ಬೆಂಗಳೂರು: ಒಳ ಮೀಸಲಾತಿ ವಿಚಾರದಲ್ಲಿ ಹಾಗೂ ವಸತಿ ಯೋಜನೆಗಳಲ್ಲಿ ಅಲೆಮಾರಿ ಸಮುದಾಯಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಸಮಾಜದ ನಿಜವಾದ ನಿರ್ಗತಿಕರಾದ ಅಲೆಮಾರಿಗಳನ್ನು ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರಗಳು ಅಸಡ್ಡೆಯ ರೀತಿಯಲ್ಲಿ ಇಂದಿಗೂ ನೆಡೆಸಿಕೊಳ್ಳುತ್ತಿರುವುದು ವಿಷಾದದ ಸಂಗತಿಯಾಗಿದೆ ಎಂದು ಕರ್ನಾಟಕ ಬಹುಜನ ಸಂಘರ್ಷ ಸಮಿತಿಯ ಸಂಸ್ಥಾಪನಾಧ್ಯಕ್ಷ, ಮಾಜಿ ವಿಧಾನ ಪರಿಷತ್ ಸದಸ್ಯ ಡಿ.ಎಸ್ ವೀರಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ಬುಧವಾರ ಶಾಸಕರ ಭವನದಲ್ಲಿ ಕರ್ನಾಟಕ ಬಹುಜನ ಸಂಘರ್ಷ ಸಮಿತಿಯ ನೂತನ ಪಾಧಿಕಾರಿಗಳ ಆಯ್ಕೆ ಸಂಬಂಧ ಕರೆಯಲಾಗಿದ್ದ ಸಭೆಯ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅಲೆಮಾರಿಗಳು ರಾಜಕೀಯವಾಗಿ ಅಷ್ಟು ಪ್ರಭಾವಶಾಲಿಗಳಲ್ಲ. ಹೀಗಾಗಿ ಸತತವಾಗಿ ಸರ್ಕಾರಗಳು ನಿರ್ಲಕ್ಷಿಸುವ ಧೋರಣೆಯನ್ನು ಬೆಳೆಸಿಕೊಂಡು ಬಂದಿವೆ. ಆದರೆ ಕೆ.ಬಿ.ಬಿ.ಎಸ್ ಮಾತ್ರ ಅವರುಗಳ ಬೆನ್ನೆಲುಬಾಗಿ, ಅವರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುತ್ತಾ ಹೋರಾಟವನ್ನು ನಡೆಸಿಕೊಂಡು ಬಂದಿದೆ ಎಂದರು.
ಈ ಅವಕಾಶ ವಂಚಿತ ಸಮುದಾಯಗಳಿಗೆ ಸಮಿತಿಯ ವತಿಯಿಂದ ಸ್ಲಂ ಉನ್ನತೀಕರಣ ಸೇರಿದಂತೆ ಹಲವು ವಸತಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಅವರಿಗಾಗಿಯೇ ಸಮುದಾಯ ಭಾವನಗಳ ನಿರ್ಮಾಣ, ವಿದ್ಯಾರ್ಥಿ ವೇತನಗಳನ್ನು ನೀಡುವುದು, ಕಲಿಕೆಗೆ ಉತ್ತೇಜನ ನೀಡುವ ಹಲವು ಕಾರ್ಯಕ್ರಮಗಳು, ಕೌಶಲ್ಯ ಅಭಿವೃದ್ಧಿಗಾಗಿ ತರಬೇತಿ ಸೇರಿದಂತೆ ಕ್ರಿಯಾ ಯೋಜನೆಗಳು ಈಗಾಗಲೆ ಜಾರಿಯಲ್ಲಿದೆ. ಒಟ್ಟಾರೆಯಾಗಿ ಅಲೆಮಾರಿಗಳನ್ನು ಮುಖ್ಯ ವಾಹಿನಿಗೆ ತಂದು ದೇಶದ ಸತ್ಪ್ರೆಜೆಗಳನ್ನಾಗಿಸುವುದು ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಕರ್ನಾಟಕ ಕೊಲೆಬಸವ ಸಮುದಾಯದ ಶ್ರೀನಿವಾಸ್ ಅವರು ಈ ಸಂದರ್ಭದಲ್ಲಿ ಮಾತನಾಡಿ, ಸುಮಾರು 20 ವರ್ಷಗಳಿಂದ ಡಿ.ಎಸ್. ವೀರಯ್ಯ ಅವರ ನೇತೃತ್ವದಲ್ಲಿ ಕರ್ನಾಟಕ ಬಹುಜನ ಸಂಘರ್ಷ ಸಮಿತಿಯು ನೆಲೆ ಇಲ್ಲದ ಸಮುದಾಯಗಳಿಗೆ ವಸತಿ ಕಲ್ಪಿಸುವ ಯೋಜನೆಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಇಲ್ಲಿ ಹತ್ತು ಹಲವು ಸಂಘಟನೆಗಳನ್ನು ಸಹ ಸಮಿತಿಯಲ್ಲಿ ಒಳಗೂಡಿಸಿಕೊಂಡು ಕೆಲಸವನ್ನು ನಿರ್ವಹಿಸಲಾಗುತ್ತಿದೆ. ಮುಖ್ಯವಾಗಿ ನಮ್ಮ ಸಮುದಾಯಕ್ಕೆ ಆನೇಕಲ್ ತಾಲೂಕಿನಲ್ಲಿ 2 ಎಕರೆ ಭೂಮಿಯನ್ನು ಕೊಡಿಸಿ ಕಲ್ಯಾಣ ಕಾರ್ಯವನ್ನು ಹಮ್ಮಿಕೊಂಡಿರುವ ಕೆಲಸ ಮಾದರಿಯಾಗಿದೆ ಎಂದರು.
ಭಿಕ್ಷಾಟನೆ ಮಾಡುವರನ್ನು ಗುರುತಿಸಿ ಅವರುಗಳಿಗೆ ಪುನರ್ವಸತಿ ಕಲ್ಪಿಸಿ ಅವರುಗಳಿಗೆ ಹೊಸ ಉದ್ಯೋಗ ನೆಡೆಸಲು ಮತ್ತು ಸ್ವ ಉದ್ಯೋಗ ಕೈಗೊಳ್ಳಲು ಉತ್ತೇಜನವನ್ನು ಸಮಿತಿ ಕೈಗೊಂಡಿದೆ. 32 ಜಿಲ್ಲೆಗಳ 120 ಸ್ಲಂ ಗಳ ಅಭಿವೃದ್ಧಿ ಕಾರ್ಯ ಅವ್ಯಾಹತವಾಗಿ ನಡೆಯುತ್ತಿದೆ. ಆದಿವಾಸಿಗಳ ಪರವಾಗಿ ಕೂಡ ಹಲವು ಯೋಜನೆಗಳನ್ನು, ಹೋರಾಟವನ್ನು ಹಮ್ಮಿಕೊಳ್ಳಲಾಗಿದ್ದು, ಎಲ್ಲದಕ್ಕೂ ತಾರ್ಕಿಕ ಯಶಸ್ಸು ತರುವಲ್ಲಿ ವೀರಯ್ಯ ನವರ ಪಾತ್ರ ದೊಡ್ಡದಿದೆ ಎಂದು ತಿಳಿಸಿದರು.
ಸಭೆಯಲ್ಲಿ ಉಪಾಧ್ಯಕ್ಷ ಮಾದೇಶ್, ವಿ.ಬಾಲಕೃಷ್ಣ, ಎಸ್.ಲವ, ಟಿ.ಮುನಿರಾಜು, ನಾರಾಯಣ ಸ್ವಾಮಿ ಮತ್ತಿತರರು ಭಾಗವಹಿಸಿದ್ದರು.














