ಬೆಂಗಳೂರು: ಕನ್ನಡ ಚಳುವಳಿಗಳ ಪಿತಾಮಹ ಅ.ನ. ಕೃಷ್ಣರಾಯರ ಹೆಸರಿನ ಸಮುದಾಯ ಭವನ ಹಾಗೂ ಕನ್ನಡ ಚಿತ್ರರಂಗ ಮತ್ತು ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಅಚ್ಚಳಿಯದ ಛಾಪು ಮೂಡಿಸಿರುವ ಡಾ. ಪುನೀತ್ ರಾಜ್ಕುಮಾರ್ ಅವರ ಹೆಸರಿನ ಸಭಾಂಗಣವನ್ನು ಯಡಿಯೂರು ವಾರ್ಡ್ನಲ್ಲಿ ನಿರ್ಮಿಸಲಾಗಿದ್ದು, ಸಾರ್ವಜನಿಕರಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಇಲ್ಲಿ ಕಲ್ಪಿಸಲಾಗಿದೆ ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಎನ್.ಆರ್.ರಮೇಶ್ ಹೇಳಿದರು.
ಸೋಮವಾರ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಯಡಿಯೂರು ವಾರ್ಡ್ನಲ್ಲಿ ಅ.ನ.ಕೃಷ್ಣರಾಯರ ಕನ್ವೆನ್ಷನ್ ಸೆಂಟರ್ ಮತ್ತು ಡಾ.ಪುನೀತ್ ರಾಜ್ಕುಮಾರ್ ಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮದುವೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಹವಾನಿಯಂತ್ರಿತ ಕಲ್ಯಾಣ ಮಂಟಪವನ್ನು 25 ಸಾವಿರ ರೂ. ಹಾಗೂ ಸಭಾಂಗಣವನ್ನು 25 ಸಾವಿರ ರೂ. ಬಾಡಿಗೆಯಲ್ಲಿ ನೀಡಲಾಗುತ್ತಿದ್ದು, ಇವನ್ನು ಸಾಮಾನ್ಯ ಜನರ ಅನುಕೂಲಕ್ಕಾಗಿ ರೂಪಸಲಾಗಿದೆ ಎಂದು ತಿಳಿಸಿದರು.
ಯಡಿಯೂರು ವಾರ್ಡ್ನಲ್ಲಿ ಜನನದಿಂದ ಅಂತ್ಯಸಂಸ್ಕಾರದವರೆಗೆ ನಾಗರಿಕರಿಗೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಮಾದರಿ ವಾರ್ಡ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಕ್ಕಳ ಆರೋಗ್ಯ ರಕ್ಷಣೆಗೆ ಆಸ್ಪತ್ರೆ, ಶಿಕ್ಷಣಕ್ಕಾಗಿ ಹೈಟೆಕ್ ವ್ಯವಸ್ಥೆ, ಆರೋಗ್ಯ ವೃದ್ಧಿಗೆ ಕ್ರೀಡಾಂಗಣ, ಸಾರ್ವಜನಿಕರ ವಿಶ್ರಾಂತಿ ಮತ್ತು ಮನರಂಜನೆಗಾಗಿ ಉದ್ಯಾನಗಳು ಸೇರಿದಂತೆ ವಿವಿಧ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ. ಅಲ್ಲದೇ, ಪರಿಸರ ಸಂರಕ್ಷಣೆ ಮತ್ತು ವಿದ್ಯುತ್ ಉಳಿತಾಯದ ಉದ್ದೇಶದಿಂದ ಹಸಿ ಕಸದಿಂದ ವಿದ್ಯುತ್ ಉತ್ಪಾದಿಸುವ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಕಾರ್ಮಿಕ ಮತ್ತು ವೈದಿಕ ಕಾರ್ಯಗಳಿಗಾಗಿ ಪ್ರತ್ಯೇಕ ವೈದಿಕ ಭ ವನವನ್ನೂ ನಿರ್ಮಿಸಲಾಗಿದ್ದು, ಸಮಗ್ರ ಅಭಿವೃದ್ಧಿಯ ಮೂಲಕ ಒಟ್ಟಿನಲ್ಲಿ ಯಡಿಯೂರು ವಾರ್ಡ್ ರಾಜ್ಯಕ್ಕೆ ಮಾದರಿಯಾಗುವಂತೆ ರೂಪುಗೊಂಡಿದೆ ಎಂದು ಎನ್.ಆರ್.ರಮೇಶ್ ಹೇಳಿದರು.
