ಬೆಂಗಳೂರು: ಮದ್ಯ ಮಾರಾಟಕ್ಕೆ ಪರವಾನಗಿ ನೀಡಲು 25 ಲಕ್ಷ ಲಂಚ ಪಡೆದ ಆರೋಪದಡಿ ಬಂಧಿತರಾಗಿರುವ ಅಬಕಾರಿ ಉಪ ಆಯುಕ್ತ ಜಗದೀಶ್ ನಾಯ್ಕ್ ಹಾಗೂ ಅಧೀಕ್ಷಕ ಕೆ.ಎಂ.ತಮ್ಮಣ್ಣ ಅವರುಗಳನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಾಮವಳಿ 1957ರಂತೆ ಅಬಕಾರಿ ಉಪ ಆಯುಕ್ತ ಜಗದೀಶ್ ನಾಯ್ಕ್ ಹಾಗೂ ಅಧೀಕ್ಷಕ ತಮ್ಮಣ್ಣ ರನ್ನು ಮುಂದಿನ ಆದೇಶವರೆಗೆ ವಿಚಾರಣೆಗೆ ಕಾಯ್ದಿರಿಸಿ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಈ ಆದೇಶವನ್ನು ಆರ್ಥಿಕ ಇಲಾಖೆ (ಅಬಕಾರಿ) ಅಧೀನ ಕಾರ್ಯದರ್ಶಿ ಭೀಮಪ್ಪ ಪ.ಅಜೂರ್ ಹೊರಡಿಸಿದ್ದಾರೆ.
ಅಮಾನತು ಅವಧಿಯಲ್ಲಿ ಜಗದೀಶ್ ನಾಯ್ಕ್ ರನ್ನು ಶಿವಮೊಗ್ಗ ಹಾಗೂ ಕೆ.ಎಂ.ತಮ್ಮಣ್ಣ ರನ್ನು ತುಮಕೂರಿನ ಕೆ.ಎಸ್.ಬಿ.ಎಲ್ ಡಿಪೋಗೆ ವರ್ಗಾಯಿಸಲಾಗಿದೆ. ಸಕ್ಷಮ ಪ್ರಾಧಿಕಾರ ಅನುಮತಿವಿಲ್ಲದೆ ಕೇಂದ್ರ ಸ್ಥಾನದಿಂದ ಬೇರೆ ಕಡೆ ಹೋಗುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.















