ಬೆಂಗಳೂರು: ತೋಟಗಾರಿಕೆ ಇಲಾಖೆ ಮತ್ತು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಸಂಯುಕ್ತಾಶ್ರಯದಲ್ಲಿ ಮೇ. 8ರಿಂದ 17ರವರಗೆ ನಗರದ ಕಬ್ಬನ್ ಉದ್ಯಾನವನದಲ್ಲಿ 2026 ನೇ ಸಾಲಿನ ಮಾವು ಮತ್ತು ಹಲಸು ಪ್ರದರ್ಶನ ಹಾಗೂ ಮಾರಟ ಮೇಳವನ್ನು ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಬಿ.ಸಿ. ಮುದ್ದುಗಂಗಾಧರ ತಿಳಿಸಿದರು.
ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿನಲ್ಲಿರುವ ಮಾವು ಅಭಿವೃದ್ಧಿ ಮಂಡಳಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಬೇಸಿಗೆ ಹಂಗಾಮಿನ ವಿಶೇಷವಾಗಿರುವ ಈ ಮೇಳದಲ್ಲಿ ಗ್ರಾಹಕರಿಗೆ ಕಾರ್ಬೈಡ್ ಮುಕ್ತ, ಸಹಜವಾಗಿ ಮಾಗಿದ ಮಾವು ಹಾಗೂ ಹಲಸು ಹಣ್ಣುಗಳನ್ನು ರೈತರಿಂದ ನೇರವಾಗಿ ಖರೀದಿಸುವ ಅವಕಾಶ ಕಲ್ಪಿಸಲಾಗಿದೆ. ರೈತರು ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕ ಬೆಳೆಸುವ ಮೂಲಕ ಬೆಳೆಗಾರರಿಗೆ ಯೋಗ್ಯ ಬೆಲೆ ಮತ್ತು ಗ್ರಾಹಕರಿಗೆ ತಾಜಾ, ರುಚಿಕರ ಹಣ್ಣುಗಳು ಸಮರ್ಪಕ ದರದಲ್ಲಿ ದೊರೆಯುವಂತೆ ವ್ಯವಸ್ಥೆ ಮಾಡವುದು ಈ ಮೇಳದ ಉದ್ದೇಶವಾಗಿದೆ ಎಂದರು.
ಮೇಳದಲ್ಲಿ ಬಾದಾಮಿ, ಮಲ್ಲಿಕಾ, ಸೆಂದೂರಾ, ರಸಪೂರಿ, ಕರಿ ಇಶಾಡ್ ಸೇರಿದಂತೆ ಹಲವು ಮಾವಿನ ತಳಿಗಳು ಹಾಗೂ ರುದ್ರಾಕ್ಷಿ, ಶಿವರಾತ್ರಿ, ಏಕಾದಶಿ, ತೂಬಗೆರೆ ಸೇರಿದಂತೆ ಹಲಸಿನ ತಳಿಗಳು ಲಭ್ಯವಿರಲಿವೆ. ವಿಶೇಷವಾಗಿ ಜಿಐ ಮಾನ್ಯತೆ ಪಡೆದ ಕರಿ ಇಶಾಡ್ ಮಾವು ಕೂಡ ಮಾರಾಟಕ್ಕೆ ಇರಲಿದೆ. ರಾಮನಗರ, ಮಂಡ್ಯ, ತುಮಕೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳ ಬೆಳೆಗಾರರು ಮೇಳದಲ್ಲಿ ಭಾಗವಹಿಸುತ್ತಿದ್ದು, ಒಟ್ಟು 50 ಮಾವು ಮಳಿಗೆಗಳು ಮತ್ತು 7 ಹಲಸು ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದೆ. ಮೇಳದಲ್ಲಿ ವಿವಿಧ ತಳಿಗಳ ಹಣ್ಣುಗಳನ್ನು ವೀಕ್ಷಿಸುವ ಹಾಗೂ ಸವಿಯುವ ಅವಕಾಶವೂ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ವರ್ಷದಲ್ಲಿ ಅಂದಾಜು ಶೇ.60 ರಿಂದ 70 ರಷ್ಟು ಬೆಳೆ ನಷ್ಟವಾಗಿದ್ದು, ಉಳಿದ ಹಣ್ಣಿನ ಮೇಲೂ ಇತ್ತೀಚಿನ ಮಳೆಯಿಂದ ಶೇ. 8 ರಿಂದ 10 ರಷ್ಟು ಹಾನಿ ಉಂಟಾಗಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆ ತುರ್ತಾಗಿ ಸಭೆ ನಡೆಸಿದ ಅಧಿಕಾರಿಗಳು ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ಒದಗಿಸಲು ಕ್ರಮ ಕೈಗೊಂಡಿದ್ದಾರೆ. ಶೇ.33ಕ್ಕಿಂತ ಹೆಚ್ಚು ನಷ್ಟವಾದ ಬೆಳೆಗಳಿಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಮೂಲಕ ನೆರವು ನೀಡುವಂತೆ ಸೂಚಿಸಲಾಗಿದೆ. ಮಾವು ಹಂಗಾಮಿಗೆ ಪೂರಕವಾಗಿ ನಿಗಮ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು.
ಮಾಡಿಕೆರೆ ಮಾವು ಅಭಿವೃದ್ಧಿ ಕೇಂದ್ರದ ಪ್ಯಾಕ್ಹೌಸ್ ಮೂಲಕ ಈ ವರ್ಷ 11 ಟನ್ ಮಾವು ಹಣ್ಣನ್ನು ಸಂಸ್ಕರಿಸಿ ಅಮೆರಿಕಾ, ಜರ್ಮನಿ ಮತ್ತು ಯುಕೆ ದೇಶಗಳಿಗೆ ರಫ್ತು ಮಾಡಲಾಗಿದೆ. ಜತೆಗೆ ಮಾವು ಸಂಸ್ಕರಣೆ ಕುರಿತು ಮ್ಯಾಂಗೋ ಪಲ್ಪ್, ಮ್ಯಾಂಗೋ ಬಾರ್, ಪಿಕಲ್ ತಯಾರಿಕೆ ತರಬೇತಿಗಳು ನಡೆಯುತ್ತಿದ್ದು, ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಬೈರಾಪಟ್ಟಣದಲ್ಲಿ ಹೊಸ ಪ್ಯಾಕ್ಹೌಸ್ ಘಟಕವನ್ನು ಪ್ರಾರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.