ವಿಧಾನಸಭಾ ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಅಂತರ್ಜಲ ಹೆಚ್ಚಿಸಲು, ಪರಿಸರ ಉಳಿಸಲು ಯಡಿಯೂರು ಕೆರೆ ಅಭಿವೃದ್ಧಿ ಪಡಿಸಲಾಗಿದೆ. ಪಾಲಿಕೆ ಹಳೆಯ ಕಟ್ಟಡವಿತ್ತು. ಆದರೆ ಇಂದು ವ್ಯವಸ್ಥಿತವಾದ ಸುಸಜ್ಜಿತವಾದ ಕಲ್ಯಾಣ ಮಂಟಪ ಮತ್ತು ಸಭಾಂಗಣವನ್ನು ಬಡವರಿಗೊಸ್ಕರ ನಿರ್ಮಾಣ ಮಾಡಲಾಗಿದೆ. ಸಾಲ ಮಾಡಿ ಮದುವೆ ಮಾಡಿಕೊಳ್ಳಬಾರದು ಎಂಬುದು ನಮ್ಮ ಉದ್ದೇಶವಾಗಿದೆ. ಇನ್ನೂ ಪುನೀತ್ ರಾಜ್ಕುಮಾರ್ ರಸ್ತೆ ಇಟ್ಟು ಶಾಶ್ವತ ನೆನಪಿನಲ್ಲಿಡುವಂತೆ ಮಾಡಲಾಗಿದೆ. ವ್ಯಕ್ತಿಗಿಂತ ಅವರ ಮಾಡಿರುವ ಸಾಧನೆ ಮುಖ್ಯ ಎಂದು ಹೇಳಿದರು.
ಸಂಸದ ತೇಜಸ್ವಿಸೂರ್ಯ ಮಾತನಾಡಿ, ಕಡಿಮೆ ವೆಚ್ಚದಲ್ಲಿ ಸುಸಜ್ಜಿತವಿರುವ ಹವಾನಿಯಂತ್ರಣ ವ್ಯವಸ್ಥೆಯ ಕಲ್ಯಾಣ ಮಂಟಪವನ್ನು ಸಾರ್ವಜನಿಕರು ಉಪಯೋಗಿಸಿಕೊಳ್ಳಬಹುದು. ಸಭಾಂಗಣವನ್ನು ಶಾಲೆಯ ಕಾರ್ಯಕ್ರಮಗಳು, ಚಲನಚಿತ್ರ ಆಡಿಯೋ ಮತ್ತು ವಿಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಬಳಸಿಕೊಳ್ಳಬಹುದು ಎಂದು ಹೇಳಿದರು.
ನಿರ್ಮಾಪಕಿ ಅಶ್ವಿನಿ ಪುನೀತ್ರಾಜ್ಕುಮಾರ್ ಮಾತನಾಡಿ, ಸಾರ್ವಜನಿಕರ ಉಪಯೋಗಕ್ಕೆ ಅ.ನ.ಕೃ ಕಲ್ಯಾಣ ಮಂಟಪ ಮತ್ತು ಡಾ.ಪುನೀತ್ ರಾಜ್ಕುಮಾರ್ ಸಭಾಂಗಣವನ್ನು ನಿರ್ಮಿಸಲಾಗಿದೆ. ಇದರಲ್ಲಿ ಅತ್ಯಂತ ಕಡಿಮೆ ಬಾಡಿಗೆ ಜನರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅ.ನ.ಕೃ ಅವರ ಪುತ್ರ ಗೌತಮ್, ಮಾಜಿ ಪಾಲಿಕೆ ಸದಸ್ಯರುಗಳಾದ ಎ.ಎಚ್.ಬಸವರಾಜ್, ಸರಳ ಮಹೇಶ್, ಗೋವಿಂದರಾಜು ಸೇರಿದಂತೆ ಇತರರಿದ್ದರು.














