371ಜೆ ತಿದ್ದುಪಡಿಯಿಂದ ಪ್ರಗತಿಯ ಪಥದಲ್ಲಿ ಕಲ್ಯಾಣ ಕರ್ನಾಟಕ: ಈಶ್ವರ ಖಂಡ್ರೆ

WhatsApp
Telegram
Facebook
Twitter
LinkedIn

ಬೀದರ್: 371ಜೆ ಸಾಂವಿಧಾನಿಕ ತಿದ್ದುಪಡಿಯಿಂದಾಗಿ ಕಲ್ಯಾಣ ಕರ್ನಾಟಕ ಪ್ರಗತಿಯ ಪಥದಲ್ಲಿ ಸಾಗುತ್ತಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟರು.

ಭಾನುವಾರ ಬೀದರ್ ನ ಝೀರಾ ಕನ್ವೆನ್ಷನ್ ಹಾಲ್ ನಲ್ಲಿ ನಡೆದ 2 ದಿನಗಳ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಭಾಗದ ಅಭಿವೃದ್ಧಿಗೆ ಮಾಧ್ಯಮಗಳು ಸಲಹೆ ನೀಡುವ ಮೂಲಕ ಸಹಕಾರ ನೀಡಬೇಕು ಎಂದರು.

ಅಭಿವ್ಯಕ್ತಿ ಸ್ವಾತಂತ್ರ್ಯದ ನೆಲೆಗಟ್ಟಿನಲ್ಲಿ ಮಾಧ್ಯಮಗಳು ಕಾರ್ಯನಿರ್ವಹಿಸುತ್ತಿದ್ದು, ಪತ್ರಿಕಾ ಸ್ವಾತಂತ್ರ್ಯ ಪತ್ರಕರ್ತರಿಗೆ ಜೀವಾಳವಾಗಿದೆ. ಎಲ್ಲ ಕ್ಷೇತ್ರದಲ್ಲೂ ಸ್ಪರ್ಧೆ ಇದೆ. ಮಾಧ್ಯಮ ರಂಗದಲ್ಲೂ ಸ್ಪರ್ಧೆ ಇದೆ. ನಾವೇ ಮೊದಲು ಎಂಬ ಧಾವಂತದಲ್ಲಿ ಅಸತ್ಯವಾದ ಸುದ್ದಿಗಳು, ಆಧಾರ ರಹಿತ ಸುದ್ದಿಗಳು ಬಿತ್ತರವಾಗದಂತೆ ಮಾಧ್ಯಮಗಳು ಎಚ್ಚರ ವಹಿಸಬೇಕು ಎಂದು ಹೇಳಿದರು.

ಜನಾಭಿಪ್ರಾಯ ಮೂಡಿಸುವಲ್ಲಿ ಮಾಧ್ಯಮಗಳ ಪಾತ್ರ ಹಿರಿದಾಗಿದೆ. ಪತ್ರಕರ್ತರ ಮುಂದೆ ಸವಾಲುಗಳಿವೆ. ಕಷ್ಟದ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ರಕ್ಷಣೆ ನೀಡುವ ನೀಟ್ಟಿನಲ್ಲಿ ಸರ್ಕಾರ ಸ್ಪಂದಿಸಲಿದೆ ಎಂದರು.

ಮಾಧ್ಯಮಗಳು ಸಮಾಜದ ಓರೆ, ಕೋರೆಯನ್ನು ಎತ್ತಿ ತೋರಿಸುವುದರ ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದವು. 20-30 ವರ್ಷಗಳ  ಹಿಂದೆ ಪತ್ರಿಕೆಯಲ್ಲಿ ಯಾವುದಾದರೂ ಅಧಿಕಾರಿಯ, ಜನಪ್ರತಿನಿಧಿ ಭ್ರಷ್ಟಾಚಾರಿ ಎಂದು ಪ್ರಕಟವಾದರೆ ಅವರು ಕುಗ್ಗಿ ಹೋಗುತ್ತಿದ್ದರು. ಸಮಾಜ ಅವರನ್ನು ನಿಕೃಷ್ಟವಾಗಿ ಕಾಣುತ್ತಿತ್ತು. ಹೀಗಾಗಿ ಮಾಧ್ಯಮಗಳು ಅದೇ ಹಿಂದಿನ ವಿಶ್ವಾಸಾರ್ಹತೆ ಗಳಿಸಬೇಕು ಎಂದರು.

ಮಾಧ್ಯಮಗಳು ಸಮಾಜದ ನಾಲ್ಕನೇ ಅಂಗವಾಗಿವೆ. ರಾಜ್ಯದಲ್ಲಿ ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವನಾಗಿ ನಾನು ಕಾರ್ಯ ನಿರ್ವಹಿಸುತ್ತಿದ್ದೇನೆ. ಇಂದು ರಾಜ್ಯದಲ್ಲಿ ಪ್ರಕೃತಿ, ಪರಿಸರ ಹಾಗೂ ಅರಣ್ಯ ಉಳಿದಿದ್ದರೆ ಅದರಲ್ಲಿ ಮಾಧ್ಯಮಗಳ ಪಾತ್ರವೂ ಹಿರಿದಾಗಿದೆ ಎಂದರು.

ಈ ಸಮ್ಮೇಳನದಲ್ಲಿ ವಿವಿಧ ಗೋಷ್ಠಿಗಳು ಇಲ್ಲಿ ಯಶಸ್ವಿಯಾಗಿ ನಡೆದಿದ್ದು, ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮತ್ತು ಮಾಧ್ಯಮ ಕುರಿತಂತೆ ಹಾಗೂ ಗಡಿ ಭಾಗದ ಸಮಸ್ಯೆಗಳ ಬಗ್ಗೆ ಸಹ ಇಲ್ಲಿ ಚಿಂತನ ಮಂಥನ ಆಗಿರುವುದು ಸಂತೋಷದ ವಿಷಯವಾಗಿದೆ ಎಂದರು.

ಯಾವುದೇ ಮಾಧ್ಯಮಕ್ಕೆ ತನ್ನ ವಿಶ್ವಾಸಾರ್ಹತೆಯೇ ಜೀವಾಳ. ಅದೇ ರೀತಿ ಪತ್ರಕರ್ತರಿಗೆ ಪತ್ರಿಕಾ ಸ್ವಾತಂತ್ರ್ಯವೇ ಪ್ರಾಣವಾಯು. ನೀವೆಲ್ಲರೂ ಸಮಾಜದ ಒಳಿತಿಗಾಗಿ ಕೆಲಸ ಮಾಡಿ, ಸಮಾಜಕ್ಕೆ ಹಿತವಾದ ಸುದ್ದಿ, ವರದಿ ಪ್ರಕಟಿಸಬೇಕು ಎಂದು ಸಚಿವ ಈಶ್ವರ್ ಖಂಡ್ರೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್, ಶಾಸಕರುಗಳಾದ ಡಾ. ಶೈಲೇಂದ್ರ ಬೆಲ್ದಾಳೆ, ಶರಣು ಶಲಗಾರ್, ಸಿದ್ದು ಪಾಟೀಲ್, ಎಂ.ಜಿ.ಮೂಳೆ, ಮಾಜಿ ಶಾಸಕರಾದ ಬಂಡೆಪ್ಪ ಖಾಶೆಂಪೂರ್, ಕೆ.ಯು.ಡಬ್ಲ್ಯು.ಜೆ. ಅಧ್ಯಕ್ಷ  ಶಿವಾನಂದ ತಗಡೂರ್ ಮತ್ತಿತರರು ಪಾಲ್ಗೊಂಡಿದ್ದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon