ಬೆಂಗಳೂರು: ಭಜನೆ ಕೇವಲ ಸ್ಪರ್ಧೆ ಅಲ್ಲ. ಅದಿರುವುದು ಉತ್ಸಾಹದ ಪ್ರಭೆಯನ್ನು ಪಸರಿಸಲು. ಭಕ್ತಿ ಪಂತದ ಶಕ್ತಿಯ ಪ್ರಭಾವಿತವನ್ನು ಉಚ್ಛ್ರಾಯಕ್ಕೆ ತೆಗೆದುಕೊಂಡು ಹೋಗುವ ಪಥವಾಗಿದೆ ಎಂದು ಶ್ರೀ ಧಾಮ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ ನುಡಿದರು.
ತುಳುಕೂಟ ಬೆಂಗಳೂರು ವತಿಯಿಂದ ವಿಜಯನಗರದ ಬಂಟರ ಸಂಘದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಜಧಾನಿ ಭಜನೋತ್ಸವ ಕಾರ್ಯಕ್ರಮದಲ್ಲಿ ಆಶಿರ್ವಚನ ನೀಡಿದರು. ಭಜನೆಯ ಸಂಕೀರ್ತನೆಯ ಮೂಲಕ ಆಭಕ್ತಿ ಪಂತಕ್ಕೆ ಶಕ್ತಿಯಾಗಿ ಎಲ್ಲರೂ ಮುನ್ನೆಡಸಬೇಕು. ಮುಂದಿನ ಪೀಳಿಗೆಯ ಮಕ್ಕಳಲ್ಲಿ ಇದರ ಪ್ರಭಾವ ಬೆಳೆಯಬೇಕು. ಇದು ಧರ್ಮ ಶಿಕ್ಷಣವಾಗಿದೆ ಎಂದರು.
ಮಹಾರಾಷ್ಟ್ರದಲ್ಲಿ ಭಜನೆ ಮಾಡುವವರನ್ನು ದಾಸರ ತರಹ ನೋಡುತ್ತಾರೆ. ಅದನ್ನು ನೋಡಬೇಕೆಂದಿರುವವರು ಆಷಾಡ ಏಕಾದಶಿ ದಿನ ಪಂಡರಪುರಕ್ಕೆ ಹೋಗಬೇಕು. ಅಲ್ಲಿ ಸಂಕಿರ್ತನೆ ಮಾಡುವವರು ವಿಠಲನೇ ಆಗಿರುತ್ತೀರಿ. ಎಲ್ಲರೂ ಅಷ್ಟು ಭಾವನಾತ್ಮಕವಾಗಿ ಹೇಳುತ್ತಿರುತ್ತಾರೆ. ಭಜನೆ ಕೇವಲ ಭಜನೆ ಆಗುವುದಿಲ್ಲ. ಅದಕ್ಕೆ ಭಾವನೆ ಬೇಕು. ಅಂತರ್ಯದಲ್ಲಿ ಭಾವನಾತ್ಮಕವಾಗಿ ಭಜನೆ ಇರಬೇಕು ಎಂದು ಹೇಳಿದರು.
ಬಹಳ ಜನರು ಭಜನೆ ಮಾಡುವ ಸಾಹಿತ್ಯ ಮನನ ಮಾಡುವುದಿಲ್ಲ. ಆ ಭಾವನಾತ್ಮಕವಾದ ಶಕ್ತಿ ಉದ್ದೀಪನ ಆಗುವುದು ನಿಮ್ಮ ಅಂತರ್ಯದಿಂದ. ಅದು ನಿಮ್ಮ ಮನಿಸ್ಸಿನಿಂದ ಬರಬೇಕು. ಅದರ ಸಾಹಿತ್ಯವನ್ನು ಮನನ ಮಾಡಬೇಕು. ಭಗವಂತ ನಿಮ್ಮ ಜೊತೆಯಲ್ಲಿ ಇದ್ದಾನೆ ಅನ್ನುವಂತಹ ಭಾವನೆ ಬರಬೇಕು. ಅದಕ್ಕೆ ಭಜನೆಗೆ ಶಕ್ತಿ ಇದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಸುರೇಂದ್ರ ಕುಮಾರ್, ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಉಪಸ್ಥಿತರಿದ್ದರು.














