ಬೆಂಗಳೂರು: ರಾಜಾಜಿ ನಗರ ಸಂಯುಕ್ತ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಶ್ರೀಕಂಠಯ್ಯ ಅವರಿಗೆ 2026-27 ನೇ ಸಾಲಿನ ಉತ್ತಮ ಪ್ರಾಂಶುಪಾಲ ರಾಜ್ಯ ಪ್ರಶಸ್ತಿ ದೊರತ ಹಿನ್ನಲೆಯಲ್ಲಿ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ತಿಗಳರ ಸಾರ್ವಜನಿಕ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್.ಕೆ.ಸಿದ್ದಯ್ಯ, ಮಾಜಿ ಪಾಲಿಕೆ ಆಡಳಿತ ಪಕ್ಷದ ನಾಯಕ ಎ.ಎಚ್.ಬಸವರಾಜು, ಶಾಲಾ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಎನ್.ರಾಜು ಕಾರ್ಯಕ್ರಮವನ್ನು ಉದ್ಘಾಟಿಸಿ ಅಭಿನಂದನಾ ನುಡಿಗಳನ್ನಾಡಿದರು. ಗೌರವ ಕಾರ್ಯದರ್ಶಿ ಕೆಂಪಯ್ಯ, ಕಾರ್ಯದರ್ಶಿ ಎ.ಎನ್.ಕೃಷ್ಣಯ್ಯ, ವಿದ್ಯಾಭಿವೃದ್ಧಿ ಸಂಘದ ಜಂಟಿ ನಿರ್ದೇಶಕ ರಾಮಕೃಷ್ಣ .ಜಿ ಮತ್ತಿತರರು ಭಾಗವಹಿಸಿದ್ದರು.
ಈ ವೇಳೆ ಮಾಧ್ಯಮಗಳೊಂದಿಗೆ ಎಸ್. ಕೆ. ಸಿದ್ಧಯ್ಯ ಅವರು ಮಾತನಾಡಿ, ಇಡೀ ಕರ್ನಾಟಕದಲ್ಲಿ ಇಬ್ಬರು ಪ್ರಾಂಶುಪಾಲರಿಗೆ ಈ ಪ್ರಶಸ್ತಿ ದೊರೆತಿದೆ. ನಮ್ಮ ರಾಜಾಜಿನಗರ ತಿಗಳರ ಸಂಘದ ಕಾಲೇಜಿನ ಪ್ರಾಂಶುಪಾಲರಿಗೆ ಈ ಪ್ರಶಸ್ತಿ ಬಂದಿರುವುದು ನಮ್ಮ ಜನಾಂಗಕ್ಕೆ ಹಾಗೂ ಸಂಸ್ಥೆಗೆ ಹೆಮ್ಮೆಯ ವಿಚಾರವಾಗಿದೆ. ತಮ್ಮ ಪ್ರಾಮಾಣಿಕತೆ ಮತ್ತು ಕರ್ತವ್ಯ ನಿಷ್ಠೆಯಿಂದ ಶ್ರೀಕಂಠಯ್ಯ ಈ ಸಾಧನೆ ಮಾಡಿದ್ದಾರೆ. ಅವರನ್ನು ಗೌರವಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಸಂತಸ ವ್ಯಕ್ತಪಡಿಸಿದರು.
ಕೆಂಪಯ್ಯ ಅವರು ಮಾತನಾಡಿ, ಈ ಸಂಸ್ಥೆ ಪ್ರಾರಂಭವಾದಾಗಿನಿಂದಲೂ ಸುದೀರ್ಘ 29 ವರ್ಷಗಳ ಕಾಲ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದೇನೆ. ನನ್ನ ಪ್ರಾರಂಭಿಕ ಅವಧಿಯಲ್ಲಿ ಶ್ರೀಕಂಠಯ್ಯ ಅವರು ಉಪನ್ಯಾಸಕರಾಗಿ ನಮ್ಮ ಸಂಸ್ಥೆಗೆ ಸೇರ್ಪಡೆಯಾದರು, ನಂತರ ಪ್ರಾಂಶುಪಾಲರಾಗಿ ಬಡ್ತಿ ಪಡೆದರು. ಅವರ ಪರಿಶ್ರಮದಿಂದ 14 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಈ ಕಾಲೇಜು ಇಂದು 400 ರಿಂದ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದು, ಪ್ರತಿವರ್ಷ ಶೇಕಡ 95 ರಿಂದ 98 ರಷ್ಟು ಅತ್ಯುತ್ತಮ ಫಲಿತಾಂಶ ಸಾಧಿಸುತ್ತಿದೆ. ಇಂತಹ ನಿಷ್ಕಲ್ಮಶ ಕರ್ಮಜೀವಿಗೆ ಸರ್ಕಾರ ಪ್ರಶಸ್ತಿ ನೀಡಿ ಗೌರವಿಸಿರುವುದು ಅತ್ಯಂತ ಸೂಕ್ತವಾಗಿದೆ ಎಂದರು.
