ಬೆಂಗಳೂರು: ಹೋಮಿಯೋಪತಿಯಲ್ಲಿ ಇನ್ನೂ ಹೆಚ್ಚಿನ ಸಂಶೋಧನೆ, ಪ್ರಯೋಗ ನಡೆಯಬೇಕಿದೆ. ಈ ಪದ್ಧತಿಯ ವೈದ್ಯರ ಯೋಚನೆ ಮತ್ತು ಯೋಜನೆ ಮಾಡಬೇಕಾದ ಅವಶ್ಯಕತೆ ಇದೆ. ಜನರಲ್ಲಿ ನಂಬುಗೆ ಮೂಡುವುದು ಬಹಳ ಮುಖ್ಯ. ಹಾಗಾದಾಗ ಮಾತ್ರ ಸರ್ಕಾರ ಇನ್ನೂ ಹೆಚ್ಚಿನ ಕಾರ್ಯಯೋಜನೆ ಮಾಡಲು ಸಾಧ್ಯ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಭಾನುವಾರ ಕರ್ನಾಟಕ ಹೋಮಿಯೋಪಥಿಕ್ ಅಸೋಸಿಯೇಷನ್ ವತಿಯಿಂದ ಐ.ಐ.ಎಸ್.ಸಿಯ ಎ.ವಿ ರವಣ ರಾವ್ ಸಭಾಂಗಣದಲ್ಲಿ ವಿಶ್ವ ಹೋಮಿಯೋಪತಿ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಹೋಮಿಯೋಪತಿಗೆ 200 ವರ್ಷಗಳ ಇತಿಹಾಸವಿದೆ. ಇದು ಕೂಡ ಒಂದು ವೈಜ್ಞಾನಿಕ ವೈದ್ಯಕೀಯ ಪದ್ದತಿಯಾಗಿದೆ ಎಂದರು.
ಇದು ಸುಲಭವಾದ ಚಿಕಿತ್ಸಾ ಪದ್ಧತಿಯಾಗಿದ್ದು, ದೇಹವನ್ನು ಬಲಿಷ್ಠಗೊಳಿಸುವ ಒಂದು ವಿಧಾನವಾಗಿದೆ. ಸರ್ಕಾರದ ವತಿಯಿಂದ ಸುಮಾರು 60-70 ಡಿಸ್ಪೆನ್ಸರಿ ಇದೆ. ಬೋರ್ಡ್ ಚುನಾವಣೆ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳ ಬಗ್ಗೆ ಮನವಿ ನೀಡಲಾಗಿದೆ. ಸರ್ಕಾರ ಮುಕ್ತ ಮಾತುಕತೆಗೆ ಸಿದ್ದವಿದೆ. ಕೆಲವೇ ದಿನಗಳಲ್ಲಿ ಹೋಮಿಯೋಪತಿ ಮೆಡಿಕಲ್ ಕಾಲೇಜ್ ನಿರ್ಮಾಣವೂ ಸೇರಿದಂತೆ ಹೋಮಿಯೋಪತಿಗೆ ಚಿಕಿತ್ಸೆಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ವಿಸ್ತೃತವಾಗಿ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ.ಲಕ್ಷ್ಮೀಕಾಂತ ನಂದಾ, ಆಯುಷ್ ಆಯುಕ್ತ ಡಾ. ಸುನಿಲ್ ಪನ್ವರ್, ಕರ್ನಾಟಕ ಹೋಮಿಯೋಪತಿ ಅಸೋಸಿಯೇಷನ್ ಪದಾದಿಕಾರಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.















