ಬೆಂಗಳೂರು: ಯೋಗವನ್ನು ಜಗತ್ತಿಗೆ ಪರಿಚಯಿಸಿರುವುದು ಭಾರತ ದೇಶ. ಇಂದು ಪ್ರಪಂಚದ ಎಲ್ಲಡೆಯಿಂದ ನಮ್ಮ ದೇಶಕ್ಕೆ ಬಂದು ಯೋಗವನ್ನು ಕಲಿತು ತಮ್ಮ ದೇಶಕ್ಕೆ ಹೋಗಿ ಪಸರಿಸುವ ಕೆಲಸ ಮಾಡುತ್ತಿದ್ದಾರೆ. ಈ ಅದ್ಬುತ ಪ್ರಕ್ರಿಯೆಯ ಶಕ್ತಿ ಜಗತ್ತಿಗೆ ಅರಿವಾಗಿದೆ ಎಂದು ಪದಾಂಕಿತ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ತಿಳಿಸಿದರು.
ಸೋಮವಾರ ಬೆಂಗಳೂರು ವಕೀಲರ ಸಾಹಿತ್ಯ ಕೂಟ ಮಾತಾ ಅಮೃತಾನಂದ ಮಹಿದ ಸಹಯೋಗದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಯೋಗ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯೋಗ ಕೇವಲ ದೈಹಿಕ ಚಟುವಟಿಕೆ ಆಗಿರದೆ ಆಧ್ಯಾತ್ಮಿಕದ ಕಡೆಗೆ ಹೆಜ್ಜೆ ಹಾಕುವ ಮೊದಲ ಮೆಟ್ಟಿಲಾಗಿದೆ. ಇದರಿಂದ ಏಕಾಗ್ರತೆ ಹೆಚ್ಚಾಗುತ್ತದೆ. ಆದ್ದರಿಂದ ಈ ಶಿಬಿರವನ್ನು ಎಲ್ಲಾ ವಕೀಲರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸಾಹಿತ್ಯ ಕೂಟದ ಅಧ್ಯಕ್ಷ ಮಂಜುನಾಥ ಬಿ ಗೌಡ ಮಾತನಾಡಿ, ವಕೀಲರು ತಮ್ಮ ವೃತ್ತಿ ನಿರ್ವಹಿಸುವ ವೇಳೆ ಸದಾ ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿರುತ್ತಾರೆ. ಇದರಿಂದ ಹಲವು ಪ್ರಯೋಜನಗಳಿದ್ದು, ಆದರೆ ವಕೀಲರಿಗೆ ಹೊರಗಡೆ ಹೋಗಿ ಯೋಗ ಕಲಿಯಲು ಸಮಯದ ಅಭಾವವಿರುವುದರಿಂದ ಸಂಜೆ ತರಗತಿಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.
ಖಜಾಂಚಿ ಹರೀಶ ಜೆ ಮಾತನಾಡಿ, ಇಂದಿನ ಕಾರ್ಯಕ್ರಮಕ್ಕೆ ಕೂಡ ಸಾಕಷ್ಟು ವಕೀಲರು ಭಾಗವಹಿಸಿರುವುದು ಸಂತಸ ತಂದಿದೆ. ಯೋಗವನ್ನು ಮಾಡುತ್ತಿರಿ ರೋಗವನ್ನು ತಡೆಯುತ್ತಿರಿ ಎನ್ನುವುದು ಖ್ಯಾತ ನುಡಿಯಾಗಿದೆ. ವೃತ್ತಿಯಲ್ಲಿನ ಮಾನಸಿಕ ಮತ್ತು ದೈಹಿಕ ಒತ್ತಡಗಳನ್ನು ನಿವಾರಿಸಿಕೊಳ್ಳಲು ಇದೊಂದು ಅತ್ಯುತ್ತಮ ಮಾರ್ಗವಾಗಿದೆ ಎಂದು ಅಭಿಪ್ರಾಯಸಿದರು.
ಮಾತಾ ಅಮೃತಾನಂದಮಯಿ ಮಠದ ನಿಷ್ಕಾಮಾಮೃತ ಚೈತನ್ಯ ಸ್ವಾಮೀಜಿ ಕಾರ್ಯಕ್ರಮದಲ್ಲಿ ಮಾತನಾಡಿ, ಯೋಗ ಕೇವಲ ನಮ್ಮ ದೈಹಿಕ ಆರೋಗ್ಯಕ್ಕೆ ಸೀಮಿತವಾಗಿರದೆ ಮನಸ್ಸನ್ನು ನಿಯಂತ್ರಣದಲ್ಲಿರುವ ಪ್ರಕ್ರಿಯೆಯಾಗಿದೆ. ಇದಕ್ಕೆ ಯಾವುದೇ ಧರ್ಮದ ಕಟ್ಟುಪಾಡುಗಳಿಲ್ಲ. ಎಲ್ಲಾ ಧರ್ಮದ, ಜಾತಿಯ ವಯೋಮಾನದ ಮನುಷ್ಯರು ಇದನ್ನು ಅಭ್ಯಾಸ ಮಾಡಬಹುದಾಗಿದೆ. ಪ್ರಾಣದ ಮತ್ತು ಉಸಿರಿನ ಸಮತೋಲನವನ್ನು ಸಾಧಿಸಿದರೆ ಜೀವನದಲ್ಲಿ ಅತ್ಯುತ್ತಮ ಸಾಧನೆಯ ಕಡೆ ಹೆಜ್ಜೆ ಇಡಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.
ಯೋಗ ಶಿಕ್ಷಕಿ ವನಿತಾ ಸುನಿಲ್ ಮಾತನಾಡಿ, ಆಯುಷ್ ಇಲಾಖೆಯಿಂದ ಅಂತರರಾಷ್ಟ್ರೀಯ ಯೋಗ ದಿನಾಚರಣೆಗಾಗಿ ಪ್ರತ್ಯೇಕ ಪ್ರೋಟೋಕಾಲ್ ಅನ್ನು ಹೊರಡಿಸಲಾಗಿದೆ. ಅದರ ಪ್ರಕಾರವೇ ಈ ತರಬೇತಿ ಶಿಬಿರ ನಡೆಯಲಿದೆ. ವಕೀಲರ ಹತ್ತಿರ ಕಕ್ಷಿದಾರರು ಒಂದು ತಮ್ಮ ಸಂಕಷ್ಟಗಳನ್ನು ಹೇಳಿಕೊಳ್ಳುವಾಗ ಅದನ್ನು ಕೇಳಿಸಿಕೊಳ್ಳುವ ವ್ಯವಧಾನ ಇರಬೇಕು, ಆದರೆ ಈ ಒತ್ತಡದ ಜೀವನದಲ್ಲಿ ಸಮಾಧಾನದ ಕೇಳುವಿಕೆಯೂ ಕಷ್ಟವಾಗಿದೆ. ಇದನ್ನು ಈ ಯೋಗ ಶಿಬಿರದ ಮೂಲಕ ಅಳವಡಿಸಿಕೊಳ್ಳುವಂತಾದರೆ ಸಾರ್ಥಕತೆ ಸಾಧಿಸಿದಂತಾಗುತ್ತದೆ ಎಂದು ತಿಳಿಸಿದರು.
ಬೆಂಗಳೂರು ವಕೀಲರ ಸಾಹಿತ್ಯ ಕೂಟದ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ವಕೀಲರ ಸಂಘದ ಸದಸ್ಯರು ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.














