ರಾಜ್ಯದಲ್ಲಿ ತಮಿಳುನಾಡು ಮಾದರಿ ಶಿಕ್ಷಕರ ನೇಮಕ ವ್ಯವಸ್ಥೆ ಬರಲಿ: ಬಸವರಾಜ ಬೊಮ್ಮಾಯಿ

WhatsApp
Telegram
Facebook
Twitter
LinkedIn

ಹಾವೇರಿ: ಒಬ್ಬ ಶಿಕ್ಷಕರು ನಿವೃತ್ತರಾಗುವ ಮುಂಚಿನ ವರ್ಷ ಇನ್ನೊಬ್ಬ ಶಿಕ್ಷಕರ ನೇಮಕ ಮಾಡುವ ತಮಿಳು ನಾಡು ಮಾದರಿಯಲ್ಲಿ ರಾಜ್ಯದಲ್ಲಿಯೂ ಶಿಕ್ಷಕರ ನೇಮಕಾತಿ ವ್ಯವಸ್ಥೆ ಜಾರಿಗೆ ಬಂದರೆ ಶಿಕ್ಷಕರ ಹುದ್ದೆ ಖಾಲಿ ಇರುವುದನ್ನು ತಪ್ಪಿಸಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಭಾನುವಾರ ಹಾವೇರಿ ಜಿಲ್ಲೆಯ ಹಾವೇರಿ ತಾಲೂಕಿನ ಕಾಟೇನಹಳ್ಳಿ ಗ್ರಾಮದ ಡಾ: ಸರ್ವಪಲ್ಲಿ ರಾಧಾಕೃಷ್ಣನ್ ಹಿರಿಯ ಪ್ರಾಥಮಿಕ ಶಾಲೆಯ 21 ನೇಯ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಸರಸ್ವತಿ ಪೂಜೆ ಹಾಗೂ 7 ನೇಯ ವರ್ಷದ ವಿದ್ಯಾರ್ಥಿಗಳಿಗೆ ಬಿಳ್ಕೊಡುಗೆ ಮತ್ತು ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. ಇಡೀ ವರ್ಷ ವಿದ್ಯಾರ್ಜನೆ ಮಾಡಿ ಪಾಠ ಕಲಿತು ಆಟ ಆಡಿ ಈಗ ಸ್ನೇಹಿತರಾಗಿ ಒಬ್ಬರಿಗೊಬ್ಬರು ಬೆರೆತು ನಿಮ್ಮ ಕಲೆ ಸಂಸ್ಕೃತಿ ಹಾಗೂ ವಿದ್ಯೆಯ ಪ್ರತಿಭೆಯನ್ನು ತೋರಿಸಲು ತಾವೆಲ್ಲ ಸೇರಿದ್ದೀರಿ, ಮಕ್ಕಳ ಪ್ರತಿಭೆ ನೋಡಲು ಪಾಲಕರು ಸೇರಿದ್ದೀರಿ. ಇದು ನಿಜವಾದ ಸಂಗಮವಾಗಿದೆ ಎಂದರು.

ಮಕ್ಕಳನ್ನು ದೇವರೆಂದು ಕರೆಯುತ್ತಾರೆ. ಅವರ ಶ್ರೇಯೋಭಿವೃದ್ಧಿಗೆ ಎಲ್ಲರೂ ಶ್ರಮಿಸುತ್ತೇವೆ. ತಾಯಿ ಮೊದಲ ಗುರು, ಆ ಮೇಲೆ ಶಾಲೆಯಲ್ಲಿ ಕಲಿಸುವ ಗುರುಗಳು ಶಿಕ್ಷಣ ನೀಡುತ್ತಾರೆ. ತಾಯಿ ಸಂಸ್ಕಾರ ಕೊಡುತ್ತಾಳೆ, ಗುರು ಶಿಕ್ಷಣ ನೀಡುತ್ತಾರೆ. ಸಮಾಜ ಬದುಕು ಕೊಡುತ್ತದೆ. ಇದೆಲ್ಲವನ್ನು ನಾವು ಕಲಿಯಬೇಕು ಎಂದು ಹೇಳಿದರು.

ಪಾಠ ಪರೀಕ್ಷೆ ನಿರಂತರ:

