ಬೆಂಗಳೂರು: ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಏಳ್ಗೆಗೆ ಕೆ. ಪಿ ನಂಜುಂಡಿ ಅವರ ಪಾತ್ರ ಬಹಳಷ್ಟಿದೆ. ಕುಟುಂಬಗಳ ವ್ಯವಸ್ಥೆಯೇ ಶಿಥಿಲವಾಗುತ್ತಿರುವ ಈ ಸಂದರ್ಭದಲ್ಲಿ ಸತತ 3 ವರ್ಷ ವಧು ವರರ ಸಮಾವೇಶದ ನೆರವೇರಿಸಿಕೊಂಡು ಬಂದಿರುವುದು ಕಡಿಮೆ ಮಾತಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.
ಭಾನುವಾರ ಗುರುರಾಜ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ 3ನೇ ರಾಜ್ಯಮಟ್ಟದ ವಧು ವರರ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ವಿಶ್ವಕರ್ಮ ಸಮಾಜ ಇಡೀ ವಿಶ್ವದಲ್ಲಿ ವ್ಯಾಪಿಸಿರುವ ಸಮಾಜವಾಗಿದೆ. ಜನಸಂಖ್ಯೆಯಲ್ಲಿ ಕಡಿಮೆಯಿದ್ದರೂ ಪ್ರಭಾವ ಮಾತ್ರ ಬಹಳಷ್ಟಿದೆ ಎಂದರು.
ವಿಶ್ವಕರ್ಮ ಸಮಾಜವನ್ನು ಯಾರೂ ಹೊರಗಿಟ್ಟು ಬದುಕಲು ಸಾಧ್ಯವಿಲ್ಲ. ಆದ್ದರಿಂದ ಯಾವುದರಲ್ಲೂ ಕಡಿಮೆ ಎಂದು ಸಮಾಜದ ಬಂಧುಗಳು ಯೋಚಿಸಬಾರದು. ಬೇಡಿಕೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನವನ್ನು ಸರ್ಕಾರದ ವತಿಯಿಂದ ಮಾಡಲಾಗುವುದು. ಪ್ರಕೃತಿಗೆ ಹತ್ತಿರವಾದ ಸಮಾಜ ಇದಾಗಿದ್ದು, ಇದರ ಅಸ್ಮಿಕಥೆಯನ್ನು ಕಾಪಾಡಿಕೊಂಡು ಹೋಗುವುದು ಕೂಡ ದೊಡ್ಡ ಜವಾಬ್ದಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಕೆ. ಪಿ ನಂಜುಂಡಿ ಮಾತನಾಡಿ, ವಿಶ್ವಕರ್ಮ ಸಮಾಜ ಕೇವಲ ಜಾತಿಯಲ್ಲ, ಭಾರತ ದೇಶದ ಸಂಸ್ಕೃತಿಗೆ ವಿಶೇಷ ಕೊಡಿಗೆ ನೀಡಿರುವ ವಿಶೇಷ ಕುಲಾವಿದು. ಆದರೆ ನಮ್ಮ ಜನರಿಗೆ ರಾಜಕೀಯ ಇಚ್ಛಾಶಕ್ತಿಯಿಲ್ಲ. ನಮಗೂ ಒಳಮೀಸಲಾತಿ ಬೇಕಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಗಮನಹರಿಸಬೇಕು ಎಂದು ಹೇಳಿದರು.
ನಮ್ಮ ಸಮಾಜದ ಕುಶಲಕರ್ಮಿಗಳು ಸಾಕಷ್ಟು ಸಂಕಷ್ಟದಲ್ಲಿ ಇದ್ದಾರೆ. ವ್ಯಾಪಾರದಲ್ಲಿ ನಷ್ಟ ಅನುಭವಿಸಿ ಆರ್ಥಿಕ ದುಸ್ಥಿಯಲ್ಲಿದ್ದಾರೆ. ಆದ್ದರಿಂದ ಸರ್ಕಾರ ಅವರ ನೆರವಿಗೆ ಮುಂದಾಗಬೇಕು. ಜಿಬಿಎ ಚುನಾವಣೆಯಲ್ಲಿ ಕನಿಷ್ಠ ಸ್ಥಾನಗಳಿಗಾದರೂ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರು.
ನಮ್ಮ ಸಮಾಜದ ಶಾಲೆಗಳು ಮತ್ತು ಹಾಸ್ಟೆಲ್ ವ್ಯವಸ್ಥೆಗಳನ್ನು ಸರಿಪಡಿಸಲು ಸರ್ಕಾರ ಅನುದಾನವನ್ನು ಒದಗಿಸಬೇಕು. ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ವಿಶ್ವಕರ್ಮ ಸಮಾಜ ಸೇರಿದಂತೆ ಮೇಲೆತ್ತುವ ಕೆಲಸ ಸರ್ಕಾರ ತುರ್ತಾಗಿ ಕೈಗೊಳ್ಳಬೇಕು. ಇದು ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಗಳಾದರೆ ಮಾತ್ರ ಸಾಧ್ಯ ಎಂದರು.
ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ ಸೋಮಶೇಖರ್ ಮಾತನಾಡಿ, ಕೆ. ಪಿ ನಂಜುಂಡಿ ಕೇವಲ ವಿಶ್ವಕರ್ಮ ನಾಯಕನಲ್ಲ ಇಡೀ ಹಿಂದುಳಿದ ಸಮಾಜದ ನಾಯಕನಾಗಿದ್ದಾರೆ. ಸಾಕಷ್ಟು ಹೆಣ್ಣುಮಕ್ಕಳು ಅತ್ಯಾಚಾರ, ಅನಾಚಾರಕ್ಕೆ ಒಳಗಾದಾಗ ಎಷ್ಟೇ ಪ್ರಭಾವಿಗಳಿದ್ದರೂ ಅದನ್ನು ಲೆಕ್ಕಿಸದೇ ನ್ಯಾಯವನ್ನು ಕೊಡಿಸಿದ್ದಾರೆ. ಯಾವುದೇ ಜಾತಿಯೆನ್ನುವುದನ್ನು ಲೆಕ್ಕಿಸದೇ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರ ಹಮ್ಮಿಕೊಳುತ್ತಿರುವ ವ್ಯಕ್ತಿ ಅವರಾಗಿದ್ದಾರೆ ಎಂದು ಶ್ಲಾಘಿಸಿದರು.













