ಬೆಂಗಳೂರು: ಅಂಗಾಂಗ ದಾನದ ಬಗ್ಗೆ ಇರುವ ಮೂಢನಂಬಿಕೆ ಬಿಟ್ಟು, ದಾನ ಮಾಡಿ ರೋಗಿಗಳಿಗೆ ಹೊಸ ಜೀವನ ಕಲ್ಪಿಸಿಕೊಡಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದರು.
ಗುರುವಾರ ರಾಮಯ್ಯ ಮೆಮೋರಿಯಲ್ ಆಸ್ಪತ್ರೆ ಆಯೋಜಿಸಿದ್ದ ಅಂಗಾಂಗ ದಾನ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಂಗಾಂಗದ ಅವಶ್ಯಕತೆ ಬಹಳಷ್ಟು ಇದೆ. ತಮ್ಮ ಮನೆಯವರೇ ಮನೆಯ ಸದಸ್ಯರಿಗೆ ಅಂಗಾಂಗ ದಾನ ಮಾಡುವುದಕ್ಕೆ ಮುಂದೆ ಬರುವುದಿಲ್ಲ. ಈ ರೀತಿಯ ಪರಿಸ್ಥಿತಿ ಇದ್ದರೆ, ಕೊರತೆ ನೀಗುವುದಿಲ್ಲ. ಅಂಗಾಂಗ ಮಾಡಿದರೆ, ಮುಂದೆ ಮೋಕ್ಷ ಸಿಗುವುದಿಲ್ಲ ಎಂಬ ಮೂಢನಂಬಿಕೆ ಬಿಟ್ಟು, ದಾನ ಮಾಡುವುದಕ್ಕೆ ಮುಂದೆ ಬನ್ನಿ. ಬೇರೊಬ್ಬರ ಜೀವಕ್ಕೆ ಹೊಸ ಜೀವನ ನೀಡಿ ಎಂದರು.
ಅಂಗಾಂಗ ದಾನ ಮಾಡುವವರಿಗೆ ಸರಕಾರದಿಂದ ಸಹಾಯ ಧನ ನೀಡಲು ಪ್ರಯತ್ನ ಮಾಡುತ್ತೇನೆ. ಇದೇ ವೇಳೆಯಲ್ಲಿ ಅಂಗಾಂಗ ದಾನ ಮಾಡಿದ ವ್ಯಕ್ತಿ ಮೃತಪಟ್ಟ ವೇಳೆಯಲ್ಲಿ ಅವರ ಅಂತ್ಯಸಂಸ್ಕಾರ ಮಾಡಲು ಬೇಕಾದ ಸಹಾಯ ಧನವನ್ನು ನೀಡುತ್ತಿವೆ. ಮನುಷ್ಯರಿಗೆ ಜೀವ ನೀಡಲು ದೇವರಿಗೆ ಮಾತ್ರ ಶಕ್ತಿ ಇದೆ. ಅದೇ ಜನರು ಸಾಯುವ ಸ್ಥಿತಿ ತಲುಪಿದಾಗ ಅವರನ್ನು ಉಳಿಸುವ ಶಕ್ತಿಯನ್ನು ವೈದ್ಯರಿಗೆ ನೀಡಿದ್ದಾನೆ. ಅದನ್ನು ಅರಿತು ವೈದ್ಯರು ಕೆಲಸ ಮಾಡಬೇಕು. ನಾವು ಅಂಗಾಂಗ ಕಸಿಗಾಗಿ ಪ್ರತ್ಯೇಕ ಆಸ್ಪತ್ರೆ ಮತ್ತು ಯೋಜನೆ ರೂಪಿಸಿದ್ದೇವೆ. ಆದರೂ, ಜನರು ಅಂಗಾಂಗ ದಾನ ಮಾಡುವುದಕ್ಕೆ ಮುಂದೆ ಬರುತ್ತಿಲ್ಲ ಎಂದರು.