ಒಮ್ಮೆ ವಿದ್ಯಾರ್ಥಿಯಾದರೆ ಜೀವನದ ಕೊನೆವರೆಗೂ ವಿದ್ಯಾರ್ಥಿಗಳು, ಶಾಲೆಯಲ್ಲಿ ಪಾಠ ಮಾಡಿ ನಂತರ ಪರೀಕ್ಷೆ ಆದರೆ, ಜೀವನದಲ್ಲಿ ಮೊದಲು ಪರೀಕ್ಷೆ ಆಮೇಲೆ ಪಾಠ ಹೀಗಾಗಿ ಪಾಠ ಪರೀಕ್ಷೆ ನಿರಂತರವಾಗಿ ನಡೆಯುವ ಪ್ರಕ್ರಿಯೆ. ಮಕ್ಕಳು ಜ್ಞಾನದ ಆಯಾಮಗಳನ್ನು ತೆರೆದಿಡಬೇಕು. ಕಣ್ಣು, ಮನಸ್ಸು, ಬುದ್ದಿ ಶಕ್ತಿ, ಶ್ರಾವಣ ಶಕ್ತಿಯನ್ನು ತೆರೆದಿಡಬೇಕು. ಆಗ ಎಲ್ಲ ದೃಷ್ಟಿಯಿಂದ ಜ್ಞಾನ ಪಡೆಯಲು ಸಾಧ್ಯ. ಯಾರು ಜ್ಞಾನವಂತರಾಗುತ್ತಾರೆ ಅವರು ಬದುಕಿಯಲ್ಲಿ ಯಶಸ್ವಿಯಾಗುತ್ತಾರೆ. ಗುರುಗಳು ಪಾಠ ಮಾಡಿದರೆ ಯಾಕೆ, ಏನು, ಎಲ್ಲಿ, ಎಷ್ಟು ಎನ್ನುವ ಪ್ರಶ್ನೆಗಳನ್ನು ಕೇಳಬೇಕು, ಪ್ರಶ್ನೆಗಳನ್ನು ಕೇಳಿದರೆ ಬುದ್ದಿ ಶಕ್ತಿ ಬೆಳೆಯುತ್ತದೆ. ತರ್ಕ. ಬದ್ಧವಾದ ಚಿಂತನೆ ಬರುತ್ತದೆ ಎಂದು ತಿಳಿಸಿದರು.

ನಮ್ಮ ದೇಶದಲ್ಲಿ ತದ್ದಿರುದ್ಧ ಶೈಲಿ:

ಶಾಲೆಯಲ್ಲಿ ಪರೀಕ್ಷೆ ಕೊಟ್ಟಾಗ ಅದು ಮಕ್ಕಳ ಪರೀಕ್ಷೆಯಲ್ಲ ಅದು ಗುರುಗಳು ಹೇಗೆ ಕಲಿಸಿದ್ದಾರೆ ಎನ್ನುವ ಪರೀಕ್ಷೆ. ಹೀಗಾಗಿ ಶಿಕ್ಷಕರು ಪ್ರಾಮಾಣಿಕವಾಗಿ ಮಕ್ಕಳ ಹೃದಯ ಮಟ್ಟುವ ಹಾಗೆ ಕಲಿಸಬೇಕು. ಪ್ರಶ್ನೆ ಕೇಳುವ ಹಕ್ಕು ಮಕ್ಕಳಿಗಿದೆ. ಆದರೆ, ನಮ್ಮ ದೇಶದಲ್ಲಿ ತದ್ದಿರುದ್ಧವಿದೆ. ಮಕ್ಕಳು ಪ್ರಶ್ನೆ ಕೇಳುವ ಬದಲು ಶಿಕ್ಷಕರು ಪ್ರಶ್ನೆ ಕೇಳುತ್ತಾರೆ ಎಂದರು.

ಎಲ್ಲೆಡೆ ಕೆಪಿಎಸ್ ಶಾಲೆಗಳು ಬೇಕು:

ಗಾಮಾಂತರ ಪ್ರದೇಶದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕು. ಗ್ರಾಮೀಣ ಹಾಗೂ ನಗರ ಪ್ರದೇಶದ ಮಕ್ಕಳ ಶಿಕ್ಷಣದಲ್ಲಿ ಏರುಪೇರಿದೆ, ಇದು ನಮ್ಮ ರಾಜ್ಯದ ದೇಶದ ಸವಾಲು, ಐದನೇ ತರಗತಿವರೆಗೂ ಕನ್ನಡ ನಂತರ ಇಂಗ್ಲಿಷ್ ಕಲಿಯಬೇಕು, ಪಿಯುಸಿ ನಂತರ ಎಂಜನೀಯರಿಂಗ್, ಮೆಡಿಕಲ್ ಹೋಗಲು ಇಂಗ್ಲಿಷ್ ಕಲಿಯಬೇಕು. ಇಂಗ್ಲಿಷ್ ಕಲಿತ ಮಕ್ಕಳೊಂದಿಗೆ ಗ್ರಾಮೀಣ ಮಕ್ಕಳು ಪೈಪೋಟಿ ಮಾಡಲು ಹೇಗೆ ಸಾಧ್ಯ ನಮ್ಮ ರಾಜ್ಯದ ಸಚಿವರು ಇದಕ್ಕೆ ಉತ್ತರ ಕೊಡಬೇಕು. ಹೀಗಾಗಿ ಎಲ್ಲ ಕಡೆಯೂ ಕೆಪಿಎಸ್ ಶಾಲೆಗಳು ಬೇಕು ಎನ್ನುವ ಬೇಡಿಕೆ ಇದೆ ಎಂದು ತಿಳಿಸಿದರು.

