ಬೆಂಗಳೂರು: ಚಿಕ್ಕಜಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ರಾತ್ರಿ ವೇಳೆ ಬೈಕ್ ನಲ್ಲಿ ತೆರಳುತ್ತಿದ್ದ ಯುವಕನ ಬಳಿ ಲಿಫ್ಟ್ ಪಡೆದು ಚಾಕು ಮತ್ತು ಹೆಲ್ಮೆೆಟ್ನಿಂದ ಹಲ್ಲೆ ನಡೆಸಿ ದರೋಡೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ 2.20 ಲಕ್ಷ ರೂ ಮೌಲ್ಯದ ದ್ವಿಚಕ್ರ ವಾಹನ, ಮೊಬೈಲ್ ಹಾಗೂ ಕೃತ್ಯಕ್ಕೆೆ ಬಳಸಿದ್ದ ಆಯುಧಗಳನ್ನು ಜಪ್ತಿ ಮಾಡಲಾಗಿದೆ. ನೆಲ್ಲಕುಂಟೆಯಲ್ಲಿರುವ ಕಲ್ಯಾಣ ಮಂಟಪವೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಯುವಕ, ಮಾರ್ಚ್ 25ರಂದು ಬೆಳಗಿನ ಜಾವ 2.30ರ ಸುಮಾರಿಗೆ ಊಟ ತರಲು ತನ್ನ ದ್ವಿಚಕ್ರ ವಾಹನದಲ್ಲಿ ಹುಣಸಮಾರನಹಳ್ಳಿ ರಸ್ತೆೆಯಲ್ಲಿ ಹೋಗುತ್ತಿದ್ದ. ಈ ವೇಳೆ ಇಬ್ಬರು ಅಪರಿಚಿತರು ಡ್ರಾಪ್ ಕೇಳಿದ್ದು, ಯುವಕ ಅವರನ್ನು ತನ್ನ ಬೈಕ್ನಲ್ಲಿ ಕೂರಿಸಿಕೊಂಡು ಹೋಗಿದ್ದಾರೆ. ಹೊಸಹಳ್ಳಿ ರಸ್ತೆೆಯ ಡಿ-ಮಾರ್ಟ್ ಬಳಿ ತಲುಪಿದಾಗ, ವಾಹನ ನಿಲ್ಲಿಸುವಂತೆ ಆರೋಪಿಗಳು ಸೂಚಿಸಿದ್ದಾರೆ. ವಾಹನ ನಿಲ್ಲಿಸುತ್ತಿದ್ದಂತೆ, ಯುವಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಚಾಕು ಹಾಗೂ ಹೆಲ್ಮೆೆಟ್ನಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ಆತನ ಬೈಕ್, ಮೊಬೈಲ್ ಮತ್ತು ಪರ್ಸ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಬಗ್ಗೆೆ ಮಾರ್ಚ್ 26ರಂದು ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ದೂರು ದಾಖಲಿಸಿಕೊಂಡ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಖಚಿತ ಮಾಹಿತಿ ಮೇರೆಗೆ ಹುಣಸಮಾರನಹಳ್ಳಿ ಬಳಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ತಮ್ಮ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ. ಅವರ ಮಾಹಿತಿ ಆಧಾರದ ಮೇಲೆ, ಕಳುವಾಗಿದ್ದ ದ್ವಿಚಕ್ರ ವಾಹನ, ಪರ್ಸ್, 1 ಮೊಬೈಲ್ ಫೋನ್ ಹಾಗೂ ಕೃತ್ಯಕ್ಕೆೆ ಬಳಸಿದ್ದ ಚಾಕು ಮತ್ತು ಹೆಲ್ಮೆೆಟ್ ಅನ್ನು ಠಾಣಾ ವ್ಯಾಪ್ತಿಯ ಸ್ಪಿನ್ನಿ ಕಂಪನಿ ಹಿಂದಿರುವ ಖಾಲಿ ಜಾಗದಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜಪ್ತಿ ಮಾಡಲಾದ ವಸ್ತುಗಳ ಒಟ್ಟು ಮೌಲ್ಯ 2.20 ಲಕ್ಷ ರೂ ಆಗಿದ್ದು, ಸದ್ಯ ಪ್ರಕರಣದ ಸಂಬಂಧ ನ್ಯಾಯಾಲಯವು ಅವರುಗಳನ್ನು ನ್ಯಾಯಾಂಗ ಬಂಧನಕ್ಕೆೆ ಒಪ್ಪಿಸಿದೆ.