ಅಂಗಾಂಗ ಕಸಿ ಮಾಡಿಸಿಕೊಂಡವರಿಗೆ ಕೇವಲ ಒಂದು ವರ್ಷ ಮಾತ್ರ ಔಷಧಿಗಳನ್ನು ನೀಡುತ್ತಿದ್ದರು. ಇದು ಮುಗಿದ ಮೇಲೆ ರೋಗಿಗಳು ಔಷಧಿಗಳನ್ನು ಖರೀದಿಸಲು ಕಷ್ಟಪಡಬೇಕಾಗಿತ್ತು. ನಾನು ಈ ವಿಷಯವನ್ನು ಕ್ಯಾಬಿನೆಟ್ ನಲ್ಲಿ ತಂದು ಜೀವನ ಪೂರ್ತಿ ಉಚಿತವಾಗಿ ಔಷಧಿ ದೊರೆಯುವಂತೆ ಮಾಡಿದ್ದೇನೆ ಎಂದರು.
ರಾಮಯ್ಯ ಮೆಮೋರಿಯಲ್ ಆಸ್ಪತ್ರೆ ಮುಖ್ಯ ಕಾರ್ಯನಿರ್ವಾಹಕ ಡಾ.ಎಸ್.ಸಿ.ನಾಗೇಂದ್ರ ಸ್ವಾಮಿ ಮಾತನಾಡಿ, ಅಂಗಾಂಗ ಕಸಿಯನ್ನು ಜೀವಂತವಾಗಿರುವಾಗ ಮತ್ತು ಮೃತರಾದ ವೇಳೆಯಲ್ಲಿಯೂ ಮಾಡಬಹುದು. ಆದರೆ, ಜನರಿಗೆ ಅಂಗಾಂಗ ದಾನ ಮಾಡುವ ಮನೋಭಾವವಿರಬೇಕು. ಅಂಗಾಂಗ ಲಭ್ಯತೆ ಕಡಿಮೆ ಇದ್ದು, ಇದರ ಅವಲಂಬನೆಯ ಪ್ರಮಾಣ ಹೆಚ್ಚಿದೆ. ನಮ್ಮ ಅಭಿಯಾನದ ಮೂಲಕ ಹೆಚ್ಚಿನ ಜನರು ಅಂಗಾಂಗ ದಾನ ಮಾಡಲು ಪ್ರತಿಜ್ಞೆ ಮಾಡಬೇಕಿದೆ. ಇದರಿಂದ ಜನರ ಜೀವ ಉಳಿಸಬೇಕಿದೆ ಎಂದರು.
ಗೋಕುಲ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ ಡಾ.ಎಂ.ಆರ್.ಜಯರಾಂ ಮಾತನಾಡಿ, ಅಂಗಾಂಗ ದಾನವು ಮತ್ತೊಬ್ಬ ವ್ಯಕ್ತಿಗೆ ಜೀವ ನೀಡುವಷ್ಟೇ ಸಮನಾಗಿದ್ದು, ಇದೊಂದು ಶ್ರೇಷ್ಠ ದಾನವಾಗಿದೆ. ನಾವು ಜನರನ್ನು ಅಂಗಾಂಗ ದಾನ ಮಾಡುವುದಕ್ಕೆ ಪ್ರೇರೇಪಿಸಲು ಈ ಜಾಗೃತಿ ಕಾರ್ಯಕ್ರಮ ನಡೆಸಿದ್ದೇವೆ. ಇದರಿಂದ ಜನರು ಪ್ರೇರಣೆ ಪಡೆದು, ದಾನ ಮಾಡಲು ಮುಂದಾಗಬೇಕು. ಆ ಮೂಲಕ ಜನರ ಆರೋಗ್ಯ ಜೀವನ ಸುಧಾರಿಸಬೇಕು ಎಂದು ಕರೆ ನೀಡಿದರು.















