ಬೆಂಗಳೂರು: ಅನುಮಾನಾಸ್ಪದವಾಗಿ ಯುವತಿ ಮೃತದೇಹ ಪತ್ತೆಯಾದ ಘಟನೆ ಘಟನೆ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮುನಿಕೃಷ್ಣಪ್ಪ ಲೇಔಟ್ನಲ್ಲಿ ಘಟನೆ ಸಂಭವಿಸಿದ್ದು, ಜಾರ್ಖಂಡ್ ಮೂಲದ ಪೂಜಾ ದತ್ತಾ (34) ಮೃತ ಯುವತಿ ಎನ್ನುವ ಮಾಹಿತಿ ಹೊರಬಿದ್ದಿದೆ.
ಏಪ್ರಿಲ್ 27ರಂದು ಸಂಜೆ ವಾಸವಿದ್ದ ರೂಮ್ನಲ್ಲಿ ವಿವಸ್ತ್ರವಾಗಿ, ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಘಟನಾ ಸ್ಥಳಕ್ಕೆ ಆಡುಗೋಡಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನೆಡೆಸಿದ್ದಾರೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪೂಜಾ ಕಳೆದ ಮೂರು ವರ್ಷಗಳಿಂದ ಮುನಿಕೃಷ್ಣಪ್ಪ ಲೇಔಟ್ನಲ್ಲಿ ರೂಮ್ ಬಾಡಿಗೆಗೆ ಪಡೆದು ವಾಸವಿದ್ದಳು. ಈ ಹಿಂದೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತಿದ್ದ ಪೂಜಾ, ಸದ್ಯ ಎಲ್ಲಿಯೂ ಕೆಲಸ ಮಾಡುತ್ತಿರಲಿಲ್ಲ. ಪ್ರಾಥಮಿಕ ಪರಿಶೀಲನೆ ವೇಳೆ ರೂಮ್ನಲ್ಲಿ ಖಾಸಗಿ ಕಂಪನಿಯೊಂದರ ಐ.ಡಿ ಕಾರ್ಡ್, ಹರಿದುಹಾಕಿರುವ ಕೆಲವು ಪೇಪರ್ ಚೂರುಗಳು ಪತ್ತೆಯಾಗಿವೆ.
ರೂಮ್ನಿಂದ ವಾಸನೆ ಬರುತ್ತಿದ್ದುದನ್ನ ಗಮನಿಸಿದ್ದ ಅಕ್ಕಪಕ್ಕದ ನಿವಾಸಿಗಳು ಮಾಹಿತಿ ನೀಡಿದ್ದರನ್ವಯ ಬಾಗಿಲು ತೆರೆದು ನೋಡಿದಾಗ ಮೃತದೇಹ ಪತ್ತೆಯಾಗಿದೆ. ಎರಡ್ಮೂರು ದಿನಗಳ ಹಿಂದೆ ಸಾವನ್ನಪ್ಪಿರುವ ಸಾಧ್ಯತೆಯಿದೆ.ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅವಿವಾಹಿತೆಯಾಗಿದ್ದ ಪೂಜಾ 3 ವರ್ಷಗಳಿಂದ ಬಾಡಿಗೆಗೆ ವಾಸವಿದ್ದಳು. ಹೆಚ್ಚಾಗಿ ಹಿಂದಿಯಲ್ಲೇ ಮಾತನಾಡುತ್ತಿದ್ದಳು. ಆಕೆಯನ್ನು ಭೇಟಿಯಾಗಲು ಆಗಾಗ ಓರ್ವ ಯುವಕ ಮನೆಗೆ ಬಂದು ಹೋಗುತ್ತಿದ್ದ. ಅವನೊಂದಿಗೆ ಪೂಜಾ ಸದಾ ಜಗಳವಾಡುತ್ತಿದ್ದಳು. ಆದರೆ ಆ ಜಗಳಕ್ಕೆ ಕಾರಣವೇನು ಎಂದು ತಿಳಿದಿಲ್ಲ. ಕಳೆದ ಗುರುವಾರ ದಿನಸಿ ಸಾಮಗ್ರಿ ತರಲು ಬಂದಾಗ ಕೊನೆಯದಾಗಿ ಪೂಜಾಳನ್ನು ನೋಡಿದ್ದೆ. ನಿನ್ನೆ ಸಂಜೆ ಮನೆಯಿಂದ ತೀವ್ರ ದುರ್ನಾತ ಬರುತ್ತಿದ್ದುದರಿಂದ ಅಕ್ಕಪಕ್ಕದ ಮನೆಯವರು ವಿಷಯ ತಿಳಿಸಿದ್ದರು. ತಕ್ಷಣ ಪೊಲೀಸರ ಸಮ್ಮುಖದಲ್ಲಿ ಬಾಗಿಲು ತೆರೆದು ನೋಡಿದಾಗ, ಪೂಜಾ ಬೆತ್ತಲಾಗಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಮನೆಯಲ್ಲಿ ಬಟ್ಟೆಗಳೆಲ್ಲ ಚೆಲ್ಲಾಪಿಲ್ಲಿಯಾಗಿದ್ದು, ಫ್ಯಾನ್ ಸಹ ಚಾಲನೆಯಲ್ಲಿತ್ತು ಎಂದು ರೂಮ್ನ ಮಾಲಕಿ ಜಾನಕಮ್ಮ ತಿಳಿಸಿದ್ದಾರೆ.