ಮಠಗಳಿಂದ ಅರಿವಿನ ದಾಸೋಹ:

ನಮ್ಮ ರಾಜ್ಯದಲ್ಲಿ ಶೇ 65 ರಷ್ಟು ಶಾಲೆಗಳು ಹಳೆ ಮೈಸೂರು ಭಾಗದಲ್ಲಿವೆ. ಶೇ 35 ರಷ್ಟು ಶಾಲೆಗಳು ಉತ್ತರ ಕರ್ನಾಟಕದಲ್ಲಿವೆ. ಸುದೈವವೆಂದರೆ ನಮ್ಮ ಮಠಗಳು, ಶಿಕ್ಷಣ ಸಂಸ್ಥೆಗಳು ಶಿಕ್ಷಣ ಜ್ಞಾನ ನೀಡುತ್ತಿವೆ. ಅನ್ನ ದಾಸೋಹ, ಅಕ್ಷರ ದಾಸೋಹ ಅರಿವಿನ ದಾಸೋಹವನ್ನು ಮಠಗಳು ಮಾಡುತ್ತಿವೆ. ಸರ್ಕಾರಿ ಶಾಲೆಗಳನ್ನು ಗಟ್ಟಿಗೊಳಿಸಬೇಕು. ಅಲ್ಲಿ ಮಕ್ಕಳು ಶಾಲೆಗೆ ಬರುವಂತೆ ನೋಡಿಕೊಳ್ಳಬೇಕು. ಶಿಕ್ಷಕರು ಇರುವಂತೆ ನೋಡಿಕೊಳ್ಳಬೇಕು. ನಾನು ಸಿಎಂ ಆಗಿದ್ದಾಗ 30 ಸಾವಿರ ಶಾಲಾ ಕಟ್ಟಡ ನಿರ್ಮಾಣ ಮಾಡಲು ತೀರ್ಮಾನ ಮಾಡಿದ್ದೆವು. ಮೊದಲ ವರ್ಷ 9 ಸಾವಿರ ಶಾಲಾ ಕಟ್ಟಡ ನಿರ್ಮಾಣ ಮಾಡಿದ್ದೇವೆ. ಅದರಿಂದ ಬರುವಂತಹ ದಿನಗಳಲ್ಲಿ ಮಕ್ಕಳು ಮಳೆ ಬಿಸಿಲಿನಲ್ಲಿ ಪಾಠ ಕಲಿಯುವುದು ತಪ್ಪುತ್ತದೆ. ನಾವು 15 ಸಾವಿರ ಶಿಕ್ಷಕರ ನೇಮಕಕ್ಕೆ ಆದೇಶ ಮಾಡಿದ್ದೆವು. ಅದು ಮುಂದುವರೆಯಬೇಕು. ತಮಿಳು ನಾಡಿನಲ್ಲಿ ಒಬ್ಬ ಶಿಕ್ಷಕರು ನಿವೃತ್ತರಾಗುತ್ತಾರೆ ಎಂದರೆ ಅದಕ್ಕೂ ಮೊದಲಿನ ವರ್ಷವೇ ಶಿಕ್ಷಕರ ನೇಮಕ ಮಾಡಿ ಒಂದು ವರ್ಷ ತರಬೇತಿ ನೀಡುತ್ತಾರೆ. ಆ ವ್ಯವಸ್ಥೆ ಇಲ್ಲಿಯೂ ಜಾರಿಗೆ ಬರಬೇಕು. ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಬೇಡಿಕೆ ನೀಗಿಸುವ ಕೆಲಸ ಮಾಡಿದಾಗ ನಮ್ಮ ಕನ್ನಡದ ಮಕ್ಕಳ ವಿಶ್ವದ ಯಾವುದೇ ಭಾಗದಲ್ಲಿ ಹೋದರೂ ಯಶಸ್ವಿಯಾಗುತ್ತಾರೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಮ.ನಿ.ಪ್ರ ಸದಾಶಿವ ಮಹಾಸ್ವಾಮಿಗಳು, ಹುಕ್ಕೇರಿಮಠ ಹಾವೇರಿ ಶ್ರೀಗಳು ಸಾನಿಧ್ಯ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಬಸವರಾಜ ಅರಬಗೊಂಡ, ಮುಖಂಡರುಗಳಾದ ನಾಗೇಂದ್ರ ಕಟಕೋಳ, ದರ್ಶನ ಲಮಾಣಿ, ವೆಂಕಟೇಶ ನಾರಾಯಣಿ, ಎಂ.ಎಸ್.ಪಾಟೀಲ್, ಡಾ. ರಾಮ್ ಮೋಹನ ರಾವ್, ಸೇರಿದಂತೆ ಶಾಲಾ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon