ಬೆಂಗಳೂರು: ಸಮಾಜದ ಆರೋಗ್ಯ ರಕ್ಷಣೆಯಲ್ಲಿ ಹಾಗೂ ರೋಗಿಗಳ ಆರೈಕೆಯಲ್ಲಿ ನರ್ಸಿಂಗ್ ಸಮುದಾಯದ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಬುಧವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಆಯೋಜಿಸಿದ್ದ 25 ನೇ ವರ್ಷದ ಸಿಲ್ವರ್ ಜುಬಿಲಿ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ನರ್ಸ್ ಗಳು ತೋರಿಸುವ ನಿಸ್ವಾರ್ಥ ಸೇವೆ, ಮಾನವೀಯ ಕಾಳಜಿ ಮತ್ತು ಸಮರ್ಪಣಾ ಮನೋಭಾವ ಆರೋಗ್ಯ ಕ್ಷೇತ್ರದ ಬೆನ್ನೆಲುಬಾಗಿದೆ ಎಂದು ಶ್ಲಾಘಿಸಿದರು.
ಇದು ಬರೀ ವೃತ್ತಿಯಲ್ಲ, ಭಾವನೆಗಳನ್ನೊಳಗೊಂಡ ಸೇವಾ ಕಾರ್ಯ. ಆಸ್ಪತ್ರೆಗಳಲ್ಲಿ ರೋಗಿಗಳ ಜೊತೆ ಎಮೋಷನಲ್ ಮತ್ತು ಸೈಕಾಲಜಿಕಲಿ ಕನೆಕ್ಟ್ ಆಗುವುದು ದಾದಿಯರು ಮಾತ್ರ. ಒಬ್ಬ ಡಾಕ್ಟರ್ ಆಸ್ಪತ್ರೆಗೆ ಒಂದು ದಿನ ಭೇಟಿ ನೀಡಲಿಲ್ಲ ಎಂದರೆ ನೆಡೆದು ಹೋಗುತ್ತದೆ ಆದರೆ ನರ್ಸ್ ಗಳು ಅರ್ಧ ಗಂಟೆ ಇಲ್ಲದಿದ್ದರೂ ಪೇಷಂಟ್ ಗಳ ಪರಿಸ್ಥಿತಿ ಕೆಟ್ಟದಾಗುತ್ತದೆ. ದಿನದ 24 ಗಂಟೆಗಳ ಕಾಲ ಕೂಡ ಅವರ ಸೇವೆ ಬಹಳ ಮುಖ್ಯ ಎಂದರು.
ಆಯೋಜಕ, ಮಾಜಿ ಶಾಸಕ ಐವಾನ್ ನಿಗ್ಲಿ ಮಾತನಾಡಿ, ಪಾಂಡಿಚೇರಿಯಲ್ಲಿ ನರ್ಸ್ ಒಬ್ಬರು ನನಗೆ ಸಹಾಯ ಮಾಡಿ ಜೀವ ಉಳಿಸಿ ಜೀವನವನ್ನೇ ಬದಲಾಯಿಸಿದರು. ಅಂತ್ಯಂತ ಕಷ್ಟದ ಪರಿಸ್ಥಿತಿಯಲ್ಲಿದ್ದ ನನ್ನನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆಯನ್ನು ಮೆರೆದರು. ನಾನು ಒಂದು ಹಂತಕ್ಕೆ ಬಂದ ಮೇಲೆ ನನ್ನ ಹಿತೈಷಿಗಳೊಂದಿಗೆ ಚರ್ಚಿಸಿ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿಯನ್ನು ಅತ್ಯುತ್ತಮ ಸೇವೆ ಸಲ್ಲಿಸಿದ ದಾದಿಯರಿಗೆ ನೀಡಲು ಸಂಸ್ಥೆಯ ವತಿಯಿಂದ ಪ್ರಾರಂಭಿಸಿದೆ. ಈ ಒಂದು ಅತ್ಯುನ್ನತ ಸೇವೆಯನ್ನು ಗುರುತಿಸಿ ಕೊಡಮಾಡುವ ಪ್ರಶಸ್ತಿಗೆ 25 ವಸಂತಗಳು ತುಂಬಿರುವುದು ಸಂತಸ ತಂದಿದೆ ಎಂದರು.
ಇದೇ ವೇಳೆ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಹಾಗೂ ಸೇವೆ ಸಲ್ಲಿಸಿದ ನರ್ಸ್ ಗಳಿಗೆ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ನೀಡುವ ಮೂಲಕ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಗಣ್ಯರು, ಆರೋಗ್ಯ ಕ್ಷೇತ್ರದ ಪ್ರತಿನಿಧಿಗಳು ಹಾಗೂ ನರ್ಸಿಂಗ್ ಸಮುದಾಯದ ಸದಸ್ಯರು ಉಪಸ್ಥಿತರಿದ್ದರು.














