಾತಾವರಣ, ಬದುಕನ್ನೊಳಗೊಂಡ ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂಬುದೇ ಶರಣರ ಮೂಲ ಮಂತ್ರವಾಗಿತ್ತು ಎಂದು ಹಿರಿಯ ವಿದ್ವಾಂಸ ಡಾ. ವೀರಣ್ಣ ರಾಜೂರ ಅಭಿಪ್ರಾಯಪಟ್ಟರು.
ನವಕರ್ನಾಟಕ ಪ್ರಕಾಶನವು ನಗರದ ಗಾಂಧಿಭವನದಲ್ಲಿ ಆಯೋಜಿಸಿದ್ದ ಕನ್ನಡ ಸಾಹಿತ್ಯ ಚಾರಿತ್ರಿಕ ಬೆಳವಣಿಗೆ-3 ಮಧ್ಯಕಾಲೀನ ಸಾಹಿತ್ಯ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಬಸವಾದಿ ಶರಣರು ರೂಪಿಸಿದ ಲಿಂಗಾಯತ ಧರ್ಮ ಪರಿಕಲ್ಪನೆ ಈಗ ವೀರಶೈವವಾಗಿ ರೂಪುಗೊಂಡಿರುವುದು. ಬಸವಾದಿ ಶರಣರನ್ನು ಒಳಗೊಂಡಂತೆ ಚಾರಿತ್ರಿಕ ವ್ಯಕ್ತಿಗಳನ್ನು ಪುರಾಣ ಪುರುಷರನ್ನಾಗಿಸಿರುವುದು, ಸಾಮಾಜಿಕ-ಸಾಹಿತ್ಯಿಕ ಅಂಶಗಳನ್ನು ಒಳಗೊಂಡಿರುವ ವಚನಗಳು ತಾತ್ವಿಕ ಬಂಧನಕ್ಕೆ ಒಳಪಟ್ಟಿರುವುದು, ಹೀಗೆ, ಡಾ. ಸಿ. ವೀರಣ್ಣನವರು ವಚನ ಸಾಹಿತ್ಯದಲ್ಲಿ ಆದಂತ ಬದಲಾವಣೆಗಳನ್ನು ಬಹಳ ಸೂಕ್ಷ್ಮವಾಗಿ ಗುರುತಿಸಿದ್ದಾರೆ ಎಂದು ತಿಳಿಸಿದರು.
ಸಂಶೋಧಕ ಡಾ. ಸಿ. ನಾಗಭೂಷಣ ಮಾತನಾಡಿ, ಲೇಖಕ ಡಾ. ಸಿ.ವೀರಣ್ಣನವರು ಸಮಾಜ ಮತ್ತು ಅದರ ಉತ್ಪನ್ನಗಳಲ್ಲಿ ಒಂದಾದ ಸಾಹಿತ್ಯವನ್ನು ಸಮಾಜೋವೈಜ್ಞಾನಿಕ ಮನೋಭೂಮಿಯಲ್ಲಿ ವಿಶ್ಲೇಷಿಸುವ ಉದ್ದೇಶದಿಂದ ತಮ್ಮ ಕೃತಿಗಳನ್ನು ಪ್ರಾಚೀನ ಸಾಹಿತ್ಯ, ಮಧ್ಯಕಾಲೀನ ಸಾಹಿತ್ಯ, ರಾಜಸತ್ತೆಯ ನಿಶ್ತೇಜದ ಕಾಲ, ವಸಾಹತುಶಾಹಿಯ ಕಾಲ, ಬಂಡವಾಳಶಾಹಿಯ ಯುಗ ಎಂಬ ಐದು ವರ್ಗಗಳಾಗಿ ವಿಂಗಡಿಸಿದ್ದಾರೆ ಎಂದರು.
ಮಧ್ಯಕಾಲೀನ ಸಾಹಿತ್ಯ ಕೃತಿಯಲ್ಲಿ ಕವಿಗಳ ಕುರಿತ ವಸ್ತುನಿಷ್ಠ ಪ್ರತಿಕ್ರಿಯೆ, ಚಾರಿತ್ರಿಕ ದೃಷ್ಟಿಕೋನ, ಪ್ರಮಾಣಬದ್ಧ ಅಭಿಪ್ರಾಯ ಅಡಕವಾಗಿದೆ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ನಾವುಗಳು ಹೆಸರನ್ನೇ ಕೇಳಿರದ, ಮೈಸೂರು-ಬೆಂಗಳೂರು ವಿಶ್ವವಿದ್ಯಾಲಯದ ಸಾಂಸ್ಥಿಕ ಸಾಹಿತ್ಯ ಚರಿತ್ರೆಯಲ್ಲಿ ಚರ್ಚೆಯಾಗದಿರುವ ಅಲಕ್ಷಿತ ಸಾಹಿತ್ಯದ ಕವಿಗಳನ್ನು ಈ ಸಂಪುಟಗಳಲ್ಲಿ ಗುರುತಿಸುವ ಮೂಲಕ ಜಗತ್ತಿಗೆ ಪರಿಚಯಿಸುವ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನವಕರ್ನಾಟಕ ಪ್ರಕಾಶನದ ವ್ಯವಸ್ಥಾಪಕ ನಿರ್ದೇಶಕ ಡಾ. ಸಿದ್ದನಗೌಡ ಪಾಟೀಲ್, ಕೃತಿಯ ಲೇಖಕ ಡಾ. ಸಿ.ವೀರಣ್ಣ ಉಪಸ್ಥಿತರಿದ್ದರು.














