ಬೆಂಗಳೂರು: ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನವನ್ನು ನೀಡುವಂತೆ ಕರ್ನಾಟಕ ಮಾದರ ಮಹಾಸಭಾ ಸೇರಿದಂತೆ ಇತರೆ ಸಂಘಟನೆಗಳು ಆಗ್ರಹಿಸಿವೆ.
ಶುಕ್ರವಾರ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹಿರಿಯೂರು ಆದಿಜಾಂಬವ ಶಾಖಾ ಮಠದ ಶ್ರೀಶಿವಮುನಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಕಾಂಗ್ರೆಸ್ ಹಿರಿಯ ನಾಯಕ ಕೆ.ಎಚ್.ಮುನಿಯಪ್ಪ ಅವರ ಅಪಾರ ರಾಜಕೀಯ ಅನುಭವ, ಆಡಳಿತ ಸಾಮರ್ಥ್ಯ ಹಾಗೂ ಹಿಂದುಳಿದ ವರ್ಗಗಳ ಮೇಲಿನ ಅವರ ಬದ್ಧತೆಯನ್ನು ಮನಗಂಡು ಕಾಂಗ್ರೆಸ್ ಇವರಿಗೆ ಉಪ ಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕು ಎಂದು ಒತ್ತಾಯಿಸಿದರು.
ಕೆ.ಎಚ್.ಮುನಿಯಪ್ಪ ಸುಮಾರು ಐದು ದಶಕಗಳಿಂದ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆ, ಶಿಸ್ತು ಹಾಗೂ ಬದ್ಧತೆಯಿಂದ ಸೇವೆ ಸಲ್ಲಿಸಿದ್ದಾರೆ. ಏಳು ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿ ಸುಮಾರು ಮೂರು ದಶಕಗಳ ಕಾಲ ಸಂಸತ್ತಿನಲ್ಲಿ ಕಾರ್ಯನಿರ್ವಹಿಸಿದ ಅನುಭವವನ್ನು ಹೊಂದಿದ್ದಾರೆ. ಕೇಂದ್ರ ಸಚಿವರಾಗಿ ಸಮರ್ಥ ಮಹತ್ವದ ಹುದ್ದೆಯನ್ನು ನಿಭಾಯಿಸಿದ್ದಾರೆ. ಪ್ರಸ್ತುತ ರಾಜ್ಯ ರಾಜಕೀಯದಲ್ಲಿ ದಕ್ಷತೆಯಿಂದ ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವ ಇವರಿಗೆ ಉಪ ಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕು ಎಂದು ತಿಳಿಸಿದರು.
ಕರ್ನಾಟಕ ಮಾದರ ಮಹಾಸಭಾ ರಾಜ್ಯ ಸಂಘಟಕ ಬಿ.ಕೆ.ಶಿವಪ್ಪ ಮಾತನಾಡಿ, ರಾಜ್ಯ ರಾಜಕೀಯಕ್ಕೆ ಬಂದ ಸಂಧರ್ಭದಿಂದಲೂ ಮಾದಿಗ ಸಮುದಾಯದಲ್ಲಿ ಹೊಸ ವಿಶ್ವಾಸ ಮತ್ತು ಉತ್ಸಾಹ ಮೂಡಿದೆ. ಲಕ್ಷಾಂತರ ಮಾದಿಗರ ಅವರ ಪರ ನಿಂತಿದ್ದಾರೆ. ಇವರು ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ನಿರಂತರ ಹೋರಾಡುತ್ತಿದ್ದಾರೆ. ಸಾಮಾಜಿಕ ನ್ಯಾಯ ಮತ್ತು ಒಳ ಮೀಸಲಾತಿಗಾಗಿ ಸದಾ ಬೆಂಬಲವಾಗಿ ನಿಂತಿದ್ದು, ಇವುಗಳನ್ನು ಮನಗಂಡು ಇವರಿಗೆ ಪ್ರಸಕ್ತ ಸಂಧರ್ಭದಲ್ಲೂ ಸೂಕ್ತಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾದರ ಮಹಾಸಭಾ ಪದಾಧಿಕಾರಿಗಳಾದ ಶ್ರೀಧರ್, ಅರುಂಧತಿ ವಿ.ನಾಗರಾಜು, ಬಿ.ಎಂ.ಸುರೇಶ್ ಬಾಬು ಹಾಗೂ ಇತರರಿದ್ದರು.














