ಬೆಂಗಳೂರು: ಶ್ರೀ ಸಹಸ್ರಾರು ಯೋಗೀಶ್ವರ ಸ್ವಾಮಿ ಮಹಾಪೀಠದ ವತಿಯಿಂದ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಪ್ರಕಟಿಸಿರುವ ಶ್ರೀ ಯೋಗಿ ಅವರು ರಚಿಸಿದ ಮಹತ್ವದ ಕೃತಿ ದ ವಾಂಡರರ್ ಹೂ ಓನ್ಸ್ ದ ವರ್ಲ್ಡ್ ಲೋಕಾರ್ಪಣೆ ಕಾರ್ಯಕ್ರಮ ಮೇ 7ರಂದು ಇಂದಿರಾನಗರದ ಅಟ್ಟಾ ಗಲಾಟ್ಟಾದಲ್ಲಿ ನಡೆಯಲಿದೆ.
ಈ ಕುರಿತು ಮಂಗಳವಾರ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಪೀಠದ ಆಡಳಿತ ಮುಖ್ಯಸ್ಥ ಮೋಹನ್ ದತ್ತಾತ್ರೇಯ ರಾವ್ ಧಾರವಾಡಕರ್, ವೇಗ ಮತ್ತು ಆತಂಕದ ಇಂದಿನ ಆಧುನಿಕ ಬದುಕಿನಲ್ಲಿ, ಯಶಸ್ಸು ಮತ್ತು ಅಸ್ಮಿತೆಯ ಬಗ್ಗೆ ಹೊಸ ದೃಷ್ಟಿಕೋನವನ್ನು ಈ ಪುಸ್ತಕ ನೀಡಲಿದೆ, ಯಾರು ಜಗತ್ತಿಗೆ ಅಂಟಿಕೊಳ್ಳುವುದಿಲ್ಲವೋ ಅವರು ಮಾತ್ರ ಇಡೀ ಜಗತ್ತನ್ನು ತಿಳಿದು ಅನುಭವಿಸಲು ಸಾಧ್ಯ ಎಂಬ ಗಾಢವಾದ ಚಿಂತನೆಯನ್ನು ಈ ಕೃತಿ ಒಳಗೊಂಡಿದೆ ಎಂದು ವ್ಯಾಖ್ಯಾನಿಸಿದರು.
ಮಾನಸಿಕ ನೆಮ್ಮದಿ ಮತ್ತು ಜೀವನದ ಅರ್ಥವನ್ನು ಹುಡುಕುತ್ತಿರುವ ಇಂದಿನ ಪೀಳಿಗೆಗೆ ಇದು ದಾರಿದೀಪವಾಗಲಿದೆ. ಆಧುನಿಕ ಬದುಕಿನ ಒತ್ತಡಗಳಿಗೆ ಪರಿಹಾರ ನೀಡುವ ವೈಚಾರಿಕ ಕೃತಿಯ ಅನಾವರಣವಾಗಲಿದೆ. ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಂಸದ ಡಾ. ಸಿ. ಎನ್. ಮಂಜುನಾಥ್, ಹಿರಿಯ ಪೊಲೀಸ್ ಅಧಿಕಾರಿ ಸುಧೀರ್ ಎಂ. ಹೆಗಡೆ, ಹಿರಿಯ ವಿದ್ವಾಂಸ ಜಿ. ಅಶ್ವತ್ಥನಾರಾಯಣ. ಖ್ಯಾತ ನಟಿ ತಾರಾ ಅನುರಾಧ. ನಟ ರಾಣಾ, ಕವಿ ಮಂಡಲಗಿರಿ ಪ್ರಸನ್ನ ಸೇರಿದಂತೆ ವೈದ್ಯಕೀಯ ಮತ್ತು ಉದ್ಯಮ ಕ್ಷೇತ್ರದ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಶ್ರೀ ಯೋಗ ಶ್ರೀಮತ್ ಪರಮಹಂಸ ಪರಿವ್ರಾಜಕಾಚಾರ್ಯ ಯೋಗೀಶ್ವರ ಸ್ವಾಮಿ ವಾಸ್ತುಶಿಲ್ಪ, ವಾಯುಯಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅನುಭವ ಹೊಂದಿ, ಇಂದು ಅವಧೂತ ಮಾರ್ಗದಲ್ಲಿ ನೆಲೆ ನಿಂತಿದ್ದಾರೆ, ಅವರ ಜೀವನದ ಶ್ರೀಮಂತ ಅನುಭವಗಳೇ ಈ ಪುಸ್ತಕದ ಸಾರವಾಗಿದೆ ಎಂದು ಮೋಹನ್ ದತ್ತಾತ್ರೇಯ ರಾವ್ ಧಾರವಾಡಕರ್ ತಿಳಿಸಿದರು.