ಎ. ಎನ್. ಕೃಷ್ಣಯ್ಯ ಅವರು ಮಾತನಾಡಿ, 1967 ರಲ್ಲಿ ಪ್ರಾರಂಭವಾದ ಸಂಸ್ಥೆಯ ಶೈಕ್ಷಣಿಕ ಪಯಣದಲ್ಲಿ ಶ್ರೀಕಂಠಯ್ಯ ಅವರಿಗೆ ರಾಜ್ಯ ಪ್ರಶಸ್ತಿ ಲಭಿಸಿರುವುದು ನಮ್ಮ ಜನಾಂಗಕ್ಕೆ ಮತ್ತು ಸಂಸ್ಥೆಗೆ ಸಂದ ಗೌರವವಾಗಿದೆ. ವಿದ್ಯಾರ್ಥಿಗಳ ಸಮ್ಮುಖದಲ್ಲೇ ಅವರಿಗೆ ಈ ಅಭಿನಂದನೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ನುಡಿದರು.
ಎನ್. ರಾಜು ಅವರು ಮಾತನಾಡಿ, ಶ್ರೀಕಂಠಯ್ಯ ಅವರು ಕೆಲಸಕ್ಕೆ ಹೆಚ್ಚಿನ ಆದ್ಯತೆ ನೀಡುವ ಮಿತಭಾಷಿ ಹಾಗೂ ಪ್ರಾಮಾಣಿಕ ವ್ಯಕ್ತಿಯಾಗಿದ್ದಾರೆ. ಬೆಂಗಳೂರು ಉತ್ತರ ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ಶೈಕ್ಷಣಿಕ ಫಲಿತಾಂಶ 11ನೇ ಸ್ಥಾನದಿಂದ 7ನೇ ಸ್ಥಾನಕ್ಕೆ, ನಂತರ 5ನೇ ಸ್ಥಾನಕ್ಕೆ ಏರಲು ಇವರ ಕೊಡುಗೆ ಅಪಾರವಾಗಿದೆ. ರಾಜ್ಯಮಟ್ಟದಲ್ಲಿ ಸುಮಾರು 49 ಅರ್ಜಿಗಳ ಪೈಕಿ ಇವರ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಅತ್ಯಂತ ಸೂಕ್ತವಾಗಿದೆ ಎಂದರು.
ಶ್ರೀಕಂಠಯ್ಯ ಅವರು ಮಾತನಾಡಿ, ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಹೆಸರಿನಲ್ಲಿ ನನಗೆ ಲಭಿಸಿರುವ ಈ ಅತ್ಯುತ್ತಮ ಪ್ರಾಂಶುಪಾಲ ಪ್ರಶಸ್ತಿ ವೈಯಕ್ತಿಕವಾಗಿ ಸಿಕ್ಕಿದ್ದಲ್ಲ. ನನ್ನ ಕಾಲೇಜು, ಆಡಳಿತ ಮಂಡಳಿ, ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳ ಸಮಗ್ರ ಶ್ರಮಕ್ಕೆ ಸಿಕ್ಕ ಗೌರವವಾಗಿದೆ. ಕಳೆದ 33 ವರ್ಷಗಳ ನನ್ನ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಿದ ಸರ್ಕಾರ ಹಾಗೂ ಶಿಕ್ಷಣ ಇಲಾಖೆಗೆ ಧನ್ಯವಾದಗಳು. ನನಗೆ ಅನ್ನ, ಆಶ್ರಯ, ಉದ್ಯೋಗ ನೀಡಿದ ಸಂಸ್ಥೆಗೆ ಈ ಪ್ರಶಸ್ತಿಯನ್ನು ಸಮರ್ಪಿಸುತ್ತೇನೆ ಎಂದರು.














